ಹೊಸಪೇಟೆ: ಇಂದಿನ ಕಾಲದಲ್ಲಿ ಕೇವಲ ಒಂದು ವಿಷಯವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಸಂಶೋಧನೆ ನಡೆಸುವ ಪರಿಸ್ಥಿತಿ ಇಲ್ಲ; ಬದಲಾಗಿ ಜಾಗತಿಕ ಪರಿಧಿಯನ್ನು ಮನದಲ್ಲಿಟ್ಟುಕೊಂಡು ಸಂಶೋಧನೆ ನಡೆಯುತ್ತಿದೆ ಎಂದು ಬೆಂಗಳೂರಿನ ಅಜೀಮ್ ಪ್ರೇಮ್ಜಿ ವಿಶ್ವವಿದ್ಯಾಲಯ ಹಿರಿಯ ಪ್ರಾಧ್ಯಾಪಕ ಡಾ.ಎ. ನಾರಾಯಣ ಅಭಿಪ್ರಾಯಪಟ್ಟರು.ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಅಧ್ಯಯನಾಂಗದ ವತಿಯಿಂದ ಆಯೋಜಿಸಲಾಗಿದ್ದ ಯುಜಿಸಿ ಪಿಎಚ್.ಡಿ. ಕೋರ್ಸ್ವರ್ಕ್ ಮೂರನೇ ಹಂತದ ಕಾರ್ಯಕ್ರಮದಲ್ಲಿ ಸಮಕಾಲೀನ ಸಮಾಜ ಸಂಶೋಧನೆ ಎಂಬ ವಿಷಯ ಕುರಿತು ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಸಂಶೋಧಕರ ಮನಸ್ಸಿನಲ್ಲಿ ಸದಾ ಪ್ರಶ್ನೆಗಳು ಹುಟ್ಟುತ್ತಿರಬೇಕು. ಪ್ರತಿಯೊಂದು ಮಹತ್ವದ ಆವಿಷ್ಕಾರವೂ ಒಂದು ಪ್ರಶ್ನೆಯಿಂದಲೇ ಆರಂಭವಾಗುತ್ತದೆ. ಮೊದಲಿಗೆ ಪ್ರಶ್ನೆ ಕೇಳುವ ಸಾಮರ್ಥ್ಯವನ್ನು ಸಂಶೋಧನಾ ವಿದ್ಯಾರ್ಥಿಗಳು ರೂಢಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಅವರು ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಡಾ.ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಹಿರಿಯ ಪ್ರಾಧ್ಯಾಪಕ ಡಾ. ನಿತ್ಯಾನಂದ ಬಿ.ಶೆಟ್ಟಿ ಅವರು ಸಂಶೋಧನೆ: ಬಹುಮುಖಿ ಆಯಾಮಗಳು ವಿಷಯ ಕುರಿತು ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಮಾರ್ಗದರ್ಶಕರು ವಿದ್ಯಾರ್ಥಿಗಳಿಗೆ ಓದುವುದು, ಬರೆಯುವುದು ಮತ್ತು ಯೋಚಿಸುವುದನ್ನು ಕಲಿಸುವ ಬದಲು, ಕೇವಲ ವಿಚಾರಗಳನ್ನು ಮಾತ್ರ ತಿಳಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಸಂಶೋಧನಾ ಪ್ರಕ್ರಿಯೆಗೆ ಮೂಲಭೂತ ಸಮಸ್ಯೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಸಮಾರಂಭದ ಅಧ್ಯಕ್ಷತೆವಹಿಸಿಕೊಂಡು ಮಾತನಾಡಿ, ಸಂಶೋಧನೆ ಎನ್ನುವುದು ಅತ್ಯಂತ ಗಂಭೀರವಾದ ಪ್ರಕ್ರಿಯೆಯಾಗಿದ್ದು, ಅದನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಅಧ್ಯಯನಾಂಗ ನಿರ್ದೇಶಕ ಡಾ. ಅಮರೇಶ ಯತಗಲ್ ಸ್ವಾಗತಿಸಿದರು.