ಕನ್ನಡಪ್ರಭ ವಾರ್ತೆ, ತುಮಕೂರು ಉದ್ಯೋಗಿ ಪ್ರಯಾಣಿಕರು ಮೆಜೆಸ್ಟಿಕ್ ತಲುಪಲು ಅನುಕೂಲವಾಗುಬಂತೆ ನಗರದಿಂದ ಬೆಳಗ್ಗೆ 8 ಕ್ಕೆ ಹೊರಡುವ ತುಮಕೂರು-ಯಶವಂತಪುರ ಮೆಮು ರೈಲು ಹೊರಡುವ ಸಮಯವನ್ನು ಬೆಳಗ್ಗೆ 7.45 ಕ್ಕೆ ಬದಲಾಯಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಪ್ರಧಾನ ವ್ಯವಸ್ಥಾಪಕ ಅಶುತೋಶ್ ಕೆ.ಸಿಂಗ್ ಭರವಸೆ ನೀಡಿದರು.ಬುಧವಾರ ಬೆಂಗಳೂರಿನಲ್ಲಿ ನಡೆದ ನೈಋತ್ಯ ರೈಲ್ವೆ ವಲಯದ ಬೆಂಗಳೂರು ವಿಭಾಗದ ರೈಲು ಪ್ರಯಾಣಿಕರ ಸಲಹಾ ಸಮಿತಿ ಸಭೆಯಲ್ಲಿ ಸಮಿತಿ ಸದಸ್ಯ ಹಾಗೂ ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್ ಅವರ ಮನವಿಗೆ ಸ್ಪಂದಿಸಿ ಮಾತನಾಡಿದರು.ಉದ್ಯೋಗಿ ಪ್ರಯಾಣಿಕರಿಹಾಗಿಯೇ ಆರಂಭಿಸಿದ ಸದರಿ ಮೆಮು ರೈಲು ಆರಂಭದಿಂದಲೂ ಕೆಎಸ್ಆರ್ ವರೆಗೆ ಸಾಗುತ್ತಿತ್ತು. ಆದರೆ ಶಿವಮೊಗ್ಗ ಜನಶತಾಬ್ಧಿ ರೈಲಿಗೆ ದಾರಿ ಮಾಡಿಕೊಡಲು ಮೆಮು ರೈಲನ್ನು ಯಶವಂತಪುರಕ್ಕೆ ಸೀಮಿತಗೊಳಿಸಲಾಯಿತು. ಇದರಿಂದ ಸಾವಿರಕ್ಕೂ ಹೆಚ್ಚು ಉದ್ಯೋಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಆರ್ಥಿಕವಾಗಿಯೂ ಹೊರೆಯಾಗುತ್ತಿದೆ. ವಿಳಂಬದಿಂದ ಹಲವರು ಉದ್ಯೋಗ ಕಳೆದುಕೊಳ್ಳುವಂತಾಗಿದೆ ಎಂದು ಪ್ರಯಾಣಿಕರ ಸಮಸ್ಯೆಯನ್ನು ವಿವರಿಸಿ ಮೆಮು ರೈಲನ್ನು ಕೆಎಸ್ಆರ್ ವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಿದರು.ಇದಕ್ಕೆ ಉತ್ತರಿಸಿದ ಡಿ ಆರ್ ಎಂ, ಕೆಎಸ್ಆರ್ ನಲ್ಲಿ ಪ್ಲಾಟ್ ಫಾರಂಗಳ ತೀವ್ರ ತೊಂದರೆಯಿದ್ದು ಮೆಮು ವಿಸ್ತರಣೆ ಸಾಧ್ಯವಿಲ್ಲ ಎಂದರಲ್ಲದೆ, ನಿಮ್ಮ ಸಲಹೆಯಂತೆ ಸಮಯ ಬದಲಾವಣೆ ಮಾಡಿ ಯಶವಂತಪುರದಲ್ಲಿ ಕೋಲಾರ-ಬೆಂಗಳೂರು ರೈಲಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಸಕಾರಾತ್ಮಕವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಪ್ಲಾಟ್ ಫಾರಂಗಳ ಕೊರತೆ ಹಿನ್ನಲೆಯಲ್ಲಿ ಸದರಿ ನಿಲ್ದಾಣವನ್ನು ಪಾಸಿಂಗ್ ಥ್ರೂ ನಿಲ್ದಾಣವನ್ನಾಗಿಸಿದರೆ ಹೆಚ್ಚು ರೈಲುಗಳನ್ನು ಬೆಂಗಳೂರಿನವರೆಗೆ ವಿಸ್ತರಿಸಬಹುದಾಗಿದೆ. ಈ ಬಗ್ಗೆ ಗಮನ ಹರಿಸಬೇಕೆಂದು ಕರಣಂ ರಮೇಶ್ ಸಲಹೆ ನೀಡಿದರುಯಶವಂತಪುರ ತುಮಕೂರು ನಡುವೆ ಸಂಚರಿಸುವ ಮೆಮು ರೈಲುಗಳಿಗೆ ಭೈರನಾಯಕನಹಳ್ಳಿ, ಮುದ್ದಲಿಂಗನಗಳ್ಳಿ, ನಿಡುವಂದ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಬೇಕೆಂಬ ಮನವಿಗೆ ಉತ್ತರಿಸಿದ ಡಿ ಆರ್ ಎಂ, ಎಲ್ಲ ಮೆಮು ರೈಲುಗಳಿಗೆ ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಲು ಸಾಧ್ಯವಾಗದು. ಅದರೆ ಮುದ್ದನಾಯಕನಹಳ್ಳಿಯಲ್ಲಿ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಚಾಮರಾಜನಗರ ತುಮಕೂರಿಗೆ ಬರುವ ರೈಲು ಸಂಚಾರವನ್ನು ಮಧ್ಯಾಹ್ನಕ್ಕೆ ಬದಲಾಗಿ ಸಂಜೆ 4.30 ಕ್ಕೆ ಬೆಂಗಳೂರಿನಿಂದ ಹೊರಡುವಂತೆ ಮಾಡಬೇಕು. ಇದರಿಂದ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ನೇರ ರೈಲು ಸಂಪರ್ಕ ಕಲ್ಪಿಸಿದಂತಾಗುತ್ತದೆ. ಅಲ್ಲದೆ, ವಿದ್ಯಾರ್ಥಿಗಳು, ಉದ್ಯೋಗಿಗಳು, ಶಿಕ್ಷಕರು ಮತ್ತು ಉಪನ್ಯಾಸಕರು ಹಾಗೂವ ಸರ್ವಂಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕರಣಂ ರಮೇಶ್ ಮಾಡಿದ ಮನವಿಗೆ ಉತ್ತರಿಸಿದ ಡಿ ಆರ್ ಎಂ ಅಶುತೋಷ್ ಕೆ. ಸಿಂಗ್ ಅವರು ಓ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಸಮಿತಿಯ ಕಾರ್ಯದದರ್ಶಿ, ಸೀನಿಯರ್ ಡಿಸಿಎಂ ಕೃಷ್ಣ ಚೈತನ್ಯ, ಸೀಮಿಯರ್ ಡಿಒಎಂ ಪ್ರಿಯ ಮತ್ತಿತರರು ಭಾಗವಹಿಸಿದ್ದರು.