ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಕರಾವಳಿಗರಿಗೆ ಮಂಗಳೂರಿನ ರೋಹನ್ ಕಾರ್ಪೋರೇಷನ್ ಸಂಸ್ಥೆಯ ವತಿಯಿಂದ ಸನ್ಮಾನ ಕಾರ್ಯಕ್ರಮ ನಗರದ ಬಿಜೈ ರೋಹನ್ ಸಿಟಿಯಲ್ಲಿ ಶನಿವಾರ ನಡೆಯಿತು.ರೋಹನ್ ಕಾಪೋರೇಷನ್ ಸಂಸ್ಥೆಯ ನಿರ್ದೇಶಕ ಡಿಯೋನ್ ಮೊಂತೆರೊ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿ ಮಾತನಾಡಿ, ಮಂಗಳೂರು ಬೆಳೆಯಬೇಕು, ಸಿನಿಮಾ ಸಹಿತ ಎಲ್ಲ ರಂಗವೂ ಬೆಳೆಯಬೇಕು ಎಂಬುದು ನಮ್ಮ ಉದ್ದೇಶ. ಅದಕ್ಕಾಗಿ ಹಲವರ ಶ್ರಮ ಬೇಕಾಗುತ್ತದೆ ಎಂದರು.
ಪ್ರಶಸ್ತಿ ವಿಜೇತ ‘ಇಂಬು’ ಚಿತ್ರದ ನಿರ್ದೇಶಕ ಶಿವಧ್ವಜ್ ಶೆಟ್ಟಿ ಮಾತನಾಡಿ, ಸನ್ಮಾನ ಇತರರಿಗೆ ಪ್ರೇರಣೆಯಾಗಲಿದೆ. ಕರ್ನಾಟಕ, ಕರಾವಳಿಯಲ್ಲಿ ಉತ್ತಮ ಕಥಾ ವಸ್ತು ಇದೆ. ಅದನ್ನು ಬಳಕೆ ಮಾಡಬಹುದು. ‘ಇಂಬು’ ಸಿನೆಮಾ ಸದ್ಯದಲ್ಲೇ ರಿಲೀಸ್ ಮಾಡುತ್ತೇವೆ ಎಂದರು.‘ಇಂಬು’ ಚಿತ್ರದ ನಿರ್ಮಾಪಕ ಪ್ರಶಾಂತ್ ರೈ ಮಾತನಾಡಿ, ಭಾರತದ ಅಸಂಖ್ಯಾತ ಭಾಷೆಗಳ ಪೈಕಿ ತುಳು, ಕನ್ನಡ ಭಾಷೆಗೆ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಯನ್ನು ನಮ್ಮ ಊರಿನ ಕಲಾವಿದರು ಪಡೆದುಕೊಂಡಿರುವುದು ಹೆಮ್ಮೆ ಎಂದರು.‘ಮಿಥ್ಯ’ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ನಟಿ ರೂಪಶ್ರೀ ವರ್ಕಾಡಿ ಮಾತನಾಡಿ, ನಾಟಕ ಕಲಾವಿದರಾಗಿ, ಸಿನೆಮಾ ಕಲಾವಿದರಾಗಿ ನನ್ನನ್ನು ಬೆಳೆಸಿದ್ದೀರಾ. ನನಗೆ ಸಿಕ್ಕ ಪ್ರಶಸ್ತಿಯನ್ನು ನಾಡಿನ ಜನತೆಗೆ ಅರ್ಪಿಸುತ್ತೇನೆ ಎಂದರು.
ಸಿನೆಮಾ ಕುರಿತ ಅತ್ಯುತ್ತಮ ಪುಸ್ತಕಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಡಾ.ಪ್ರದೀಪ್ ಕೆಂಚನೂರು ಮಾತನಾಡಿ, ಪ್ರಶಸ್ತಿ ನಮ್ಮ ಜವಬ್ದಾರಿ ಹೆಚ್ಚಿಸಿದೆ ಎಂದರು. ‘ಮಿಥ್ಯ’ ಚಿತ್ರಕ್ಕಾಗಿ ಅತ್ಯುತ್ತಮ ಬಾಲ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದ ಆತೀಶ್ ಶೆಟ್ಟಿ ಮಾತನಾಡಿ, ‘ಮಿಥ್ಯ’ ಸಿನೆಮಾದಲ್ಲಿ ಅವಕಾಶ ನೀಡಿದ ತಂಡಕ್ಕೆ ಹಾಗೂ ಗೌರವಿಸಿದ ರೋಹನ್ ಕಾರ್ಪೊರೇಷನ್ ಸಂಸ್ಥೆಗೆ ಧನ್ಯವಾದಗಳು ಎಂದರು.ಸಂಸ್ಥೆಯ ಜನರಲ್ ಮ್ಯಾನೇಜರ್ ಸುಮನಾ ಇದ್ದರು. ತುಷಾನ್ ಸ್ವಾಗತಿಸಿದರು. ಸಾಲೆಟ್ ಡಿಸೋಜಾ ನಿರೂಪಿಸಿ, ವಂದಿಸಿದರು.