ಫಲಾನುಭವಿಗಳಿಗೆ ಹಂತ, ಹಂತವಾಗಿ ಹಕ್ಕುಪತ್ರ, ನೋಂದಣಿ ಪತ್ರ ಹಾಗೂ ಇ-ಸ್ವತ್ತು ದಾಖಲೆ ವಿತರಿಸಲು ಅಗತ್ಯ ವ್ಯವಸ್ಥೆ
ಹಾನಗಲ್ಲ: ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಅಧ್ಯಯನ ಕೈಗೊಂಡು ಸುಮಾರು 16 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲು ಸಂಕಲ್ಪಿಸಲಾಗಿದ್ದು, ಈ ಕಾರ್ಯದಲ್ಲಿ ಯಾವುದೇ ಅರ್ಹ ಫಲಾನುಭವಿಗಳು ಬಿಟ್ಟು ಹೋಗದಂತೆ ಗಮನ ಹರಿಸುವಂತೆ ಶಾಸಕ ಶ್ರೀನಿವಾಸ ಮಾನೆ ತಹಸೀಲ್ದಾರ್ ರೇಣುಕಾ ಎಸ್. ಅವರಿಗೆ ಸೂಚಿಸಿದರು.
ಹಾನಗಲ್ಲ ತಹಸೀಲ್ದಾರ ಎಸ್.ರೇಣುಕಾ ಅವರೊಂದಿಗೆ ಸಭೆ ನಡೆಸಿ ಯಾವುದೇ ಅರ್ಹ ಫಲಾನುಭವಿಗಳು ಬಿಟ್ಟು ಹೋಗಿರುವುದು ಗಮನಕ್ಕೆ ಬಂದರೆ ಸಂಬಂಧಿಸಿದ ಪಿಡಿಒ ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಂದ ವರದಿ ಪಡೆದು ಸೂಕ್ತ ಕ್ರಮ ವಹಿಸಬೇಕು. ಇದುವರೆಗೆ ಕೆಲ ಗ್ರಾಮಗಳಲ್ಲಿನ ಕೆಲವು ರಿ.ಸ.ನಂಬರಗಳನ್ನು ಪರಿಗಣಿಸಿಲ್ಲ ಎಂದು ದೂರು ಕೇಳಿ ಬರುತ್ತಿದ್ದು, ಅವುಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳನ್ನು ಸೇರಿಸಿಕೊಂಡು ಪ್ರಸ್ತಾವನೆ ಸಲ್ಲಿಸಿ ಎಂದು ಸೂಚಿಸಿದರು.
ಈಗಾಗಲೇ ಅನುಮೋದನೆಯಾಗಿರುವ ಫಲಾನುಭವಿಗಳಿಗೆ ಹಂತ, ಹಂತವಾಗಿ ಹಕ್ಕುಪತ್ರ, ನೋಂದಣಿ ಪತ್ರ ಹಾಗೂ ಇ-ಸ್ವತ್ತು ದಾಖಲೆ ವಿತರಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದ ಶಾಸಕ ಮಾನೆ, ಕಂದಾಯ ಗ್ರಾಮ, ಉಪಗ್ರಾಮ ರಚನೆ, ಹಕ್ಕುಪತ್ರ ತಯಾರಿಕೆ, ಪ್ರಸ್ತಾವನೆ ವಿವಿಧ ಹಂತಗಳ ಬಗ್ಗೆ ಮಾಹಿತಿ ಪಡೆದರು. ಸವಣೂರು ಉಪವಿಭಾಗಾಧಿಕಾರಿಗಳ ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದು ಶೀಘ್ರ ಇತ್ಯರ್ಥಗೊಳಿಸಿ ಹಕ್ಕುಪತ್ರ ಅನುಮೋದನೆಗೆ ಕ್ರಮ ವಹಿಸಿ ಎಂದು ಸೂಚನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.