ಕನ್ನಡಪ್ರಭ ವಾರ್ತೆ ಹಾಸನ
ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಸರ್ಕಾರ ಹಲವು ಸೌಲಭ್ಯ ನೀಡಿದ್ದು, ಇದರೊಂದಿಗೆ ರೋಟರಿಯಂತಹ ಸಂಘ ಸಂಸ್ಥೆಗಳು ಮತ್ತಷ್ಟು ಅರಿವು ಮೂಡಿಸುವ ಕೆಲಸ ಮಾಡಬೇಕಾದ ಅಗತ್ಯತೆ ಇದೆ ಎಂದು ರೋಟರಿ ಜೋನ್ 9 ರ ವಲಯ ಸೇನಾನಿ ಮಮತಾ ಪಾಟೀಲ್ ಹೇಳಿದರು. ನಗರದ ದೊಡ್ಡಮಂಡಿಗನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ವತಿಯಿಂದ ಹಮ್ಮಿಕೊಂಡಿದ್ದ ಗರ್ಭಿಣಿಯರಿಗೆ ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ತ್ರೀಯರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲದು. ಅದರಲ್ಲೂ ತಾಯಿಯಾಗುವಂತಹ ಮೊದಲ ಹಂತದಿಂದ ಮಗು ಜನಿಸಿ ಐದು ವರ್ಷಗಳ ಕಾಲ ಇಬ್ಬರ ಆರೋಗ್ಯದ ಬಗ್ಗೆ ಜಾಗರೂಕತೆಯಿಂದ ಇರಬೇಕು. ಇಂದು ಅನೇಕ ಮಹಿಳೆಯರು ತಮ್ಮ ಮನೆಯಲ್ಲಿ ಕುಳಿತು ಆರೋಗ್ಯ ಕಾಳಜಿ ಮಾಡಿಕೊಳ್ಳುತ್ತಾರೆ. ಬದಲಾಗಿ ಆರಂಭದಿಂದಲೇ ವೈದರನ್ನು ಸಂಪರ್ಕಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಇನ್ನು ಆರೋಗ್ಯ ಇಲಾಖೆಯಲ್ಲಿ ಆಧಾರಸ್ತಂಭವಾಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಗರ್ಭಿಣಿಯರಿಗೆ ಸರಿಯಾದ ಸಮಯಕ್ಕೆ ಅವರಿಗೆ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸಿ ಅವರಿಗೆ ಸರ್ಕಾರದಿಂದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು. ಅಂಗನವಾಡಿಗೆ ಬರುವ ಮಕ್ಕಳಿಗೆ ಅಂಗನವಾಡಿ ಶಿಕ್ಷಕರು ಮಕ್ಕಳಿಗೆ ಆರೋಗ್ಯದಿಂದ ನೋಡಿಕೊಳ್ಳುವ ಮೂಲಕ ಸಮಾಜದಲ್ಲಿ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡಬೇಕು. ಸ್ತ್ರೀಯರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ರೋಟರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿದ್ದು, ಅದರ ಭಾಗವಾಗಿ ಇಂದು ನಮ್ಮ ಹಾಸನದ ರೋಟರಿ ರಾಯಲ್ ಸಂಸ್ಥೆ ಗರ್ಭಿಣಿಯರು ಹಾಗೂ ಮಕ್ಕಳಿಗೆ ಪೋಷ್ಠಿಕಾಂಶದ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದರು. ರೋಟರಿ ಕ್ಲಬ್ ಆಫ್ ಹಾಸನ ರಾಯಲ್ನ ಅಧ್ಯಕ್ಷ ಬಿ.ಕೆ. ಟೈಮ್ಸ್ ಗಂಗಾಧರ್ ಮಾತನಾಡಿ, ಸ್ತ್ರೀಯರಿಗೆ ಮತ್ತು ಮಕ್ಕಳಿಗೆ ಪೌಷ್ಠಿಕಾಂಶದ ಆಹಾರದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ವಿಶ್ವದಾದ್ಯಂತ ಇಂದು ಅನೇಕ ಸಂಘಸಂಸ್ಥೆಗಳು ಮಾಡುತ್ತಿದ್ದು, ನಮ್ಮ ರೋಟರಿ ರಾಯಲ್ ಸಂಸ್ಥೆ ವತಿಯಿಂದ ಇಂದು ಚಿಕ್ಕದಾಗಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗರ್ಭಿಣಿ ಹಾಗೂ ಮಕ್ಕಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮಕ್ಕು ಮೊದಲು ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ವತಿಯಿಂದ ಇಂದು ನಗರದ ಉದಯಗಿರಿ ಬಡಾವಣೆಯಲ್ಲಿರುವ ಜನರಲ್ ಕಾರ್ಯಪ್ಪ ಉದ್ಯಾನವನದಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ್ ಆಚರಣೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿ ವೀರ ಯೋಧರಿಗೆ ಶುಭಾಶಯ ತಿಳಿಸಲಾಯಿತು.ರೋಟರಿ ಕ್ಲಬ್ ಆಫ್ ಹಾಸನ ರಾಯಲ್ನ ಕಾರ್ಯದರ್ಶಿ ರವಿ ಕುಮಾರ್ ಪಿ., ಖಜಾಂಚಿ ದಿಲೀಪ್ ಕುಮಾರ್ ಎಚ್.ಕೆ., ಸದಸ್ಯರಾದ ಕೆ.ಸಿ. ನವೀನ್, ಕಿರಣ್ ರಾಗ್, ಅಂಗನವಾಡಿ ಶಿಕ್ಷಕಿ ಮಮತ, ಸಹಾಯಕಿ ಅಮಯಮ್ಮ, ಆಶಾ ಕಾರ್ಯಕರ್ತೆಯರಾದ ಪಲ್ಲವಿ, ಆಶಾ ಹಾಗೂ ಇತರರು ಹಾಜರಿದ್ದರು.