ಶಿರಸಿ: ಅರಣ್ಯ ಹಕ್ಕು ಕಾಯಿದೆಯಲ್ಲಿ ಪಾರಂಪರಿಕ ಅರಣ್ಯವಾಸಿಗಳಿಗೆ ಭೂಮಿ ಹಕ್ಕಿಗೆ ಸಂಬಂಧಿಸಿ ವೈಯಕ್ತಿಕ ಮೂರು ತಲೆಮಾರಿನ ದಾಖಲೆ ಅವಶ್ಯಕತೆ ಇಲ್ಲ. ಈ ಕುರಿತು ಅರಣ್ಯ ಹಕ್ಕು ಕಾಯಿದೆ, ಕೇಂದ್ರ ಸರ್ಕಾರದ ಸುತ್ತೋಲೆ ಮತ್ತು ನ್ಯಾಯಾಲಯದ ಆದೇಶಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲ್ಪಟ್ಟಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಹಕ್ಕು ಕಾಯಿದೆಯ 13ನೇ ನಿಯಮದಲ್ಲಿ ಉಲ್ಲೇಖಿಸಲ್ಪಟ್ಟ ಸಾಂದರ್ಭಿಕ ಸಾಕ್ಷ್ಯ ಪರಿಗಣಿಸತಕ್ಕದ್ದು. ಕ್ಲೇಮಿನ ಪರಿಗಣನೆಗಾಗಿ ನಿರ್ದಿಷ್ಟ ದಾಖಲಾತಿ ಸಾಕ್ಷ್ಯ ಆಧರಿಸಲು ಒತ್ತಾಯಿಸತಕ್ಕದ್ದಲ್ಲ ಎಂದು ಸೆಪ್ಟೆಂಬರ ೬ ೨೦೧೨ರಂದು ಮೂಲ ಕಾನೂನಿಗೆ ತಿದ್ದುಪಡಿಯಾಗಿರುವುದು ಹಾಗೂ ಪಾರಂಪರಿಕ ಅರಣ್ಯವಾಸಿಗಳಿಗೆ ಮೂರು ತಲೆಮಾರಿನ ಅಂದರೆ ೭೫ ವರ್ಷದ ವೈಯಕ್ತಿಕ ಸಾಗುವಳಿಯನ್ನು ಅರಣ್ಯವಾಸಿ ಪುರಾವೆಗೊಳಿಸಬೇಕೇಂದು ತಪ್ಪಾಗಿ ಅರ್ಥೈಸಿಲಾಗುತ್ತಿದೆ. ಆದರೆ, ಪಾರಂಪರಿಕ ಅರಣ್ಯವಾಸಿಗೆ ಆ ಪ್ರದೇಶದ ಜನವಸತಿಯ ದಾಖಲೆ ನೀಡುವುದು ಅವಶ್ಯ ಎಂದು ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯ ಸೆ.೧೨,೨೦೧೪ ರಂದು ವ್ಯಾಖ್ಯಾನಿಸಿದೆ ಎಂದು ಹೇಳಿದರು.
ನ್ಯಾಯಾಲಯದ ಆದೇಶ:ನಿರ್ದಿಷ್ಟವಾದ ವೈಯಕ್ತಿಕ ದಾಖಲೆಯ ನಮೂನೆ ಒತ್ತಾಯಿಸುವುದು ಕಾನೂನು ಬಾಹಿರ. ಅರಣ್ಯವಾಸಿಯ ಸಾಗುವಳಿ ಪ್ರದೇಶದಲ್ಲಿ ಸಾಂಪ್ರದಾಯಿಕ ಕಟ್ಟಡ, ಬಾವಿ, ಸ್ಮಶಾನ, ಪ್ರಾಚೀನ ಮತ್ತು ನೈಸರ್ಗಿಕ ಕುರುಹುಗಳು, ಗ್ಯಾಜೇಟ ಮುಂತಾದ ಜನವಸತಿ ಪ್ರದೇಶ ಎಂದು ನಿಯಮಾವಳಿ ೧೩ ರಲ್ಲಿ ಉಲ್ಲೇಖಿಸಿದ ಸಾಂದರ್ಭಿಕ ದಾಖಲೆಯನ್ನು ಅವಲಂಬನೆ ಮೇರೆಗೆ ಅರಣ್ಯ ಭೂಮಿ ಹಕ್ಕು ನೀಡುವಂತೆ ಗುಜರಾತ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿಯ ಅರ್ಜಿಯಲ್ಲಿ ಆದೇಶಿಸಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಪ್ರಚಲಿತ ಅರಣ್ಯ ಹಕ್ಕು ಕಾಯಿದೆಯು ಅರಣ್ಯವಾಸಿಗಳ ಪರವಾಗಿದ್ದು ಕಾಯಿದೆ ಅಧ್ಯಯನ ಮತ್ತು ಕಾನೂನು ತಜ್ಞರ ಅಭಿಪ್ರಾಯದ ಮೇರೆಗೆ ಅರಣ್ಯವಾಸಿಗಳಿಗೆ ಕಾನೂನಾತ್ಮಕ ಸಬಲೀಕರಣ ಮಾಡುವ ಉದ್ದೇಶದಿಂದ ಕಾನೂನು ಜಾಗೃತಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರೀನ್ ಕಾರ್ಡ್ ಪ್ರಮಖರಾದ ಚಂದ್ರು ಶಾನಭಾಗ, ರಾಜು ನರೇಬೈಲ್, ನೆಹರು ನಾಯ್ಕ, ರಮೇಶ ಮರಾಠಿ, ನಾಗರಾಜ ದೇವಸ್ಥಳ್ಳಿ, ಕಲ್ಪನಾ, ಯಶೋದ ನೌಟೂರ್, ಗಂಗೂಬಾಯಿ ರಜಪೂತ್, ಶಿವು ಗೌಡ ಕೊಟೆಕೊಪ್ಪ, ಶಿವಾನಂದ ನಾಯ್ಕ ಮಾಳಂಜಿ, ಮಲ್ಲೇಶಿ ಸಂತೋಳ್ಳಿ, ಪಾರ್ವತಿ ಮುಕ್ರಿ ಚರ್ಚೆಯಲ್ಲಿ ಭಾಗವಹಿಸಿದ್ದರು.