ಜಗಜೀವನ್‌ರಾಮ್ ಹೆಸರಿನಲ್ಲೂ ವಸತಿ ಶಾಲೆಗಳನ್ನು ತೆರೆಯಲಿ: ರೇವಣ್ಣ

KannadaprabhaNewsNetwork | Published : Apr 6, 2025 1:51 AM

ಡಾ. ಬಾಬು ಜಗಜೀವನ್‌ರಾಮ್ ವೃತ್ತದಲ್ಲಿ ಬೆಳಗ್ಗೆ ೧೦ ಗಂಟೆಗೆ ನಿಗದಿಯಾಗಿದ್ದ ಗಣ್ಯರ ಮೆರವಣಿಗೆ ಕಾರ್ಯಕ್ರಮ ೧೦.೩೦ ಆದರೂ ಪ್ರಾರಂಭವಾಗದೇ ಇದ್ದಾಗ ಸರ್ಕಾರಿ ಅಧಿಕಾರಿಗಳು ಬಂದಿಲ್ಲ, ಎಸ್ಸಿ, ಎಸ್ಟಿ ಕಾರ್ಯಕ್ರಮಗಳಿಗೆ ತಾರತಮ್ಯ ಮಾಡುತ್ತಿದ್ದೀರಿ ಎಂದು ಮಾದಿಗ ದಂಡೋರ ಸಮಿತಿಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ತಹಸೀಲ್ದಾರ್ ಅವರಿಗೆ ಸಮಯಪ್ರಜ್ಞೆ ಕುರಿತು ಅರಿವು ಮೂಡಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದರು. ಅದೇ ರೀತಿ ಬಡವರ ಏಳಿಗೆಗೆ ಸಾಕಷ್ಟು ಶ್ರಮಿಸಿದ ಡಾ. ಬಾಬು ಜಗಜೀವನ್‌ರಾಮ್ ಅವರ ಹೆಸರಿನಲ್ಲೂ ವಸತಿ ಶಾಲೆಗಳನ್ನು ನಿರ್ಮಿಸುವ ಮೂಲಕ ಶ್ರೀಯುತರಿಗೆ ಗೌರವ ಸಲ್ಲಿಸಬೇಕಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಅಭಿಪ್ರಾಯಪಟ್ಟರು.

ಪಟ್ಟಣದ ಸಾರ್ವಜನಿಕ ಸಮುದಾಯ ಭವನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಡಾ. ಬಾಬು ಜಗಜೀವನ್‌ರಾಮ್ ಅವರ ೧೧೮ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರದಲ್ಲಿ ಹಲವಾರು ಖಾತೆಗಳನ್ನು ನಿರ್ವಹಿಸಿರುವ ಅವರು, ಹಲವಾರು ಸುಧಾರಣೆಗಳನ್ನು ತಂದು ಖಾತೆಗಳಿಗೆ ನ್ಯಾಯ ಒದಗಿಸಿಕೊಟ್ಟಿದ್ದರು. ದೇಶದ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಶ್ರೀಯುತರು ಪ್ರಧಾನಿ ಆಗಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಯಸಿದ್ದರು, ಆದರೆ ಅವರು ಪ್ರಧಾನಿ ಆಗಲೇ ಇಲ್ಲವೆಂದು ಬೇಸರದಿಂದ ನುಡಿದರು.

ಸಮಾಜದ ಏಳಿಗೆಗೆ ತಾರತಮ್ಯ ಮಾಡಿಲ್ಲ, ಈಗಾಗಲೇ ಶ್ರೀಯುತರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ೨ ಕೋಟಿ ರು. ನೀಡಿದ್ದೇನೆ, ಸ್ಥಳ ದೊರೆಯುತ್ತಿದ್ದಂತೆ ಸಮುದಾಯ ಭವನ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುತ್ತದೆ ಎಂದರು.

ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಸಮಾಜದ ಮುಖಂಡರನ್ನು ಗೌರವಿಸಲಾಯಿತು.

ಡಾ. ಬಾಬು ಜಗಜೀವನ್‌ರಾಮ್ ವೃತ್ತದಲ್ಲಿ ಬೆಳಗ್ಗೆ ೧೦ ಗಂಟೆಗೆ ನಿಗದಿಯಾಗಿದ್ದ ಗಣ್ಯರ ಮೆರವಣಿಗೆ ಕಾರ್ಯಕ್ರಮ ೧೦.೩೦ ಆದರೂ ಪ್ರಾರಂಭವಾಗದೇ ಇದ್ದಾಗ ಸರ್ಕಾರಿ ಅಧಿಕಾರಿಗಳು ಬಂದಿಲ್ಲ, ಎಸ್ಸಿ, ಎಸ್ಟಿ ಕಾರ್ಯಕ್ರಮಗಳಿಗೆ ತಾರತಮ್ಯ ಮಾಡುತ್ತಿದ್ದೀರಿ ಎಂದು ಮಾದಿಗ ದಂಡೋರ ಸಮಿತಿಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ತಹಸೀಲ್ದಾರ್ ಅವರಿಗೆ ಸಮಯಪ್ರಜ್ಞೆ ಕುರಿತು ಅರಿವು ಮೂಡಿಸಿದರು.

ಮೆರವಣಿಗೆಯಲ್ಲಿ ಕಳಸ ಹೊತ್ತು ಸಾಗಿದ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ತಂದರು.

ಸಂಸದ ಶ್ರೇಯಸ್ ಪಟೇಲ್ ಅವರು ಡಾ. ಬಾಬು ಜಗಜೀವನ್‌ರಾಮ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಕೃಷ್ಣಮೂರ್ತಿ, ತಾಪಂ ಇಒ ಮುನಿರಾಜು, ಬಿಇಒ ಸೋಮಲಿಂಗೇಗೌಡ, ಸಿಡಿಪಿಒ ಸುರೇಶ್, ಅಗ್ನಿಶಾಮಕ ಠಾಣಾಧಿಕಾರಿ ಸೋಮಶೇಖರ್, ಕೃಷಿ ಇಲಾಖೆ ಅಧಿಕಾರಿ ಸಪ್ನ, ಶಿರಸ್ತೇದಾರ್ ಲೋಕೇಶ್, ವಲಯ ಅರಣ್ಯಾಧಿಕಾರಿ ದಿಲೀಪ್, ಸಮಾಜ ಕಲ್ಯಾಣ ಇಲಾಖೆಯ ಚಿಕ್ಕಲಿಂಗೇಗೌಡ, ಮಾದಿಗ ದಂಡೋರ ಸಮಿತಿಯ ಮುಖಂಡರು ಹಾಗೂ ತಾಪಂ ಮಾಜಿ ಅಧ್ಯಕ್ಷ ಸಿ.ಆರ್.ಮಂಜುನಾಥ್ ಹಾಗೂ ಲಕ್ಕೂರು ಬಸವರಾಜು, ಪುರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ, ತಾ. ಮಾದಿಗ ದಂಡೋರ ಸಮಿತಿ ಅಧ್ಯಕ್ಷ ರವಿಕುಮಾರ್, ಮುಖಂಡರಾದ ಪಾಪಣ್ಣ, ತೆವಡಹಳ್ಳಿ ಮಂಜುನಾಥ್, ಎಚ್.ಸಿ.ಎಸ್.ಚಂದ್ರು, ಇತರರು ಇದ್ದರು.