ಮಾಡಲಗೇರಿಯಿಂದ ಬನಶಂಕರಿದೇವಿ ಜಾತ್ರೆ‌ ತೇರಿನ ಹಗ್ಗದ ಹಳಿಬಂಡಿ ಮೆರವಣಿಗೆ

KannadaprabhaNewsNetwork |  
Published : Jan 04, 2026, 03:00 AM IST
ಬನಶಂಕರಿ ದೇವಿ ಜಾತ್ರಾ ತೇರಿಗೆ ಮಾಡಲಗೇರಿ ಗ್ರಾಮದಿಂದ ತೆರಳುವ ಹಗ್ಗವನ್ನು ಹಳಿ ಬಂಡಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರೋಣ ತಾಲೂಕು ಅಧ್ಯಕ್ಷ ಮಿಥುನ ಜಿ. ಪಾಟೀಲ ಚಾಲನೆ ನೀಡಿದರು. | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಸುಪ್ರಸಿದ್ಧ ಜಾತ್ರೆಗಳಲ್ಲೊಂದಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿದೇವಿ ಜಾತ್ರೆ ಶನಿವಾರ ಜರುಗಿದ್ದು, ಜಾತ್ರಾ ತೇರನ್ನು ಎಳೆಯಲು ತಾಲೂಕಿನ ಮಾಡಲಗೇರಿ ಗ್ರಾಮದಿಂದ ಹಗ್ಗವನ್ನು ಹಳಿಬಂಡಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ರೋಣ: ಉತ್ತರ ಕರ್ನಾಟಕದ ಸುಪ್ರಸಿದ್ಧ ಜಾತ್ರೆಗಳಲ್ಲೊಂದಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿದೇವಿ ಜಾತ್ರೆ ಶನಿವಾರ ಜರುಗಿದ್ದು, ಜಾತ್ರಾ ತೇರನ್ನು ಎಳೆಯಲು ತಾಲೂಕಿನ ಮಾಡಲಗೇರಿ ಗ್ರಾಮದಿಂದ ಹಗ್ಗ ತೆರಳಿದೆ.

ಬೆಳಗ್ಗೆ 9 ಗಂಟೆಗೆ ಹಗ್ಗವನ್ನು ಎತ್ತಿನ ಹಳಿ ಬಂಡಿಯಲ್ಲಿ ಇಟ್ಟುಕೊಂಡು ಮಾಡಲಗೇರಿ ಗ್ರಾಮಸ್ಥರು ಅತ್ಯಂತ ಭಕ್ತಿ, ಸಡಗರ, ಸಂಭ್ರಮದಿಂದ ಮೆರವಣಿಗೆ ಮೂಲಕ ಬನಶಂಕರಿದೇವಿ ಸನ್ನಿಧಾನಕ್ಕೆ ತೆರಳಿದರು. ಈ ಬಾರಿ ತೇರಿನ ಹಗ್ಗಗಳ ತೆಗೆದುಕೊಂಡು ಹೋಗುವ ಹಳಿಬಂಡಿ ಸೇವೆಯನ್ನು ಮಾಡಲಗೇರಿ ಗ್ರಾಮದ ಶಂಕರಗೌಡ ಹಿರೇಸಕ್ಕರಗೌಡ್ರ ಮತ್ತು ಶಂಕರಗೌಡ ಬಾಲನಗೌಡ್ರ ವಹಿಸಿಕೊಂಡಿದ್ದರು. ಹಳಿ ಬಂಡಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರೋಣ ತಾಲೂಕು ಅಧ್ಯಕ್ಷ ಮಿಥುನ ಜಿ. ಪಾಟೀಲ ಚಾಲನೆ ನೀಡಿದರು.

ಬನಶಂಕರಿದೇವಿ ಜಾತ್ರಾ ರಥಕ್ಕೆ 8 ಇಂಚು ದಪ್ಪದ ಪುಡಿನಾರಿನಿಂದ ಹುರಿಗೊಳಿಸಿದ 250 ಅಡಿ ಉದ್ದ ಹಾಗೂ 450 ಕೆಜಿ ತೂಕ ಹೊಂದಿದ 2 ಹಗ್ಗಗಳನ್ನು ಪ್ರತ್ಯೇಕವಾಗಿ 2 ಹಳಿ ಬಂಡಿಯಲ್ಲಿಟ್ಟುಕೊಂಡು ಹೋಗಲಾಯಿತು. ಮಾಡಲಗೇರಿ ಗ್ರಾಮದಿಂದ 20 ಕಿಮೀ ದೂರದ ಬನಶಂಕರಿಗೆ ತಾಲೂಕಿನ ನೈನಾಪುರ, ಡಾಣಕಶಿರೂರ, ಮಣ್ಣೇರಿ ಮೂಲಕ ಮಲಪ್ರಭೆ ನದಿ ದಾಟಿ ಚೋಳಚಗುಡ್ಡ ಗ್ರಾಮ ಮಾರ್ಗವಾಗಿ ಬನಶಂಕರಿ ತಲುಪಲಾಯಿತು. ಮಣ್ಣೇರಿ ಗ್ರಾಮದಿಂದ ಚೋಳಚಗುಡ್ಡ ಗ್ರಾಮಕ್ಕೆ ತೆರಳು ಮಾರ್ಗ ಮಧ್ಯೆ ಮೈದುಂಬಿ ಹರಿಯುತ್ತಿರುವ ಮಲಪ್ರಭ ನದಿಯನ್ನು ಹಳಿ ಬಂಡಿಗೆ ಹೆಗಲುಕೊಟ್ಟ ಜೋಡೆತ್ತುಗಳು ಯಾವುದೇ ಪ್ರಯಾಸವಿಲ್ಲದೇ ದಾಟಿದವು. ತಾಲೂಕಿನ ಹಿರೇಹಾಳ, ನೈನಾಪುರ, ಕೊತಬಾಳ, ಚೋಳಚಗುಡ್ಡ, ಹೊಳೆಆಲೂರ, ನೀರಲಗಿ, ಬೇಲೂರ, ಕೊತಬಾಳ, ಡಾಣಕಶಿರೂರ, ಮಣ್ಣೇರಿ, ಜಾಲಿಹಾಳ, ನಸಬಿ ಸೇರಿದಂತೆ ವಿವಿಧ ಗ್ರಾಮಗಳ ಜನರು ಈ ರೋಮಾಂಚನಕಾರಿ ದೃಶ್ಯವನ್ನು ನದಿ ದಡದಲ್ಲಿ ನಿಂತು ವೀಕ್ಷಿಸಿದರು.

ಹಳಿಬಂಡಿಗಳು ಮಲಪ್ರಭಾ ನದಿ ದಾಟಿ ಚೋಳಚಗುಡ್ಡ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆಗೈದು ಬನಶಂಕರಿಗೆ ತೆರಳಿದವು. ಮಾರ್ಗದ ಉದ್ದಕ್ಕೂ ಭಕ್ತರು ಜಯಘೋಷ ಮೊಳಗಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಯುಭಾರ ಕುಸಿತ : ಮೂರು ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ
''ಮತ್ತೆ ಮೊಳಗಲಿದೆ ಜೆಡಿಎಸ್ ಕಹಳೆ: ಎಚ್ಡಿಕೆ 2028ಕ್ಕೆ ಸಿಎಂ''