ಸಂಡೂರು: ಸಂವಿಧಾನವು ದೇಶದ ಸರ್ವೋಚ್ಚ ಕಾನೂನು. ಸಂವಿಧಾನವನ್ನು ಗೌರವಿಸಿ, ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಹಶೀಲ್ದಾರ್ ಜಿ.ಅನಿಲಕುಮಾರ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ಈ.ಅನ್ನಪೂರ್ಣ ತುಕಾರಾಂ, ವೈವಿಧ್ಯತೆಯಿಂದ ಕೂಡಿದ ದೇಶದಲ್ಲಿ ರಚನೆಯಾದ ಸಂವಿಧಾನವು ಸರ್ವರೂ ಸಮಾನತೆಯಿಂದ ಬಾಳುವ ಹಕ್ಕನ್ನು ಕಲ್ಪಿಸಿದೆ. ಅನೇಕತೆಯಲ್ಲಿ ಏಕತೆಯನ್ನು ಕಾಣುವು ನಮ್ಮ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಎಲ್ಲರೂ ಸಂವಿಧಾನದ ಆಶಯದಂತೆ ಬದುಕಬೇಕಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ, ಶಿಕ್ಷಣ, ಸಾಮಾಜಿಕ ಬದಲಾವಣೆ, ಆರ್ಥಿಕ ಸ್ವಾವಲಂಬನೆ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಈಗಾಗಲೇ 14 ಗ್ರಾಮಗಳ 12,100 ಎಕರೆ ಜಮೀನಿನ ಸರ್ವೆ ಸೆಟ್ಲ್ಮೆಂಟ್ ಮಾಡಿದ್ದು, ಇದರಿಂದ 3200 ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ರಾಮಸಾಗರ, ಮೆಟ್ರಿಕಿ ಭಾಗದಲ್ಲಿ 30 ಎಕರೆ ಜಮೀನನ್ನು ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಸಕ್ರಮಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಈಗಾಗಲೇ ಕ್ಷೇತ್ರದ 50 ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಆರಂಭಿಸಿದ್ದು, ಇದನ್ನು ಎಲ್ಲ ಶಾಲಾ ಕಾಲೇಜುಗಳಿಗೂ ವಿಸ್ತರಿಸುವ ಆಶಯವನ್ನು ಹೊಂದಿದ್ದೇನೆ. ಎಲ್ಲರೂ ಒಟ್ಟಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಗಮನ ಸೆಳೆದ ಫಲಕಗಳು:ವಿವಿಧ ಶಾಲೆ ವಿದ್ಯಾರ್ಥಿಗಳು ಶಿಕ್ಷಣ, ಆರೋಗ್ಯ, ಸಿರಿಧಾನ್ಯ, ಪರಿಸರ ಸಂರಕ್ಷಣೆ, ಸಂವಿಧಾನದ ಆಶಯಗಳು, ವಿದ್ಯುತ್ ಉಪಕರಣಗಳ ಬಳಕೆ ಮುಂತಾದ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು ಸೇರಿದ್ದ ಜನತೆಯಲ್ಲಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ರೈತ ಸಂಘದಿಂದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಸಬ್ ಇನ್ಸ್ಪೆಕ್ಟರ್ ವಿರೇಶ್ ಡಿ. ಮಾಳಶೆಟ್ಟಿ, ವಕೀಲರಾದ ಆರ್.ವಿ. ವಿಷ್ಣುಕುಮಾರ್, ಪಿ. ವಿಜಯಕುಮಾರ್, ಸಂಗೀತ ತಿಗರಿ ಹಾಗೂ ಸಿದ್ಧರಾಮೇಶ್ ಅಂಕಮನಾಳ್ ಅವರಿಗೆ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ ಸ್ವಾಗತಿಸಿದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಅಹಮ್ಮದ್, ಉಪಾಧ್ಯಕ್ಷೆ ಎಂ.ಸಿ. ಲತಾ, ಮುಖ್ಯಾಧಿಕಾರಿ ಕೆ.ಜಯಣ್ಣ, ತಾಪಂ ಇಒ ಎಚ್.ಷಡಾಕ್ಷರಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಬಿ. ಮಹೇಶ್ಗೌಡ, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ಸದಸ್ಯರು, ವಿವಿಧ ಶಾಲೆಗಳು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.