ಆರ್ಥಿಕ ಬೆಳವಣಿಗೆಯಲ್ಲಿ ಗೋವುಗಳ ಪಾತ್ರ ಮಹತ್ವದ್ದು: ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ

KannadaprabhaNewsNetwork |  
Published : Feb 25, 2026, 02:45 AM IST
ಕಂಪ್ಲಿ ತಾಲೂಕಿನ ದೇವಸಮುದ್ರದ ಬಳಿಯಲ್ಲಿನ ಕಲ್ಯಾಣ ಚೌಕಿ ಮಠದ ಕಾಮಧೇನು ಗೋ ಶಾಲೆ, ಕಲ್ಯಾಣ ಕೃಷಿ ಆಶ್ರಮ ಹಾಗೂ ಗುರುಕುಲ ಶಿಕ್ಷಣಕ್ಕೆ ಮಹಾರಾಷ್ಟ್ರದ ಕನ್ನೆರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾ ಸ್ವಾಮೀಜಿಗಳು ಚಾಲನೆ ನೀಡಿದರು. | Kannada Prabha

ಸಾರಾಂಶ

ಆರೋಗ್ಯ ರಕ್ಷಣೆ, ಧಾರ್ಮಿಕ ಪರಂಪರೆ, ಪರಿಸರ ಸಮತೋಲನ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಗೋವುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮಹಾರಾಷ್ಟ್ರದ ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ತಿಳಿಸಿದರು.

ಕಂಪ್ಲಿ: ಆರೋಗ್ಯ ರಕ್ಷಣೆ, ಧಾರ್ಮಿಕ ಪರಂಪರೆ, ಪರಿಸರ ಸಮತೋಲನ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಗೋವುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮಹಾರಾಷ್ಟ್ರದ ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ತಿಳಿಸಿದರು.

ತಾಲೂಕಿನ ದೇವಸಮುದ್ರ ಸಮೀಪ ನಿರ್ಮಾಣಗೊಂಡಿರುವ ಕಲ್ಯಾಣ ಚೌಕಿಮಠದ ಕಾಮಧೇನು ಗೋಶಾಲೆ, ಕಲ್ಯಾಣ ಕೃಷಿ ಆಶ್ರಮ ಹಾಗೂ ಗುರುಕುಲ ಶಿಕ್ಷಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ನೀಡಿರುವ ಸ್ಥಾನ ಕೇವಲ ಧಾರ್ಮಿಕ ನಂಬಿಕೆಗೆ ಸೀಮಿತವಲ್ಲ, ಅದು ಪ್ರಕೃತಿ ಸಂರಕ್ಷಣೆ ಮತ್ತು ಮಾನವ ಆರೋಗ್ಯದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಭೂಮಿ, ನೀರು ಹಾಗೂ ಸೂಕ್ಷ್ಮ ಜೀವಾಣುಗಳ ಸಮತೋಲನ ಕಾಪಾಡಲು ಪಂಚಮಾತೆಗಳಲ್ಲಿ ಒಂದಾಗಿ ಪರಿಗಣಿಸಲ್ಪಡುವ ಆಕಳ ಸಾಕಣೆ ಅತ್ಯಗತ್ಯವಾಗಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಗೋ ಆಧಾರಿತ ಜೀವನಶೈಲಿ ಪರಿಸರ ಸ್ನೇಹಿಯಾಗಿದ್ದು, ಭೂಮಿಯ ಫಲವತ್ತತೆ ಹೆಚ್ಚಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ ಎಂದು ತಿಳಿಸಿದರು.

