ಕುಕನೂರು: ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಯಲಬುರ್ಗಾ, ಕುಕನೂರು ತಾಲೂಕು ಮಟ್ಟದ ಸಾರ್ವಜನಿಕ ಕುಂದು ಕೊರತೆಗಳ ಮತ್ತು ಅಹವಾಲುಗಳ ಸಭೆ ಶನಿವಾರ ಕೊಪ್ಪಳ ಲೋಕಾಯುಕ್ತರಿಂದ ಜರುಗಿತು.
ಎರಡು ತಾಲೂಕುಗಳಿಂದ ಆಗಮಿಸಿದ ಅಧಿಕಾರಿಗಳ ಸಮ್ಮುಖದಲ್ಲಿ, ಸಾರ್ವಜನಿಕರು ಒಬ್ಬಬ್ಬರಾಗಿ ಬಂದು ದೂರು ಸಲ್ಲಿಸಿದರು. 11 ಅರ್ಜಿಗಳು ಸ್ವೀಕಾರಗೊಂಡವು.ಪೂರ್ವಜರ ಜಾಗವನ್ನು ಅಳತೆ ಮಾಡಿಕೊಡುತ್ತಿಲ್ಲ. ಅದನ್ನು ಅಳತೆ ಮಾಡಿಸಿಕೊಡಿ ಎಂದು ವ್ಯಕ್ತಿಯೊಬ್ಬರು ದೂರು ಸಲ್ಲಿಸಿದರು. ರೈತ ಪಹಣಿ ಸರಿಯಾಗಿ ಬರುತ್ತಿಲ್ಲ ಎಂದು ಒಬ್ಬರು, ಸಮಾಜ ಕಲ್ಯಾಣ ಇಲಾಖೆಯಲ್ಲಿ ೨೨ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದ್ದೇನೆ. ಈಗ ನನಗೆ ೫ ತಿಂಗಳ ವೇತನವಿಲ್ಲ ಎಂದು ಇನ್ನೊಬ್ಬರ ದೂರು ಸಲ್ಲಿಸಿದರು.ಈರಪ್ಪ ಮಂಗಳಾಪುರ ಎಂಬವರು ನನ್ನನ್ನು ಕೂಲೆ ಮಾಡಲು ನಾಲ್ಕಾರು ಜನರು ಬಂದಿದ್ದರು ಎಂದು ದೂರು ನೀಡಿದರು. ಪೊಲೀಸ್ ಪೇದೆ ಮೇಲೆ ಮತ್ತೊಬ್ಬರು ದೂರು ನೀಡಿದರು. ರಾಜು ಹಡಪದ ಎಂಬವರು ಯಲಬುರ್ಗಾ-ಕುಕನೂರು ಎರಡು ತಾಲೂಕುಗಳಲ್ಲಿ ಹಾಕಿರುವ ವಿಂಡ್ ಫ್ಯಾನ್ಗಳ ಭೂಮಿಗೆ ಕೆಜಿಪಿನೇ ಆಗಿಲ್ಲ. ಸರ್ಕಾರಕ್ಕೆ ಆದಾಯ ಬರುವುದಾದರೂ ಹೇಗೆ? ಎಂದು ದೂರು ಸಲ್ಲಿಸಿದರು. ಜಗದೀಶ ಜವಳಿ ಎಂಬವರು ಬೆಣಕಲ್ ಗ್ರಾಪಂನಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ದೂರು ಸಲ್ಲಿಸಿದರು. ಬೇವೂರು ಗ್ರಾಮಸ್ಥರು ಗ್ರಾಮದ ರಸ್ತೆ ಬಗ್ಗೆ ಮತ್ತು ಗಾಂವ್ಠಾಣಾ ಜಾಗದ ಬಗ್ಗೆ ದೂರು ಸಲ್ಲಿಸಿ ಮನವಿ ಮಾಡಿದರು. ಎರಡು ತಾಲೂಕುಗಳಿಂದ ಒಟ್ಟು ೧೧ ದೂರುಗಳ ಅರ್ಜಿಗಳು ಬಂದವು.ಸಭೆ ಉದ್ದೇಶಿಸಿ ಕೊಪ್ಪಳ ಲೋಕಾಯುಕ್ತ ಪಿಎಸ್ಐ ರಾಜೇಶ ಭಟಗುರಕಿ ಮಾತನಾಡಿ, ಎಲ್ಲ ಸರ್ಕಾರಿ ನೌಕರರು ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡಿ ಹಿಂಬರಹ ಕೊಡಬೇಕು. ಯಾರು ಹಣದ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡಬೇಡಿ. ಇದೊಂದು ಸೇವೆ ಅಂದುಕೊಂಡು ಕೆಲಸ ಮಾಡಬೇಕು. ಇಲ್ಲದಿದ್ದರೆ ಸಣ್ಣ ಸಮಸ್ಯೆ ಭವಿಷ್ಯದಲ್ಲಿ ದೊಡ್ಡದಾಗುತ್ತದೆ ಎಂದು ಹೇಳಿದರು.ಲೋಕಾಯುಕ್ತ ಪಿಎಸ್ಐ ಚಂದ್ರಪ್ಪ, ರಾಮಣ್ಣ ಬನ್ನಿಗೊಳ, ತಾರಾಮತಿ, ಮಂಜುನಾಥ ವಿರುಪಾಕ್ಷಪ್ಪ, ತಹಶೀಲ್ದಾರ್ ಎಚ್.ಪ್ರಾಣೇಶ, ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ, ಬಿಇಒ ನಿಂಗಪ್ಪ ಮೇಟಿ, ಪಪಂ ಮುಖ್ಯಾಧಿಕಾರಿ ಪಿ.ಸುಬ್ರಮಣ್ಯ, ಕೃಷಿ ಅಧಿಕಾರಿ ಪ್ರಾಣೇಶ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿ.ಕೆ ಬಡಿಗೇರ್, ಎನ್.ಎಚ್ ಅಧಿಕಾರಿ ಗೀರಿಶ್, ಎಲ್ಲ ಗ್ರಾಪಂ ಪಿಡಿಒಗಳು ಹಾಗೂ ನಾನಾ ಇಲಾಖೆಯ ಅಧಿಕಾರಿಗಳು ಇದ್ದರು.