ಹಾಲುಮತದ ಮೂಲಪುರುಷ ರೇವಣಸಿದ್ದೇಶ್ವರ

KannadaprabhaNewsNetwork | Published : Mar 15, 2025 1:07 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಹಾಲುಮತ ಧರ್ಮದ ಐತಿಹಾಸಿಕ ಮೂಲಪುರುಷ ರೇವಣಸಿದ್ದೇಶ್ವರ ಜಯಂತಿಯನ್ನು ಆಚರಣೆ ಮಾಡುವ ಮೂಲಕ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಜಾತಿ ರಹಿತ, ಧರ್ಮ ರಹಿತ, ಸಮ ಸಮಾಜ ದೇಶ ನಿರ್ಮಾಣ ವೇದಿಕೆಯ ರಾಷ್ಟ್ರೀಯ ಆದಿ ಜಗದ್ಗುರು ರೇವಣಸಿದ್ದೇಶ್ವರ ಸಂಘಟನೆಯ ರಾಜ್ಯಾಧ್ಯಕ್ಷ, ಮನಗೂಳಿ ಜಗದ್ಗುರು ಪೀಠಾಧಿಪತಿ ಶರಭಯ್ಯ ಸ್ವಾಮೀಜಿ ಹೇಳಿದರು

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಹಾಲುಮತ ಧರ್ಮದ ಐತಿಹಾಸಿಕ ಮೂಲಪುರುಷ ರೇವಣಸಿದ್ದೇಶ್ವರ ಜಯಂತಿಯನ್ನು ಆಚರಣೆ ಮಾಡುವ ಮೂಲಕ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಜಾತಿ ರಹಿತ, ಧರ್ಮ ರಹಿತ, ಸಮ ಸಮಾಜ ದೇಶ ನಿರ್ಮಾಣ ವೇದಿಕೆಯ ರಾಷ್ಟ್ರೀಯ ಆದಿ ಜಗದ್ಗುರು ರೇವಣಸಿದ್ದೇಶ್ವರ ಸಂಘಟನೆಯ ರಾಜ್ಯಾಧ್ಯಕ್ಷ, ಮನಗೂಳಿ ಜಗದ್ಗುರು ಪೀಠಾಧಿಪತಿ ಶರಭಯ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಮನಗೂಳಿ ಪಟ್ಟಣದ ಆದಿ ಜಗದ್ಗುರು ರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ರೇವಣಸಿದ್ದೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರೇವಣಸಿದ್ದೇಶ್ವರರು ಹಾಲುಮತ ಸಮಾಜದ ಮೂಲ ಗುರುಗಳು. ಇವರು ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮದ ಸಿದ್ದಶಿವಯೋಗಿ, ಶಾಂತಿಮಯ್ಯ ದೇವಂಗಳ ಪುತ್ರರಾಗಿ ಮಹಾದೇವಿ ಗರ್ಭ ಸಂಜಾತರಾಗಿ ಪಾಲ್ಗುಣ ಶುದ್ಧ ತ್ರಯೋದಶಿಯಂದು ಸರೂರಿನಲ್ಲಿ ಲೋಕಕಲ್ಯಾಣಕ್ಕಾಗಿ ಜನ್ಮತಾಳಿದರು. ಸರೂರು ಜನ್ಮಭೂಮಿಯಾದರೂ ಕರ್ಮಭೂಮಿಯಾಗಿ ಕೊಲ್ಲಿಪಾಕಿ ಮಾಡಿಕೊಂಡು ಆಧ್ಯಾತ್ಮಿಕ ಲೋಕಕ್ಕೆ ಅಮೂಲ್ಯವಾದ ಕೊಡುಗೆ ಕೊಟ್ಟಿದ್ದಾರೆ. ಬಡಜನರ ಉದ್ಧಾರ, ರೈತ ಸಮುದಾಯಗಳ ಬಗ್ಗೆ ಇವರಿಗಿದ್ದ ದೂರದೃಷ್ಟಿ ಸಾಮಾಜಿಕ ಕಳಕಳಿಯನ್ನು ನಾವು ಎಂದಿಗೂ ಮರೆಯುವಂತಿಲ್ಲ ಎಂದರು.ರೇವಣಸಿದ್ದೇಶ್ವರರು ಹಾಲುಮತ ಸಮಾಜದ ಅತ್ಯಂತ ಪ್ರಾಚೀನ ಗುರುವರ್ಯರು. ಇಂದಿನ ಸಮಾಜದಲ್ಲಿ ಕೆಲವರು ಕಾಲ್ಪನಿಕ ಕಪೋಕಲ್ಪಿತ ರೇಣುಕಾಚಾರ್ಯರ ಹೆಸರಿನಲ್ಲಿ ಜಗದ್ಗುರು ರೇವಣಸಿದ್ದೇಶ್ವರರ ಪರಂಪರೆಯನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದು ನಮ್ಮ ಗುರುಪರಂಪರೆಗೆ ಕಪ್ಪುಚುಕ್ಕೆ. ರೇವಣಸಿದ್ದೇಶ್ವರರು ಹಾಲುಮತ ಧರ್ಮ ಸಂಸ್ಕೃತಿಯನ್ನು ಸ್ಥಾಪಿಸಿ ಉಳಿಸಿದ್ದನ್ನು ಎಂದಿಗೂ ಮರೆಯುವಂತಿಲ್ಲ. ರೇವಣಸಿದ್ಧೇಶ್ವರರು ಸಾಮಾನ್ಯರಲ್ಲ. ಅವರು ಸಕಲ ಸಮುದಾಯದ ಹಿತವನ್ನು ಬಯಸಿದವರು. ಜನ ಸಮುದಾಯಗಳಲ್ಲಿ ಧಾರ್ಮಿಕ, ಸಾಮಾಜಿಕ ಕ್ರಾಂತಿಗೈದ ಜಗದ್ಗುರು ಎಂದು ಸ್ಮರಿಸಿದರು.ಈ ಸಂದರ್ಭದಲ್ಲಿ ಅಡವಯ್ಯ ಸರೂರುಮಠ, ರೇವಣಸಿದ್ದ ಮಣೂರ, ಮಹಾಂತೇಶ ಅಂಬಳನೂರ, ಬಾಬು ಯರನಾಳ, ಮಾಳು ನಾಗರಾಳ ಇತರರು ಇದ್ದರು.

Share this article