ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಗಂಗಾವತಿಅತಿಯಾದ ರಸಾಯನಿಕ ಬಳಕೆಯಿಂದ ಮಾನವ ಜನಾಂಗಕ್ಕೆ ಅಪಾಯ ಎಂದು ಸಾವಯವ ಕೃಷಿಕ ಬಸಯ್ಯ ಹಿರೇಮಠ ಕಳವಳ ವ್ಯಕ್ತಪಡಿಸಿದರು.
ನಗರದ ಇಸ್ಲಾಂಪುರದಲ್ಲಿರುವ ಬಸವೇಶ್ವರ ಆಯಿಲ್ ಮಿಲ್ ಆವರಣದಲ್ಲಿ ಭಾವೈಕ್ಯತಾ ಗಜಾನನ ಸಮಿತಿ ಆಯೋಜಿಸಿದ್ದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.ಬತ್ತದ ಕಣಜ ಎಂದು ಖ್ಯಾತಿ ಪಡೆದಿರುವ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯ ಜನ ಅತಿ ಹೆಚ್ಚು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ.
ಅತಿಯಾದ ರಸಾಯನಿಕ ಮತ್ತು ಅಧುನಿಕ ಕೃಷಿ ಪದ್ಧತಿಯಿಂದಾಗಿ ಇಂದು ಗಂಗಾವತಿ, ಸಿಂಧನೂರು ಮತ್ತು ಸಿರುಗುಪ್ಪ ತಾಲೂಕಿನಲ್ಲಿ ಅತಿಹೆಚ್ಚು ಕ್ಯಾನ್ಸರ್ ಕಾಯಿಲೆ ಪತ್ತೆಯಾಗುತ್ತಿದೆ. ಬೆಂಗಳೂರಿನ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಮ್ಮ ಭಾಗದ ಜನರೇ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು.ಮುಖ್ಯ ಅತಿಥಿ ಹಿರಿಯ ನ್ಯಾಯವಾದಿ ಎಚ್. ಪ್ರಭಾಕರ ಮಾತನಾಡಿ, ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾವ ಹಬ್ಬ-ಹರಿದಿನ, ಸಂಭ್ರಮಾಚರಣೆ ಮುಕ್ತವಾಗಿ ಆಚರಿಸದಂತೆ ನಿರ್ಬಂಧ ಹೇರಲಾಗುತ್ತಿದೆ. ಎಲ್ಲ ಧರ್ಮಿಯರು ಪರಸ್ಪರ ನಂಬಿಕೆ, ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕಿದೆ ಎಂದರು.
ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾವಯವ ಕೃಷಿಕ ಬಸಯ್ಯ ಹಿರೇಮಠ, ಸಿದ್ದನಗೌಡ ಯರಡೋಣ, ಸಮಾಜ ಸೇವಕ ಎಂ.ಡಿ. ಆಸೀಫ್, ಹಿರಿಯ ಪತ್ರಕರ್ತ ರಾಮಮೂರ್ತಿ ನವಲಿ, ಮಹಿಳಾ ಸಾಧಕಿ ಹುಲಿಗೆಮ್ಮ, ಪೌರಕಾರ್ಮಿಕ ನಾಗರಾಜ ಅವರನ್ನು ಸನ್ಮಾನಿಸಲಾಯಿತು.ಸಾನಿಧ್ಯ ವಹಿಸಿದ್ದ ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ಮಾತನಾಡಿದರು. ನಗರಸಭೆಯ ಅಧ್ಯಕ್ಷ ಮೌಲಸಾಬ, ಸದಸ್ಯ ರಾಜಮೊಹ್ಮದ್, ಹಿರಿಯ ಮುಖಂಡ ಕೊಟ್ರಪ್ಪ ಅಕ್ಕಿ, ಉದ್ಯಮಿ ಸಿಂಗನಾಳ ಜಗದೀಶಪ್ಪ, ಜಿ. ಶ್ರೀಧರ, ಆನಂದ್ ಅಕ್ಕಿ, ಅಶ್ವಿನಿ ಅಕ್ಕಿ, ಎ.ಕೆ. ಮಹೇಶ ಕುಮಾರ, ಪತ್ರಕರ್ತ ಎಂ.ಜೆ. ಶ್ರೀನಿವಾಸ, ಇದ್ದರು. ಯುವ ಗಾಯಕ ಅಭಿನಂದನ್ ರಸಮಂಜರಿ ನಡೆಸಿಕೊಟ್ಟರು.