ಶಿರಾ: ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ಕ್ರಮ ಸತ್ಯಕ್ಕೆ ಸಂದ ಜಯ. ಶೋಷಿತರಿಗೆ ಅನ್ಯಾಸವೆಸಗಿ ರಾಜಕೀಯ ಮಾಡುತ್ತಿರುವ ಭ್ರಷ್ಟ ಸಿಎಂ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಒತ್ತಾಯಿಸಿದರು. ಹೈಕೋರ್ಟ್ ತೀರ್ಪಿನ ಬೆನ್ನೆಲ್ಲೆ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಲ್ಲಿ ಬಿಜೆಪಿಯಿಂದ ಸಿಎಂ ರಾಜೀನಾಮೆಗೆ ಆಗ್ರಹಿಸಿ ಮಾಡಲಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮೂಡಾ ಹಗರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಪಕ್ಷದ ವತಿಯಿಂದ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ಕಣ್ಣಿಗೆ ಕಾಣುತ್ತಿದ್ದರೂ ಸಹ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ರಾಜ್ಯಪಾಲರು ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ಕೊಟ್ಟಿರುವುದನ್ನು ಹೈಕೋರ್ಟ್ ಎತ್ತಿಹಿಡಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಮಾತನಾಡಿ ಮುಖ್ಯಮಂತ್ರಿಗಳು ಕಾನೂನಾತ್ಮಕವಾಗಿ ತನಿಖೆಗೆ ಸಹಕರಿಸಬೇಕು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಚಿಕ್ಕಣ್ಣ, ನಗರ ಮಂಡಲ ಅಧ್ಯಕ್ಷ ಗಿರಿಧರ್, ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷರಾದ ಉಮಾ ವಿಜಯರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂಜಲಗೆರೆ ಮೂರ್ತಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸಂತೆಪೇಟೆ ನಟರಾಜ್ ಹಾಗೂ ಕದಿರೇಹಳ್ಳಿ ಮೂರ್ತಿ, ಓಬಿಸಿ ಮೋರ್ಚಾ ಅಧ್ಯಕ್ಷ ಪ್ರತಾಪ್ ಮಾಗೋಡು, ನಗರಸಭಾ ಸದಸ್ಯ ರಂಗರಾಜು, ಗ್ರಾ.ಪಂ. ಸದಸ್ಯ ಈರಣ್ಣ ಪಟೇಲ್, ಡಿ.ಎಚ್ ಗೌಡ, ಮುಖಂಡರಾದ ಬರಗೂರು ಯುವರಾಜ್, ರಂಗಾಪುರ ನಾಗರಾಜ ಗೌಡ, ಶಿವಕುಮಾರ್, ಮದ್ದಕ್ಕನಹಳ್ಳಿ ಗೌಡಪ್ಪ, ರಂಗನಾಥ್, ಚಿಕ್ಕನಕೋಟೆ ಕರಿಯಣ್ಣ, ಮಾಲತೇಶ್, ಚೆನ್ನನಕುಂಟೆ ತಿಪ್ಪೇಸ್ವಾಮಿ, ಕವಿತಾ, ದ್ವಾರನಕುಂಟೆ ರಂಗನಾಥ್, ಗುಮ್ಮನಹಳ್ಳಿ ಈರಣ್ಣ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.