ಅಡುಗೆ ಪದಾರ್ಥ ಕದ್ದು ಮನೆಗೆ ಸಾಗಾಟ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

ಮಕ್ಕಳ ಶಿಕ್ಷಣ, ಊಟೋಪಚಾರಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತದೆ. ಆದರೆ ಇಲ್ಲಿ ಮಕ್ಕಳಿಗೆ ಸಮರ್ಪಕ ಊಟ ನೀಡದೇ ಇರುವುದು ವಿಷಾದನಿಯ.

ಮುಂಡಗೋಡ:ಪಟ್ಟಣದ ಹೊರ ವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಂಗಳವಾರ ಶಾಸಕ ಶಿವರಾಮ ಹೆಬ್ಬಾರ ಭೇಟಿ ನೀಡಿ ಅಲ್ಲಿಯ ಅವ್ಯವಸ್ಥೆ ಬಗ್ಗೆ ಸಂಬಂಧಿಸಿದವರನ್ನು ತರಾಟೆಗೆ ತೆಗೆದುಕೊಂಡರು.ಮಕ್ಕಳಿಗೆ ಸಮರ್ಪಕ ಊಟ ಸಿಗದೆ ಇರುವುದು, ಸ್ವಚ್ಛತೆ ಕೊರತೆ ಹಾಗೂ ಅವ್ಯವಸ್ಥೆಯ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಭೇಟಿ ನೀಡಿದ ಶಾಸಕರು, ಮಕ್ಕಳಿಗೆ ಒಳ್ಳೆಯ ಊಟ ನೀಡದೆ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಎಣ್ಣೆ ಮತ್ತು ದ್ವಿದಳ ಧಾನ್ಯ ಸೇರಿದಂತೆ ಅಡುಗೆ ಪದಾರ್ಥ ಕದ್ದು ಮನೆಗೆ ಸಾಗಿಸುತ್ತಾರೆ ಎಂಬ ಸಾಕಷ್ಟು ದೂರುಗಳಿವೆ. ಹೀಗೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ ಶಾಸಕರು, ಮಕ್ಕಳ ಶಿಕ್ಷಣ, ಊಟೋಪಚಾರಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತದೆ. ಆದರೆ ಇಲ್ಲಿ ಮಕ್ಕಳಿಗೆ ಸಮರ್ಪಕ ಊಟ ನೀಡದೇ ಇರುವುದು ವಿಷಾದನಿಯ ಸಂಗತಿ ಎಂದರು.ಯಾರೇ ತಪ್ಪು ಮಾಡಿದರೂ ಪ್ರಾಂಶುಪಾಲರೇ ಹೊಣೆ ಹೊರಬೇಕಾಗುತ್ತದೆ. ಹಾಗಾಗಿ ಏನೆ ಸಮಸ್ಯೆ ಇದ್ದರೂ ತಕ್ಷಣ ಸರಿಪಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲ ಮಂಜುನಾಥ ಮರಿತಮ್ಮಣ್ಣನವರಗೆ ತಾಕೀತು ಮಾಡಿದರು. ಮುಂದಿನ ದಿನಗಳಲ್ಲಿ ಇಲ್ಲಿ ಮತ್ತೇನಾದರೂ ಸಮಸ್ಯೆಯಾದರೂ ನೀವೇ ಜವಾಬ್ದಾರರಾಗುತ್ತೀರಿ. ಯಾರನ್ನು ಬೇಕಾದರೂ ಕೆಲಸದಿಂದ ತೆಗೆದು ಹಾಕಿ, ಆದರೆ ಇನ್ನು ಮುಂದೆ ಈ ವಸತಿ ಶಾಲೆಯಿಂದ ಯಾವುದೇ ದೂರುಗಳು ಬರದಂತೆ ಕ್ರಮಕೈಗೊಳ್ಳಿ ಎಂದು ತಹಸೀಲ್ದಾರ್‌ ಶಂಕರ ಗೌಡಿ ಅವರಿಗೆ ಶಾಸಕರು ಸೂಚಿಸಿದರು.ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ, ಇಲ್ಲಿಯ ಅವ್ಯವಸ್ಥೆ ಬಗ್ಗೆ ಗಮನಿಸಿದ್ದೇನೆ. ಸುಸಜ್ಜಿತವಾದ ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ಶೀಘ್ರದಲ್ಲಿ ಕ್ರಮಕೈಗೊಳ್ಳಲಾಗುವುದು. ಪಕ್ಕದಲ್ಲಿಯೇ ಹೊಸದಾಗಿ ನಿರ್ಮಿಸಿರುವ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಕಟ್ಟಡವನ್ನು ೧೫ ದಿನದೊಳಗಾಗಿ ಉದ್ಘಾಟನೆಗೆ ಸಜ್ಜುಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಶೀಘ್ರದಲ್ಲಿ ಉದ್ಘಾಟಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗುವುದು. ಬಹುತೇಕ ಬಡವರೇ ವ್ಯಾಸಂಗ ಮಡುವ ವಸತಿ ಶಾಲೆ ಉತ್ತಮ ವ್ಯವಸ್ಥೆ ಹೊಂದಿರಬೇಕು. ಮಕ್ಕಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಉತ್ತಮ ಆಹಾರ ಪದಾರ್ಥ ನೀಡಿ ಮಕ್ಕಳ ಊಟೋಪಚಾರ ಹಾಗೂ ಆರೋಗ್ಯದ ಬಗ್ಗೆ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಕಾಳಜಿವಹಿಸಬೇಕು ಎಂದು ಹೇಳಿದರು.ಈ ವೇಳೆ ತಹಸೀಲ್ದಾರ್‌ ಶಂಕರ ಗೌಡಿ, ಪ್ರಾಂಶುಪಾಲ ಮಂಜುನಾಥ ಮರಿತಮ್ಮಣ್ಣನವರ ಉಪಸ್ಥಿತರಿದ್ದರು.

Share this article