ಅಂಚೆ ಕಚೇರಿಯಲ್ಲಿ ನಿವೃತ್ತಗೊಂಡ ಅಂಚೆ ಪಾಲಕ ಶಿವಶಂಕರ್ ಗೆ ಬೀಳ್ಕೊಡಿಗೆ
ಪ್ರಾಮಾಣಿಕತೆ ಮತ್ತು ಸರಳತೆ ರೂಢಿಸಿಕೊಂಡು ಜನಸಾಮಾನ್ಯರಿಗೆ ಸರ್ಕಾರಿ ನೌಕರರು ಸೇವೆ ಸಲ್ಲಿಸಿದರೆ ವೃತ್ತಿಗೆ ಗೌರವ ತಂದು ಕೊಡುತ್ತದೆ ಎಂದು ಕೊಪ್ಪದ ವಿಭಾಗದ ಅಂಚೆ ನಿರೀಕ್ಷಕ ಪಿ.ಕುಮಾರ್ ತಿಳಿಸಿದರು.
ಮುಖ್ಯ ಅಂಚೆಕಚೇರಿಯಲ್ಲಿ ಅಂಚೆನೌಕರರು ಮತ್ತು ಗ್ರಾಮೀಣ ಅಂಚೆ ನೌಕರರು ಮಂಗಳವಾರ ಆಯೋಜಿಸಿದ್ದ 41 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಂಚೆ ಪಾಲಕ ಡಿ.ಸಿ.ಶಿವ ಶಂಕರ್ ರಾವ್ ಅವರ ಬೀಳ್ಕೊಡಿಗೆ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.ಪ್ರಾಮಾಣಿಕತೆ ಮತ್ತು ವೃತ್ತಿ ಬದ್ಧತೆಯಿಂದ ಕೆಲಸ ಮಾಡುವವರಿಗೆ ಸಮಾಜದಲ್ಲಿ ಗೌರವ ಲಭಿಸುತ್ತದೆ. ಇಂತಹ ನೌಕರರ ವ್ಯಕ್ತಿತ್ವ ಇತರರಿಗೆ ಮಾರ್ಗದರ್ಶಕ. ನಿವೃತ್ತಿ ಹೊಂದುತ್ತಿರುವ ಶಿವಶಂಕರ್ ರಾವ್ ಅವರು ತಮ್ಮ ಸೇವಾ ಅವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಉತ್ತಮ ಹೆಸರುಗಳಿಸಿದ್ದಾರೆ. ಇಂತಹ ನೌಕರರ ಕೆಲಸದ ಸಂಸ್ಕೃತಿಯನ್ನು ಪ್ರತಿಯೊಬ್ಬ ನೌಕರರು ಅನುಸರಿಸಬೇಕು. ಸರ್ಕಾರಿ ನೌಕರರಾಗಿ ಸೇವೆಗೆ ಸೇರಿದ ಮೇಲೆ ನಿವೃತ್ತಿ ಅನಿವಾರ್ಯ. ನಿವೃತ್ತ ಶಿವಶಂಕರ್ ಅವರ ಮುಂದಿನ ಜೀವನ ಉತ್ತಮವಾಗಿರಲೆಂದು ಹಾರೈಸಿದರು.ಸನ್ಮಾನ ಸ್ವೀಕರಿಸಿದ ಪೋಸ್ಟ್ ಮಾಸ್ಟರ್ ಡಿ.ಸಿ.ಶಿವಶಂಕರರಾವ್ ಮಾತನಾಡಿ, ತಮ್ಮ 41 ವರ್ಷಗಳ ಸೇವಾ ಅವಧಿ ಯಲ್ಲಿ ಬೇರೆ,ಬೇರೆ ಭಾಗದಲ್ಲಿ ಸೇವೆ ಸಲ್ಲಿಸಿದ್ದೇನೆ. ಎಲ್ಲರೂ ಉತ್ತಮ ಸಹಕಾರ ನೀದ್ದಾರೆ. ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ನೌಕರರಿಗೆ ಅಂಚೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಹಸ್ತಾಂತರಿಸಲಾಯಿತು.