ಕನ್ನಡಪ್ರಭ ವಾರ್ತೆ ಹಾಸನ
ಅಕ್ರಮವಾಗಿ ದನಕರುಗಳನ್ನು ಕಸಾಯಿ ಖಾನೆಗೆ ಎರಡು ವಾಹನಗಳಲ್ಲಿ ಸಾಗಿಸಲಾಗುತ್ತಿದ್ದ ಬಗ್ಗೆ ವಿಶ್ವ ಹಿಂದೂ ಪರಿಷತ್ ಮಾಹಿತಿ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.ಮೊದಲು ಬಡಾವಣೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅವರ ಸಹಾಯದಲ್ಲಿ ಡೇರಿ ವೃತ್ತ ಹಾಗೂ ಪೃಥ್ವಿ ಥಿಯೇಟರ್ ರಸ್ತೆಯಲ್ಲಿ ವಾಹನ ನಿಲ್ಲಿಸಿ ಪರಿಶೀಲಿಸಿದ ನಂತರ ವಿಶ್ವಹಿಂದೂ ಪರಿಷತ್ತು ಮತ್ತು ಬಜರಂಗದಳದ ಕಾರ್ಯಕರ್ತರು ತಡೆ ಮಾಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ವಿಶ್ವಹಿಂದು ಪರಿಷತ್ತು ನಗರ ಕಾರ್ಯದರ್ಶಿ ಶಶಿಧರ್ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ನಗರ ಮತ್ತು ಗ್ರಾಮಗಳ ವ್ಯಾಪ್ತಿಯಲ್ಲಿ ಕೆಲ ಕಡೆ ಹಸುಗಳು ಕಳ್ಳತನವಾಗುತ್ತಿದೆ, ಇನ್ನು ಅನೇಕ ಕಡೆ ಹಸುಗಳ ಮಾರಾಟ ನೆಪದಲ್ಲಿ ಕಡಿದು ಗೋ ಮಾಂಸ ದಂಧೆಗೋಸ್ಕರ ಕಸಾಯಿಖಾನೆಗೆ ಸಾಗಿಸುತ್ತಿದ್ದ ಬಗ್ಗೆ ವಿಚಾರ ತಿಳಿದು ಬಂದ ಹಿನ್ನಲೆಯಲ್ಲಿ ವಿಶ್ವಹಿಂದೂ ಪರಿಷತ್ತು ಮತ್ತು ಬಜರಂಗದಳದಿಂದ ಮಂಗಳವಾರದಂದು ಎರಡು ಮುರು ಕಡೆ ವಾಚ್ ಮಾಡಿದಲ್ಲದೇ ಕಾನೂನು ಪ್ರಕಾರ ಹೋಗಬೇಕೆಂದು ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅವರ ಸಮ್ಮುಖದಲ್ಲಿ ಎರಡು ವಾಹನವನ್ನು ರಸ್ತೆಯಲ್ಲಿ ತಡೆ ಮಾಡಲಾಯಿತು. ಒಂದು ವಾಹನದಲ್ಲಿ ಪೂರ್ಣ ಎಳೆ ಕರುಗಳು ಇದ್ದು, ಇನ್ನೊಂದು ವಾಹನದಲ್ಲಿ ಹೋರಿ ದನಗಳು (ಗೂಳಿ) ಕಸಾಯಿ ಖಾನೆಗೆ ಹೋಗುತ್ತಿದ್ದವು. ವಿಚಾರಿಸಿದಾಗ ಹಿರಿಸಾವೆ ಎಂದು ಹೇಳುತ್ತಿದ್ದಾರೆ. ಆದರೆ ಇವೆಲ್ಲಾ ಬೆಂಗಳೂರಿಗೆ ನಡೆಯುವ ಗೋಮಾಂಸ ದಂಧೆಗೆ ಸಾಗಿಸಲಾಗುತ್ತಿದೆ ಎಂದು ದೂರಿದರು.ವಿಶ್ವಹಿಂದೂ ಪರಿಷತ್ನ ಕಾರ್ಯಕರ್ತರು ಸೇರಿದಂತೆ ಸುತ್ತಮುತ್ತ ಇದ್ದ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿಕೊಂಡು ಪೊಲೀಸರ ಸಮ್ಮುಖದಲ್ಲಿ ಅಕ್ರಮ ಗೋ ಸಾಗಾಣಿಕೆಯ ಗಾಡಿಗಳನ್ನು ತಡೆ ಹಿಡಿಯಲಾಗಿದೆ ಎಂದರು. ಎಲ್ಲರನ್ನು ಕಾನೂನು ಪ್ರಕಾರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಗೋ ಮಾಂಸ ನಿಷೇಧಕ್ಕಾಗಿಯೇ ಆಕ್ಟ್ ಇದ್ದು, ಈ ಪ್ರಕಾರ ಕಾನೂನು ಬಿಗಿ ಮಾಡಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಒಂದು ಗಾಡಿಯಲ್ಲಿ ೧೦ ರಿಂದ ೧೨ ಕರುಗಳಿದ್ದವು. ಒಂದು ವಾಹನವನ್ನು ಪೃಥ್ವಿ ಥಿಯೇಟರ್ ರಸ್ತೆ, ಮತ್ತೊಂದು ವಾಹನವನ್ನು ಡೇರಿ ವೃತ್ತದಲ್ಲಿ ಹಿಡಿಯಲಾಗಿದೆ. ಇವೆಲ್ಲಾ ಹಾಸನದ ಸಂತೇಪೇಟೆಯಿಂದ ತರಲಾಗಿದೆ ಎಂದು ಹೇಳಿದರು. ಪ್ರತಿ ವಾರ ಸಂತೆಯಲ್ಲಿ ಕಸಾಯಿಖಾನೆಗೆ ಅಕ್ರಮವಾಗಿ ಗೋಗಳನ್ನು ಸಾಗಿಸಲಾಗುತ್ತಿದೆ ಎಂದು ಮಾಹಿತಿ ಬಂದಿದ್ದು, ಇನ್ನು ಮುಂದೆ ಹೆಚ್ಚಿನ ಕಾರ್ಯಪ್ರವೃತ್ತರಾಗುವುದಾಗಿ ಹೇಳಿದರು. ಇದೇ ವೇಳೆ ವಿಶ್ವಹಿಂದು ಪರಿಷತ್ತು ಸಹ ಕಾರ್ಯದರ್ಶಿ ಮಂಜು, ಭಜರಂಗದಳದ ಸಹ ಸಂಯೋಜಕರು ಯಶಸ್ಸು, ವಿದ್ಯಾರ್ಥಿ ಪ್ರಮುಖ್ ಹರ್ಷ ಸೇರಿದಂತೆ ಇತರರು ಉಪಸ್ಥಿತರಿದ್ದರು.