ಅಗ್ನಿಹೋತ್ರ ಯಜ್ಞದ ವೈಜ್ಞಾನಿಕ ಮಹತ್ವವನ್ನು ಉಲ್ಲೇಖಿಸಿದ ಅವರು, ಭೋಪಾಲ್ ಅನಿಲ ದುರಂತದ ಸಂದರ್ಭದಲ್ಲೂ ಅಗ್ನಿಹೋತ್ರ ನಡೆಸುತ್ತಿದ್ದ ಮನೆಗಳು ಸುರಕ್ಷಿತವಾಗಿದ್ದವು ಎಂಬ ಉದಾಹರಣೆಯನ್ನು ನೀಡಿದರು. ಪಂಚಗವ್ಯ ಬಳಕೆ ಮಾನವ ಆರೋಗ್ಯಕ್ಕೆ ಬಹುಪಯೋಗಿಯಾಗಿದ್ದು, ಕ್ಯಾನ್ಸರ್ ಹಾಗೂ ಎಚ್‌ಐವಿ ಸೇರಿದಂತೆ ಗಂಭೀರ ಕಾಯಿಲೆಗಳನ್ನು ನಿಯಂತ್ರಿಸಲು ಸಹಕಾರಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಭೂಮಿಯ ಪೊಳ್ಳುತನವನ್ನು ತಡೆಗಟ್ಟಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ರಾಸಾಯನಿಕ ಗೊಬ್ಬರಗಳ ಬದಲು ಗೋಮಯ ಮತ್ತು ಗೋ ಆಧಾರಿತ ಜೈವಿಕ ಗೊಬ್ಬರಗಳ ಬಳಕೆ ಅನಿವಾರ್ಯವಾಗಿದೆ. ಕೃಷಿ ಮತ್ತು ಗೋಸಂರಕ್ಷಣೆ ಪರಸ್ಪರ ಅವಿಭಾಜ್ಯ ಸಂಬಂಧ ಹೊಂದಿವೆ ಎಂದು ಹೇಳಿದರು.

ಗೋಶಾಲೆಯ ಸಂಸ್ಥಾಪಕ ಕೆ.ಎಂ. ಬಸವರಾಜಶಾಸ್ತ್ರಿ ಮಾತನಾಡಿ, ದೇಶೀಯ ಗೋ ತಳಿಗಳ ಸಂರಕ್ಷಣೆ, ತಳಿ ಬಲವರ್ಧನೆ ಹಾಗೂ ಗೋ ಉತ್ಪನ್ನಗಳ ಉಪಯೋಗದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಗೋಶಾಲೆ ಸ್ಥಾಪಿಸಲಾಗಿದೆ. ಸನಾತನ ಧರ್ಮದ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಲ್ಲಿ ಗುರುಕುಲ ಶಿಕ್ಷಣ ವ್ಯವಸ್ಥೆ ಆರಂಭಿಸಲಾಗುತ್ತಿದ್ದು, ಮಕ್ಕಳಲ್ಲಿ ಸಂಸ್ಕಾರ, ಶಿಸ್ತು ಹಾಗೂ ಪರಂಪರೆಯ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಎಸ್‌.ವಿ. ಪಾಟೀಲ್ ಗುಂಡೂರು ರಚಿಸಿದ ‘ಸಾರ್ಥಕದ ಹೆಜ್ಜೆಗಳು’ ಕೃತಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಂ. ಚನ್ನಮಲ್ಲಯ್ಯಶಾಸ್ತ್ರಿ ವಹಿಸಿದ್ದರು.

ಈ ಸಂದರ್ಭದಲ್ಲಿ ಎಮ್ಮಿಗನೂರು ವಾಮದೇವ ಶಿವಾಚಾರ್ಯರು, ವರರುದ್ರಮುನಿ ಶಿವಾಚಾರ್ಯರು, ಸಿದ್ಧಲಿಂಗ ಶಿವಾಚಾರ್ಯರು, ಬ್ರಹ್ಮಾನಂದ ಮಹಾಸ್ವಾಮೀಜಿ, ಕೇಶವಾನಂದ ಸ್ವಾಮೀಜಿ, ಕರುಣಾನಂದ ಸ್ವಾಮೀಜಿ, ಚಂದ್ರಯ್ಯಸ್ವಾಮಿ, ಶಾಸಕ ಜೆ.ಎನ್. ಗಣೇಶ, ಮಾಜಿ ಶಾಸಕ ಪರಣ್ಣ ಮನವಳ್ಳಿ, ಟಿ.ಎಂ. ಚಂದ್ರಶೇಖರಯ್ಯ, ಎಂ. ಸುಧೀರ್, ಗೊಗ್ಗ ಚನ್ನಬಸವರಾಜ, ಎನ್.ಎಂ. ಪತ್ರಯ್ಯಸ್ವಾಮಿ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯವಸಾಯದಲ್ಲಿ ತಂತ್ರಜ್ಞಾನದ ಅಳವಡಿಕೆ ಅವಶ್ಯ: ಚೇತನಾ ಪಾಟೀಲ
ಸಿಎಂ ಜೊತೆ ಚರ್ಚಿಸಿ ವಿವಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ: ಸಚಿವ ಡಾ. ಎಂ.ಸಿ. ಸುಧಾಕರ್