ಧರ್ಮಾ ನದಿಗೆ ನಿರ್ಮಾಣವಾಗದ ತಡೆಗೋಡೆ, ನೀಗದ ರೈತರ ಆತಂಕ

KannadaprabhaNewsNetwork |  
Published : Sep 10, 2026, 02:15 AM IST
ಮಳೆಗಾಲದಲ್ಲಿ ನದಿ ತುಂಬಿದಾಗ ಗೊಬ್ಬರ ಚೀಲ ಹೊತ್ತು ಆತಂಕದಲ್ಲಿಯೇ ಕಂಬಗಳ ಮೇಲೆ ನಡೆಯುತ್ತಿರುವ ರೈತ. | Kannada Prabha

ಸಾರಾಂಶ

ಮಳೆಗಾಲದಲ್ಲಿ ನದಿ ತುಂಬಿ ಹರಿಯುತ್ತಿರುವ ಕಾರಣ ಹಾನಗಲ್ಲಿನ ರೈತರು ನಾಲ್ಕೈದು ಕಿಮೀ ದೂರದಿಂದ ತಮ್ಮ ಜಮೀನಿಗೆ ಬರಬೇಕಾದ ಅನಿವಾರ್ಯತೆ ಇದೆ.

ಮಾರುತಿ ಶಿಡ್ಲಾಪೂರ

ಹಾನಗಲ್ಲ: ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರುವ ಧರ್ಮಾ ನದಿಯ ದಡಕ್ಕೆ ತಡೆಗೋಡೆ ಹಾಗೂ ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದು, ಕೂಡಲೇ ನಿರ್ಮಿಸಿ ಕೊಡಬೇಕು ಎಂದು ಕೃಷಿಕರು ಒತ್ತಾಯಿಸುತ್ತಿರುವುದಲ್ಲದೆ, ಪ್ರತಿ ವರ್ಷ ನದಿಯ ನೀರು ಕೃಷಿ ಭೂಮಿಗೆ ನುಗ್ಗಿ ಬೆಳೆ ಹಾಳಾಗುತ್ತಿರುವ ಆತಂಕಕ್ಕೆ ತೆರೆ ಹಾಡಬೇಕು ಎಂಬ ಬೇಡಿಕೆಗೆ ನೀರಾವರಿ ಇಲಾಖೆ ಸ್ಪಂದಿಸಬೇಕಾಗಿದೆ.

ಹಾನಗಲ್ಲಿನ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಧರ್ಮಾ ನದಿಯು ಅಶೋಕ ದಾಸರ ಅವರ ಹೊಲದ ಹತ್ತಿರ ದಡವನ್ನು ಸೀಳಿ ಕೃಷಿ ಜಮೀನನ್ನು ಪ್ರವೇಶಿಸುತ್ತದೆ. ಇದರಿಂದ ಅಲ್ಲಿ ಬೆಳೆದ ಭತ್ತ, ಗೋವಿನ ಜೋಳ, ಅಡಕೆ ಸೇರಿದಂತೆ ತೋಟಗಾರಿಕೆ ಬೆಳೆಗಳು ಹಾಳಾಗಿ ಉತ್ತಿ ಬಿತ್ತಿದ ಬೆಳೆ ಕೈಗೆ ಸಿಗದಂತಾಗುವ ಆತಂಕವನ್ನು ಇಲ್ಲಿನ ರೈತರು ಪ್ರತಿ ವರ್ಷ ಎದುರಿಸುತ್ತಿದ್ದಾರೆ. ಈಗ ಅಶೋಕ ದಾಸರ ಅವರ ಜಮೀನಿನ ಬಳಿ ಧರ್ಮಾ ನದಿಗೆ ಅಂದಾಜು ೪೦ ಮೀಟರ್ ಉದ್ದದ ಹಾಗೂ ೧೨ ಅಡಿ ಎತ್ತರದ ತಡೆಗೋಡೆ ನಿರ್ಮಿಸಿದರೆ ಮಾತ್ರ ಧರ್ಮಾ ನದಿಯ ನೀರು ಜಮೀನಿಗೆ ನುಗ್ಗುವುದನ್ನು ತಡೆಯಬಹುದಾಗಿದೆ. ಈಗ ಅಲ್ಲಿನ ರೈತರೇ ಧರ್ಮಾ ನದಿಯ ದಡಕ್ಕೆ ಒಂದಷ್ಟು ಕಲ್ಲು, ಮಣ್ಣು ಹಾಕಿಕೊಂಡು ನದಿ ಭೂಮಿಗೆ ನುಗ್ಗುವುದನ್ನು ತಡೆಯಲು ಹರ ಸಾಹಸ ಮಾಡುತ್ತಿದ್ದಾರೆ.

