ವಿಜಯಪುರ: ಕೆಲವರು ವಿಜಯಪುರ ವಿಮಾನ ನಿಲ್ದಾಣದ ಅಭಿವೃದ್ಧಿ ನನ್ನ ಪ್ರಯತ್ನ, ನಾನು ಮಾಡಿಸಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ವಿಜಯಪುರ ವಿಮಾನ ನಿಲ್ದಾಣಕ್ಕೆ ನೈಟ್ ಲ್ಯಾಂಡಿಂಗ್, ಕಾರ್ಗೋ ಸೌಲಭ್ಯ ಹಾಗೂ ಪ್ರಥಮ ದರ್ಜೆಯ ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯ ಕಲ್ಪಿಸಬೇಕು ಎಂದು ವಿಧಾನಸಭೆಯಲ್ಲಿ ಅತ್ಯಂತ ಪ್ರಬಲವಾಗಿ, ನಿರಂತರವಾಗಿ ಧ್ವನಿ ಎತ್ತಿದ ನಾಯಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಎಂದು ಬಿಜೆಪಿ ಮುಖಂಡ ಡಾ.ಬಸನಗೌಡ ಪಾಟೀಲ ನಾಗರಾಳ ಹುಲಿ ಹೇಳಿದ್ದಾರೆ.
ನೈಟ್ ಲ್ಯಾಂಡಿಂಗ್ ಮತ್ತು ಕಾರ್ಗೋ ಸೌಲಭ್ಯ ದೊರೆತರೆ ವಿಜಯಪುರದ ದ್ರಾಕ್ಷಿ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ದೊರೆಯುತ್ತದೆ, ಕೈಗಾರಿಕೆಗಳು ಬೆಳೆಯುತ್ತವೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ ಹಾಗೂ ಸಾವಿರಾರು ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂಬ ಸ್ಪಷ್ಟ ನಿಲುವನ್ನು ಅವರು ಸದನದಲ್ಲಿ ಮಂಡಿಸಿದರು ಎಂದರು.