ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸಲು ಸಹಕರಿಸಿ

KannadaprabhaNewsNetwork | Published : Jun 8, 2025 1:19 AM
ಪರಿಸರ ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರುಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಹೈದರ್‌ ಅಲಿ ರಸ್ತೆಯಲ್ಲಿ ಪರಿಸರ ಸಂರಕ್ಷಣೆ ಜಾಗೃತಿಗಾಗಿ ಜಾಥ ಕಾರ್ಯಕ್ರಮ ನಡೆಸಿತು.ಹೈದರಲಿ ರಸ್ತೆಯಿಂದ ಆರಂಭವಾಗಿ ಚಾಮುಂಡಿ ವಿಹಾರ ಕ್ರೀಡಾಂಗಣ, ಗೋಪಾಲಗೌಡ ಆಸ್ಪತ್ರೆ, ಹಲೇ ಹಾಲಿನಡೈರಿ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ ಪರಿಸರ ಸಂರಕ್ಷಣೆ ಕುರಿತು ಮನವಿ ಸಲ್ಲಿಸಿತು.ರಾಜ್ಯ ಮಾಹಿತಿ ಹಕ್ಕು ಆಯೋಗದ ಮಾಜಿ ಆಯುಕ್ತ ಚಂದ್ರೇಗೌಡ ಮಾತನಾಡಿ, ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವ ಧ್ಯೇಯವಾಕ್ಯದೊಂದಿಗೆ ಜೂ. 5 ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಪರಿಸರ ವ್ಯವಸ್ಥೆ ರಕ್ಷಿಸಲು ತುರ್ತು ಜಾಗತಿಕ ಕ್ರಮಕ್ಕೆ ಈ ಕಾರ್ಯಕ್ರಮ ಕರೆ ನೀಡುತ್ತದೆ ಎಂದರು.ಪರಿಸರ ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. 2025ರ ಧ್ಯೇಯವಾಕ್ಯವು ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಮೈಸೂರಿನ ಹೈದರ್‌ ಅಲಿ ರಸ್ತೆಯ 40ಕ್ಕೂ ಹೆಚ್ಚು ಮರಗಳನ್ನು ಕಡಿದಿದ್ದು ಅದಕ್ಕೂ ಪರ್ಯಾಯವಾಗಿ ಗಿಡಗಳನ್ನು ನೆಡಬೇಕು. ಯುವ ಜನತೆಯ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸಬೇಕಿದೆ ಎಂದು ತಿಳಿಸಿದರು.ಹವಾಮಾನ ಬದಲಾವಣೆಯಿಂದ ಹಿಡಿದು ಜೀವವೈವಿಧ್ಯತೆಯ ನಷ್ಟದವರೆಗೆ ಪರಿಸರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತದೆ. ರಾಷ್ಟ್ರೀಯ ಗಡಿಗಳನ್ನು ಮೀರಿದ ಪರಿಸರ ಸವಾಲನ್ನು ಪರಿಹರಿಸುವಲ್ಲಿ ಅಂತಾರಾಷ್ಟ್ರೀಯ ಸಹಕಾರ ಬೆಳೆಸುತ್ತದೆ ಎಂದರು.ಸಂಸ್ಥೆ ನಿರ್ದೇಶಕಿ ಸರಸ್ವತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯು ಒಂದು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಕಳೆದ 40 ವರ್ಷಗಳಿಂದಲೂ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ 56 ಕೊಳಚೆ ಪ್ರದೇಶಗಳಲ್ಲಿ ಮತ್ತು ಉತ್ತರ ಕರ್ನಾಟಕದ 5 ಹಿಂದುಳಿದ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ, ಮಕ್ಕಳಾಭಿವೃದ್ಧಿ, ಯುವಕರ ಸಬಲೀಕರಣ, ಮಹಿಳಾಭಿವೃದ್ಧಿ ಸಮೂದಾಯ ಆರೋಗ್ಯ ಕಾರ್ಯಕ್ರಮಗಳು ಹಾಗೂ ಸರ್ಕಾರಿ ಯೋಜನೆಗಳ ಸದುಪಯೋಗ ಕುರಿತು ಜನರೊಟ್ಟಗೆ ಶ್ರಮಿಸುತ್ತದೆ. ಅಲ್ಲದೆ ಸಂಸ್ಥೆ ವತಿಯಿಂದ ಮೈಸೂರು, ಗುಂಡ್ಲುಪೇಟೆ, ಗುಲ್ಬರ್ಗ ಮತ್ತು ಬೀದರ್ ತಾಲೂಕಿನಲ್ಲಿ 40 ಯುವಕರ ಗುಂಪುಗಳನ್ನು ರಚಿಸಿದ್ದು, ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ಯೂತ್‌ ನೆಟ್ವರ್ಕ್ ಎಂಬ ಗುಂಪು ರಚನೆಯಾಗಿದೆ ಎಂದರು.ಯುವಜನರ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ, ಪರಿಸರ ಸಂಬಂಧಿ ಕಾರ್ಯಕ್ರಮಗಳು, ಸಾವಯವ ಗೊಬ್ಬರಗಳ ಬಳಕೆ, ಪ್ಲಾಸ್ಟಿಕ್ ಬಳಕೆಯ ನಿಷೇಧ, ಘನತ್ಯಾಜ್ಯ ಘಟಕ, ಜಾಗತಿಕ ತಾಪಮಾನ ಹಾಗೂ ಪ್ರಕೃತಿ ವಿಕೋಪ ಹೀಗೆ ಹಲವಾರು ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಮಕ್ಕಳು, ಮಹಿಳೆಯರು, ಯುವಜನರು ಮತ್ತು ಸಮುದಾಯಕ್ಕೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿದ್ದು, ಪರಿಸರ ಸಂರಕ್ಷಣೆಗೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.ಆರ್‌.ಎಲ್‌.ಎಚ್‌.ಪಿ ಕಾರ್ಯದರ್ಶಿ ಪ್ರೊ.ವಿ.ಕೆ. ಜೋಸ್‌, ಸೇರಿದಂತೆ 100ಕ್ಕೂ ಹೆಚ್ಚು ಯುವಕ, ಯುವತಿಯರು ಭಾಗವಹಿಸಿದ್ದರು.