ಕನ್ನಡಪ್ರಭ ವಾರ್ತೆ ತುಮಕೂರು
ವಿಭಾಗಗಳ ಕಾರ್ಯಕ್ಷಮತೆಯ ಗುಣಮಟ್ಟ ಬೋಧನೆ, ಸಂಶೋಧನೆಗಳ ಮೇಲೆ ಅವಲಂಬಿತವಾಗಿದ್ದು, ರಾಷ್ಟ್ರಮಟ್ಟದ ಅನುದಾನ ಸಂಸ್ಥೆಗಳಿಂದ ಮಂಜೂರಾಗುವ ಸಂಶೋಧನಾ ಯೋಜನೆಗಳು ವಿಶ್ವವಿದ್ಯಾನಿಲಯಗಳ ಭವಿಷ್ಯವನ್ನು ಹೇಳುತ್ತವೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗದ ‘ಉಪನ್ಯಾಸ ಸರಣಿ’ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಷ್ಟ್ರಮಟ್ಟದ ಅನುದಾನ ಸಂಸ್ಥೆಗಳಿಂದ ರು. 76 ಲಕ್ಷ ಮೊತ್ತದ ಅನೇಕ ಹೊಸ ಸಂಶೋಧನ ಯೋಜನೆಗಳು ಮಂಜೂರಾಗಿದ್ದು, ಇದರಲ್ಲಿ 40 ಲಕ್ಷ ಮೊತ್ತದ ಸಂಶೋಧನ ಯೋಜನೆಗಳು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನಅಧ್ಯಯನ ವಿಭಾಗದ್ದಾಗಿರುವುದು ಗಮನಾರ್ಹ ಬೆಳವಣಿಗೆ ಎನಿಸಿದೆ ಎಂದರು.ಕಳೆದ ಎರಡು ತಿಂಗಳುಗಳಲ್ಲಿ ವಿವಿಯ ಅನೇಕ ವಿಭಾಗಗಳು 60 ಸಂಶೋಧನಾ ಯೋಜನೆಗಳನ್ನು ರಾಷ್ಟ್ರಮಟ್ಟದ ಅನುದಾನ ಸಂಸ್ಥೆಗಳಿಗೆ ಸಲ್ಲಿಸಿದ್ದವು. ಅದರಲ್ಲಿ 18 ಸಂಶೋಧನಾ ಯೋಜನೆಗಳು ಸ್ವೀಕೃತವಾಗಿವೆ. ಸಂಶೋಧನೆಗಳ ಗುಣಮಟ್ಟದಿಂದ ವಿಶ್ವವಿದ್ಯಾನಿಲಯಗಳ ಗ್ರೇಡ್ಗಳನ್ನು ನಿರ್ಧರಿಸಬೇಕು ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಾಧ್ಯಾಪಕ ಪ್ರೊ. ರಮೇಶ ಮಾತನಾಡಿ, ಸ್ನಾತಕ ಪದವಿ ಮುಗಿಸಿದ ಶೇ.46 ರಷ್ಟು ಪದವೀಧರರಿಗಷ್ಟೇ ಉದ್ಯೋಗ ದೊರೆಯುತ್ತಿದೆ.ಶೇ.100 ರಷ್ಟು ಉದ್ಯೋಗವಂತರನ್ನಾಗಿಸಲು ಶ್ರಮವಹಿಸಬೇಕು. ಇದಕ್ಕಾಗಿ ಕೌಶಲಾಭಿವೃದ್ಧಿ ತರಗತಿಗಳನ್ನು ಆಯೋಜಿಸಬೇಕು ಎಂದರು.‘ಬೋಧನೆ ಹಾಗೂ ಕಲಿಕೆಗಾಗಿ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು- ಉನ್ನತ ಶಿಕ್ಷಣವನ್ನು ಅನುಲಕ್ಷಿಸಿ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಿವಿ ಸ್ನಾತಕೋತ್ತರ ಗ್ರಂಥಾಲಯ ವಿಭಾಗದ ಅಧ್ಯಕ್ಷ ಪ್ರೊ. ಬಿ. ಟಿ. ಸಂಪತ್ಕುಮಾರ್, ಪ್ರಾಧ್ಯಾಪಕ ಪ್ರೊ. ಕೇಶವ, ಸಹಾಯಕ ಪ್ರಾಧ್ಯಾಪಕ ಡಾ.ಎ. ರೂಪೇಶ್ಕುಮಾರ್, ಡಾ.ಬಿ.ಎನ್. ಹೇಮಾವತಿ, ಡಾ.ಎಚ್.ರಾಜೇಂದ್ರ ಬಾಬು ಉಪಸ್ಥಿತರಿದ್ದರು.