ಪಟ್ಟಣದ ಮಾರುತಿ ನಗರ ಹಾಗೂ ಕಂದಕೂರು ಗ್ರಾಮಕ್ಕೆ ಈ ರಸ್ತೆಯ ಮೂಲಕ ಸಂಚರಿಸಬೇಕಿದೆ
ಕುಷ್ಟಗಿ: ಪಟ್ಟಣದಿಂದ ರೈಲ್ವೆ ನಿಲ್ದಾಣ, ಮಾರುತಿ ನಗರ ಹಾಗೂ ಕಂದಕೂರು, ನಾಗರಾಳ ಗ್ರಾಮಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಇದು ಪಟ್ಟಣದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವಾಗಿದ್ದು, ರಸ್ತೆಯುದ್ದಕ್ಕೂ ಗುಂಡಿಗಳು ಉಂಟಾಗಿದ್ದರಿಂದ ಸವಾರರು ಸಂಚಾರಕ್ಕೆ ಸಂಕಟ ಪಡುವಂತಾಗಿದೆ. ಈ ಮಾರ್ಗದಲ್ಲಿ ಗದಗ-ವಾಡಿ ರೈಲು ಮಾರ್ಗಕ್ಕೆ ಸಂಬಂಧಿಸಿದ ಮೇಲ್ವೇತುವೆ ನಿರ್ಮಿಸಲಾಗಿದೆ. ಇದರ ಕೆಳಗಡೆಯ ರಸ್ತೆ ಕಾಮಗಾರಿ ರೈಲ್ವೆ ಇಲಾಖೆ ಕೈಗೊಂಡಿದ್ದು, ಕೆಲ ತಿಂಗಳಲ್ಲಿಯೇ ರಸ್ತೆ ಹಾಳಾಗಿದೆ. ಪಟ್ಟಣದ ಮಾರುತಿ ನಗರ ಹಾಗೂ ಕಂದಕೂರು ಗ್ರಾಮಕ್ಕೆ ಈ ರಸ್ತೆಯ ಮೂಲಕ ಸಂಚರಿಸಬೇಕಿದೆ. ಹದಗೆಟ್ಟ ರಸ್ತೆಯಿಂದ ವಾಹನಗಳು ಬಿದ್ದು ಸವಾರರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಾರೆ.
ರಸ್ತೆ ನಿರ್ಮಿಸಲು ಒತ್ತಾಯ:
ರಸ್ತೆ, ಮೇಲೇತುವೆ ನಿರ್ಮಾಣದ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಸಮರ್ಪಕವಾಗಿ ಕಾಮಗಾರಿ ನಿರ್ವಹಿಸದ ಕಾರಣ ರಸ್ತೆ ಹಾಳಾಗಿದ್ದು, ರೈಲ್ವೆ ಇಲಾಖೆ ರಸ್ತೆ ಕಾಮಗಾರಿ ಆರಂಭಿಸುವ ಮೂಲಕ ಸುಗಮ ಸಂಚಾರಕ್ಕೆ ಅನೂಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಕುಷ್ಟಗಿಯಿಂದ ರೈಲ್ವೆ ನಿಲ್ದಾಣ ಹಾಗೂ ಕಂದಕೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಗುಂಡಿಗಳು ಬಿದ್ದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದ್ದು, ಬೈಕ್ ಸವಾರರು ಬಿದ್ದು ಅನಾಹುತಕ್ಕೀಡಾಗಿದ್ದಾರೆ. ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಕಂದಕೂರ ನಿವಾಸಿ ರಮೇಶ ಮೇಗಡೆಮನಿ ಹೇಳಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.