ಕ್ರೈಸ್ತ ಧರ್ಮ ಅವಹೇಳನ: ರೋಮನ್‌ ಕ್ಯಾಥೋಲಿಕ್‌ ಅಸೋಸಿಯೇಷನ್‌ ಪ್ರತಿಭಟನೆ

KannadaprabhaNewsNetwork |  
Published : Dec 30, 2024, 01:04 AM IST
ಚಿತ್ರ : 29ಎಂಡಿಕೆ1 : ಮಡಿಕೇರಿಯ ಸಂತ ಮೈಕಲರ ಚರ್ಚ್ ಎದುರು ಶಾಂತಿಯುತ ಪ್ರತಿಭಟನೆ ನಡೆಸಿತು.  | Kannada Prabha

ಸಾರಾಂಶ

ರೋಮನ್‌ ಕ್ಯಾಥೋಲಿಕ್‌ ಅಸೋಸಿಯೇಷನ್‌ ನಗರದ ಸಂತ ಮೈಕಲರ ಚರ್ಚ್‌ ಎದುರು ಶಾಂತಿಯುತ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕ್ರೈಸ್ತ ಧರ್ಮ ಹಾಗೂ ಏಸು ಕ್ರಿಸ್ತರ ಕುರಿತು ಅವಹೇಳನ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನಗರದ ಸಂತ ಮೈಕಲರ ಚರ್ಚ್ ಎದುರು ಶಾಂತಿಯುತ ಪ್ರತಿಭಟನೆ ನಡೆಸಿತು. ದಿವ್ಯಬಲಿ ಪೂಜೆ ಮೂಲಕ ಕ್ರೈಸ್ತ ಸಮುದಾಯದವರು ಚರ್ಚ್ ಎದುರು ಜಮಾಯಿಸಿ ಮೌನ ಪ್ರತಿಭಟನೆ ನಡೆಸಿದರು.

ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮಡಿಕೇರಿ ತಾಲೂಕು ಘಟಕ ಉಪಾಧ್ಯಕ್ಷ ಮೈಕಲ್ ವೇಗಸ್ ಮಾತನಾಡಿ, ಕ್ರೈಸ್ತರ ಪವಿತ್ರ ಹಬ್ಬವಾದ ಕ್ರಿಸ್‌ಮಸ್ ದಿನದಂದು ಸಾಮಾಜಿಕ ಜಾಲತಾಣದಲ್ಲಿ ಹೊರಜಿಲ್ಲೆಯ ವ್ಯಕ್ತಿ ಕ್ರೈಸ್ತ ಧರ್ಮ ಹಾಗೂ ಏಸುಕ್ರಿಸ್ತರ ಕುರಿತು ಅವಹೇಳನ ಪದಗಳನ್ನು ಬಳಸಿ ನಿಂದನೆ ಮಾಡಿ ಸಂದೇಶ ಹರಿಬಿಟ್ಟಿದ್ದಾರೆ. ಇದಕ್ಕೆ ಕೊಡಗಿನ ವ್ಯಕ್ತಿಯೂ ಅವಹೇಳನ ಪದದ ಮೂಲಕ ಧರ್ಮವನ್ನು ನಿಂದಿಸಿ ಭಾವನೆಯನ್ನು ಕೆರಳಿಸಿದ್ದಾರೆ. ಈ ಬಗ್ಗೆ ಈಗಾಗಲೇ 5 ತಾಲೂಕುಗಳಲ್ಲಿಯೂ ಪೊಲೀಸ್ ದೂರು ನೀಡಿ ಬಂಧನಕ್ಕೆ ಆಗ್ರಹಿಸಲಾಗಿದೆ ಎಂದರು.

ಶಾಂತಿ ಸಾರುವ ಕ್ರೈಸ್ತ ಸಮುದಾಯಕ್ಕೆ ಕಾನೂನು ಮೇಲೆ ವಿಶ್ವಾಸವಿದೆ. ಯಾವುದೇ ಧರ್ಮದ ಅವಹೇಳನ ಮಾಡುವುದು ಸರಿಯಲ್ಲ. ಸೌಹರ್ದತೆಯಲ್ಲಿರುವ ಕೊಡಗು ಜಿಲ್ಲೆಯಲ್ಲಿ ಕೆಲ ಕಿಡಿಗೇಡಿಗಳು ಅಶಾಂತಿ ಸೃಷ್ಟಿಸುವ ಕೆಲಸಕ್ಕೆ ಕೈಹಾಕುತ್ತಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದ ಅವರು, ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳದಿದ್ದಲ್ಲಿ ಸಂಘಟಿತರಾಗಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಮೈಕಲ್ ಮಾರ್ಷಲ್, ಮಡಿಕೇರಿ ತಾಲೂಕು ಸಂಘಟನಾ ಕಾರ್ಯದರ್ಶಿ ಪಿಯೂಷ್ ಪೆರೇರ , ತಾಲೂಕು ಕಾರ್ಯದರ್ಶಿ ವಿಲ್ಫ್ರೆಂಡ್ ಕೊರೇರ, ಖಜಾಂಜಿ ಶರತ್ ಜೋಸೆಫ್, ಯುವ ಘಟಕದ ತಾಲೂಕು ಉಪಾಧ್ಯಕ್ಷ ಅಲಿಸ್ಟರ್ ಜಾಕ್, ದಿವ್ಯಜ್ಯೋತಿ ಸಂಘದ ನಿರ್ದೇಶಕ ಕೆ.ಜಿ. ಪೀಟರ್ ಇನ್ನಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಕ್ಷತೆ, ಪಾರದರ್ಶಕತೆ ಇದ್ದರೆ ಸಂಘಟನೆ ಪ್ರಗತಿ: ಮಲ್ಲಿಕಾರ್ಜುನ ಬಳ್ಳಾರಿ
ಫಾಸ್ಟ್‌ಫುಡ್‌ ಬದಲು ತರಕಾರಿ, ಹಣ್ಣು ದೇಹಕ್ಕೆ ಉತ್ತಮ