ಮಳೆಗಾಲದಲ್ಲಿ ನದಿ ತುಂಬಿ ಹರಿಯುತ್ತಿರುವ ಕಾರಣ ಹಾನಗಲ್ಲಿನ ರೈತರು ನಾಲ್ಕೈದು ಕಿಮೀ ದೂರದಿಂದ ತಮ್ಮ ಜಮೀನಿಗೆ ಬರಬೇಕಾದ ಅನಿವಾರ್ಯತೆ ಇದೆ. ಇಲ್ಲಿಯೇ ರಾಮಲಿಂಗೇಶ್ವರ ದೇವಸ್ಥಾನದ ಬಳಿ ನದಿಗೆ ಒಂದು ಸೇತುವೆ ನಿರ್ಮಿಸಿದರೆ ಇಲ್ಲಿನ ನೂರಾರು ಎಕರೆ ಜಮೀನಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ಅನುಕೂಲ ಎಂದು ದಶಕಗಳಿಂದ ರೈತರು ಸರ್ಕಾರ ಮೇಲೆ ಒತ್ತಡ ಹಾಕುತ್ತಲೇ ಇದ್ದಾರೆ.

ಮಳೆಗಾಲದಲ್ಲಿ ಹಾನಗಲ್ಲಿನಿಂದ ತಮ್ಮ ಕೃಷಿ ಭೂಮಿಗೆ ತೆರಳಲು, ಕೃಷಿಗೆ ಅಗತ್ಯ ಗೊಬ್ಬರ ಹಾಗೂ ಇತರ ಸಾಮಗ್ರಿಗಳನ್ನು ಕೊಂಡೊಯ್ಯಲು ಹರ ಸಾಹಸ ಪಡಬೇಕಾಗಿದೆ. ಇದಕ್ಕಾಗಿ ತಾತ್ಕಾಲಿಕವಾಗಿ ಒಂದು ಸಿಮೆಂಟ್ ಕಂಬ ಕಟ್ಟಿಕೊಂಡು ಅದಕ್ಕೆ ಉದ್ದನೆಯ ಎರಡುಮೂರು ಕಂಬಗಳನ್ನು ಹಾಕಿಕೊಂಡು ಅತ್ಯಂತ ಆತಂಕದಲ್ಲಿ ಓಡಾಡುವಂತಾಗಿದೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುತ್ತಿರುವ ಸಂದರ್ಭದಲ್ಲಿ ಇದು ಅಪಾಯಕಾರಿ ಓಡಾಟವಾಗಿದೆ.

ಇದಕ್ಕೆಲ್ಲ ತೆರೆ ಎಳೆಯಲು ಶೀಘ್ರ ತಡೆಗೋಡೆ ಹಾಗೂ ಕೃಷಿ ಅಗತ್ಯ ವಾಹನಗಳ ಓಡಾಟಕ್ಕೆ ಒಂದು ಸೇತುವೆಯ ಜರೂರ ಅಗತ್ಯವಿದೆ ಎಂದು ಇಲ್ಲಿನ ರೈತರು ಒತ್ತಾಯಿಸುತ್ತಲೇ ಇದ್ದಾರೆ. ಹಾನಗಲ್ಲಿನಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಸಚಿವ ಶಾಸಕರು ಅಧಿಕಾರಿಗಳಿಗೂ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸಲು ಮನವಿ ಮಾಡಿದ್ದಾರೆ.

ಪೈರು ಹಾಳು: ಧರ್ಮಾ ನದಿಯ ಹರಿವಿನಿಂದ ದಂಡೆ ಒಡೆದು ಬಿತ್ತಿದ ಭೂಮಿಯಲ್ಲಿ ನೀರು ತುಂಬಿ ಪೈರು ಹಾಳಾಗುತ್ತಿದೆ. ಮಳೆಗಾಲದಲ್ಲಿ ದೇವಸ್ಥಾನದ ದಂಡೆಯಿಂದ ಜಮೀನಿಗೆ ಹೋಗಲು ಸಾಧ್ಯವಾಗುವುದೇ ಇಲ್ಲ. ನಮ್ಮ ರೋದನ ಕೇಳುವವರೆ ಇಲ್ಲದಾಗಿದೆ. ಬೇಗ ಇದಕ್ಕೆ ಪರಿಹಾರ ಒದಗಿಸಬೇಕು ಎಂದು ಧರ್ಮಾ ನದಿ ದಡದ ಕೃಷಿಕ ಅಶೋಕ ದಾಸರ ತಿಳಿಸಿದರು.

ಶೀಘ್ರ ತಡೆಗೋಡೆ ನಿರ್ಮಾಣ: ಇಲ್ಲಿನ ಸೇತುವೆ ನಿರ್ಮಾಣ ನಮ್ಮ ಇಲಾಖೆಗೆ ಬರುವುದಿಲ್ಲ. ಲೋಕೋಪಯೋಗಿ ಇಲಾಖೆ ಮೂಲಕ ಇದು ಸಾಧ್ಯ. ಆದರೆ ತಡೆಗೋಡೆ ನಿರ್ಮಾಣಕ್ಕೆ ಬೇಕಾಗುವ ಅನುದಾನಕ್ಕಾಗಿ ಕೂಡಲೇ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ, ಶೀಘ್ರ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಜರುಗಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಕಿರಿಯ ಅಭಿಯಂತರ ಎಂ.ಎ. ಬಡಿಗೇರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಡಾ: ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮರು ಮಾರಾಟ!
ದೇಶಕ್ಕೆ ಆರೋಗ್ಯವಂತ ಸಮಾಜ ಅತ್ಯಗತ್ಯ