ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಶಿಕ್ಷಕರು ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಧಾರೆ ಎರೆಯುವ ಮೂಲಕ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದರ ಜೊತೆಗೆ ಉತ್ತಮ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಶಿವಯೋಗಮಂದಿರದ ವೀರಶೈವ ಸಂಸ್ಥೆಯ ನಿರ್ದೇಶಕ ಎಂ.ಬಿ. ಹಂಗರಗಿ ಹೇಳಿದರು.ಶನಿವಾರ ಅಕ್ಕಮಹಾದೇವಿ ಮಹಿಳಾ ವಿವಿ ಹಾಗೂ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ಜರುಗಿದ ಮೂರು ದಿನಗಳ ಕಾಲ ಜರುಗಿದ ಪೌರತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶಿವಯೋಗಮಂದಿರದ ಪುಣ್ಯ ಕ್ಷೇತ್ರದಲ್ಲಿ ಮಹಿಳಾ ಪ್ರಶಿಕ್ಷಣಾರ್ಥಿ ಗಳಾದ ತಾವು ಸ್ವಚ್ಚತಾ ಕಾರ್ಯದ ಸೇವೆ ಸಲ್ಲಿಸಿದ್ದು ಸಂತೋಷದಾಯಕವಾಗಿದೆ ಎಂದರು.
ಗುರುಸಿದ್ದೇಶ್ವರ ಬೃಹನ್ಮಠದ ಬಸವರಾಜ ಪಟ್ಟದಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮಠದ ಪರಂಪರೆ ಆಶ್ರಯದಲ್ಲಿ ಶಿಕ್ಷಣ, ಸಮಾನತೆ, ಸಮಾಜದ ಅಭಿವೃದ್ಧಿ ಮುಂತಾದ ಕಾರ್ಯಗಳು ಹಿಂದಿನಿಂದಲೂ ನಡೆಯುತ್ತ ಬಂದಿವೆ. ಶಿವಯೋಗಮಂದಿರ ಸಂಸ್ಥೆಯು ವಟುಗಳಿಗೆ ತರಬೇತಿ, ಮಾರ್ಗದರ್ಶನ ಮಾಡುವ ಮೂಲಕ ಉತ್ತಮ ಸಮಾಜದ ನಿರ್ಮಾಣದ ಕನಸನ್ನು ಕುಮಾರ ಶಿವಯೋಗಿಗಳು ಹೊಂದಿದ್ದರು. ಅವರ ಕನಸು ನನಸಾಗಿದೆ. ಸಾರ್ಥಕಭಾವ ಇಲ್ಲಿ ಸಾಕಾರಗೊಂಡಿದೆ. ಪ್ರಶಿಕ್ಷಣಾರ್ಥಿಗಳು ಶಿವಯೋಗಮಂದಿರ ಕ್ಷೇತ್ರದ ಮಹತ್ವ ಅರಿಯಬೇಕು. ಶಿಕ್ಷಕರು ದೇಶ ಕಟ್ಟುವ ಕಾರ್ಯ ಮಾಡಬೇಕೆಂದರು.ಗುರುಸಿದ್ದೇಶ್ವರ ಬೃಹನ್ಮಠದ ನಿಯೋಜಿತ ಉತ್ತರಾಧಿಕಾರಿ ಗುರುಬಸವ ದೇವರು, ಶಿವಯೋಗಮಂದಿರ ಸಂಸ್ಥೆಯ ಶರಣಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಸಂಪನ್ಮೂಲ ಶಿಕ್ಷಕ ಶಿವಯೋಗಿ ಕುಂಬಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪ್ರಶಿಕ್ಷಣಾರ್ಥಿಗಳಾದ ಐಶ್ವರ್ಯ ಮಾಗಿ, ಸವಿತಾ ಪಾಟೀಲ,ಶಿಲ್ಪಾ ಖಂಡಿ ಶಿಬಿರದ ಅನುಭವಗಳ ಕುರಿತು ಅನಿಸಿಕೆ ಹಂಚಿಕೊಂಡರು. ಸಂಸ್ಥೆಯ ಪ್ರಾಚಾರ್ಯ ಡಾ.ಎಚ್.ಎಸ್. ಘಂಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮತನಾಡಿದರು.
ಗುರುಸಿದ್ದೇಶ್ವರ ವಿದ್ಯಾವರ್ಧಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕ ಶಶಿಧರ ಜಾಲಿಹಾಳ, ದೊಡ್ಡಬಸಪ್ಪ ಉಂಕಿ, ಸಂಯೋಜಕಿ ಇಂದುಮತಿ ಬೋರಣ್ಣವರ, ಕಾರ್ಯದರ್ಶಿ ಗಿರಿಜಾ ಮಾದಗುಂಡಿ ಉಪನ್ಯಾಸಕಿ ಸರಿತಾ ಚಂದನ್ನವರ, ಸಕ್ಕೂಭಾಯಿ ನೆಲ್ಲೂರ, ವಿ,ಕೆ.ಬದಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.