ಕನ್ನಡಪ್ರಭ ವಾರ್ತೆ ಹಾಸನ
ಡಿವೈಎಸ್ಪಿ ಪಾಲಾಕ್ಷ ಮಾತನಾಡಿ, ಅನೇಕ ಯೋಧರು ದೇಶಕ್ಕೆ ತಮ್ಮ ಪ್ರಾಣವನ್ನು ನೀಡಿದ್ದು, ಅವರನ್ನು ಸ್ಮರಣೆ ಮಾಡುವ ದಿನವಾಗಿದೆ. ಗಡಿಭಾಗದಲ್ಲಿ ನಮಗಾಗಿ ಕೆಟ್ಟ ಪರಿಸ್ಥಿತಿಯಲ್ಲೂ ಕೂಡ ಶತ್ರು ದೇಶದ ವಿರುದ್ಧ ಹೋರಾಡಿ, ನಮ್ಮ ನಾಡನ್ನು ರಕ್ಷಣೆ ಮಾಡಿ ನಮ್ಮನ್ನೆಲ್ಲಾ ರಕ್ಷಣೆ ಮಾಡಿ ಸಾವಿರಾರು ಜನ ಯೋಧವರನ್ನು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಎಷ್ಟೋ ಜನ ತಂದೆ ತಾಯಿಯಂದಿರು ಮಕ್ಕಳನ್ನು ಹಾಗೂ ಪತ್ನಿಯರು ತಮ್ಮ ಗಂಡನನ್ನು ಕಳೆದುಕೊಂಡಿದ್ದಾರೆ ಎಂದರು. ಅವರ ತ್ಯಾಗಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಸದಾಕಾಲ ಅವರನ್ನ ನೆನಪಿಸಿಕೊಂಡು ಗೌರವ ಸಮರ್ಪಣೆ ಮಾಡುವುದು ನಮ್ಮ ಎಲ್ಲರ ಆದ್ಯ ಕರ್ತವ್ಯ. ಪ್ರಾಣ ಕಳೆದುಕೊಂಡ ಯೋಧರು ಸದಾಕಾಲ ಅಮರರು ಎಂದು ಬಣ್ಣಿಸಿದರು.
ನಿವೃತ್ತ ಯೋಧರ ಸಂಘದ ಗೌರವಾಧ್ಯಕ್ಷ ಕರ್ನಲ್ ನಟೇಶ್ ಮಾತನಾಡಿ, ೧೯೭೧ರಲ್ಲಿ ಪಾಕಿಸ್ತಾನದ ಜೊತೆ ನಡೆದ ಯುದ್ಧದಲ್ಲಿ ನಮ್ಮ ಯೋಧರು ಉತ್ತಮ ಪ್ರದರ್ಶಿಸಿದ ಬಗ್ಗೆ ನೆನಪಿಸಿಕೊಂಡರು. ಪಾಕಿಸ್ತಾನವನ್ನು ಬಗ್ಗು ಬಡಿದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ದಿನವಾಗಿದೆ. ಹೋರಾಡಿದ ಸೈನಿಕರ ಶೌರ್ಯ, ತ್ಯಾಗ ಹಾಗೂ ಸಾಹಸವನ್ನು ಸ್ಮರಿಸುವ ಉದ್ದೇಶದಿಂದ ಈ ದಿನವನ್ನು ವಿಜಯ್ ದಿವಸ್ ಎಂದು ಆಚರಿಸುವ ಮೂಲಕ ವೀರ ಹುತಾತ್ಮರಿಗೆ ನಮನವನ್ನು ಸಲ್ಲಿಸಲಾಗುತ್ತಿದೆ. ಸಮಾಜದ ಎಲ್ಲಾ ವರ್ಗದವರನ್ನು ಕರೆದುಕೊಂಡು ದೇಶ ಸೇವೆಗೆ ಕರೆದುಕೊಂಡು ಹೋಗಿದ್ದಾರೆ. ಯೋಧರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.ನಿವೃತ್ತ ಯೋಧರ ಸಂಘದ ಅಧ್ಯಕ್ಷ ಎನ್. ವೆಂಕಟೇಶ್ ಮಾತನಾಡಿ, ನಾನು ಯಾವುದೇ ಸೇವೆ ಮಾಡಿದರೂ ಅದು ನಮ್ಮ ದೇಶ ಸೇವೆಗೆ ಮತ್ತು ಇನ್ನೊಂದು ತಂದೆ ತಾಯಿಗೆ. ಸಮಾಜದಲ್ಲಿ ಉತ್ತಮ ಕೆಲಸ ಮಾಡಿದರೇ ಒಳ್ಳೆಯ ದಾರಿ ಸಿಗುತ್ತದೆ ಎಂದು ಹೇಳಿದರು.
ಇದೇ ವೇಳೆ ನಿವೃತ್ತಗೊಂಡ ಯೋಧರನ್ನು ಹಾಗೂ ಎನ್ಸಿಸಿ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಿದರು.