ನರಸಿಂಹರಾಜಪುರ ಪಟ್ಟಣ ಪಂಚಾಯಿತಿ 2025-26 ನೇ ಸಾಲಿನ ಬಜೆಟ್ ಮಂಡನೆ । ₹55 ಲಕ್ಷ ಉಳಿತಾಯ
ಕನ್ನಡಪ್ರಭ ವಾರ್ತೆ , ನರಸಿಂಹರಾಜಪುರಪಟ್ಟಣ ಪಂಚಾಯಿತಿ 2025–26ನೇ ಸಾಲಿಗೆ ₹55 ಲಕ್ಷ ಉಳಿತಾಯ ಆಯವ್ಯಯ ಬಜೆಟ್ ನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಶುಕ್ರವಾರ ಮಂಡಿಸಿದರು.
ರಾಜಸ್ವ ಸ್ವೀಕೃತಿಗಳಿಂದ ₹4.58 ಕೋಟಿ , ಬಂಡವಾಳ ಸ್ವೀಕೃತಿಗಳಿಂದ ₹68 ಲಕ್ಷ ಸೇರಿ ಒಟ್ಟು ₹6.10 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ರಾಜ ಸ್ವ ಪಾವತಿಗಳು ₹4,44 ಕೋಟಿ, ಬಂಡವಾಳ ಪಾವತಿಗಳು₹ 1,11ಕೋಟಿ ಸೇರಿ ಒಟ್ಟು₹5.55 ಕೋಟಿ ವೆಚ್ಚ ನಿರೀಕ್ಷಿಸಲಾಗಿದೆ. ಒಟ್ಟು ₹55 ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.ಪ್ರಸ್ತುತ ಮತ್ತು ಭವಿಷ್ಯದ ಅಗತ್ಯತೆಗಳಿಗಾಗಿ ಆಯವ್ಯಯ ತಯಾರಿ ಮಾಡುವ ಮೂಲಕ ಆರ್ಥಿಕ ಸ್ಥಿರತೆ ಕಾಪಾಡುವಲ್ಲಿ ಆಯವ್ಯಯ ಸಹಕಾರಿಯಾಗಲಿದೆ. ಆಯವ್ಯಯದಲ್ಲಿ ವೆಚ್ಚ ಕಡಿತಗೊಳಿಸಿ ಉಳಿತಾಯ ಹೆಚ್ಚಿಸಲು ಆದ್ಯತೆ ನೀಡಲಾಗಿದೆ. ವಿವಿಧ ಯೋಜನೆಗಳಿಗೆ ಸರ್ಕಾರದಿಂದ ಅನುದಾನ ತರಲು ಪ್ರಯತ್ನಿಸಲಾಗುವುದು. ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿದಿನ ನೀರು ಪೂರೈಸಲಾಗುತ್ತಿದ್ದರೂ ನೀರಿನ ಶುಲ್ಕ ವಸೂಲಾತಿಯಾಗುತ್ತಿಲ್ಲ. ಇದನ್ನು ವಸೂಲಿ ಮಾಡಬೇಕು. ಉದ್ದಿಮೆಗಳ ಪರವಾನಿ ಗೆಯನ್ನು ಏ. 31ರೊಳಗೆ ಮಾಡಿಸಬೇಕು. ವಾಣಿಜ್ಯ ಮಳಿಗೆಗಳ ಉಳಿಕೆ ಬಾಡಿಗೆ ವಸೂಲಿ ಮಾಡಿದರೆ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದರು.
ಪಟ್ಟಣ ಪಂಚಾಯಿತಿ ಅಂಗಡಿ ಮಳಿಗೆಗಳಲ್ಲಿ ಬಾಡಿಗೆಗೆ ಇದ್ದು ಬಾಡಿಗೆ ಪಾವತಿಸದೆ ಬಾಗಿಲು ಹಾಕಿರುವ ಮಳಿಗೆಗಳ ಒಳಗಿರುವ ಸರಕುಗಳು ಪೊಲೀಸ್ ಇಲಾಖೆ ಸಹಕಾರದಿಂದ ಸುರಕ್ಷಿತವಾಗಿಟ್ಟು ಮಳಿಗೆಗಳನ್ನು ಹರಾಜು ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದರು.ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿ, 2025–26ನೇ ಸಾಲಿನ ಆಯವ್ಯಯ ಆಡಳಿತದ ದಿಕ್ಸೂಚಿಯಾಗಿದೆ. ಆಯವ್ಯಯದಲ್ಲಿ ಘೋಷಣೆಯಾದಂತೆ ಎಲ್ಲಾ ಜನಪರ ಕೆಲಸ ಜಾರಿಯಾಗಬೇಕು. ಶವ ಸಂಸ್ಕಾರಕ್ಕೆ ₹3 ಸಾವಿರ ನೆರವು ನೀಡಲಾಗುತ್ತಿದೆ. ಬಡ ಹೆಣ್ಣು ಮಕ್ಕಳ ಮದುವೆಗೆ ₹5 ಸಾವಿರ ನೀಡಲು ಆಶಿಸಲಾಗಿತ್ತು. ವೆಚ್ಚಗಳನ್ನು ಕಡಿಮೆ ಮಾಡುವತ್ತ ಗಮನಹರಿಸಬೇಕು. ಜನರ ಭರವಸೆ ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.ಸಭೆಯಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಮಾಕೇಶವ್, ಸದಸ್ಯರಾದ ಆರ್.ಕುಮಾರಸ್ವಾಮಿ, ಸುರಯ್ಯಬಾನು, ಪಿ.ಜೆ.ಶೋಜಾ, ಮುನಾವರಪಾಷ, ರೀನಾ ಮೋಹನ್, ರೇಖಾ, ಮುಕುಂದ, ರಜಿ, ಅಣ್ಣಪ್ಪ, ಸುಬ್ರಹ್ಮಣ್ಯ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಲಕ್ಷ್ಮಣಗೌಡ ಇದ್ದರು. ಲೆಕ್ಕಾಧಿಕಾರಿ ಉಷಾ 16 ನೇ ಬಾರಿ ಬಜೆಟ್ ತಯಾರಿಸಿದ್ದು ವಿಶೇಷವಾಗಿತ್ತು.