ಹೊನ್ನಾವರ: ಪಟ್ಟಣದ ರೋಟರಿ ಸಭಾಭವನದಲ್ಲಿ ತಾಲೂಕಿನ ರೋಟರಿ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ ಜರುಗಿತು.
ಹಿರಿಯ ಪತ್ರಕರ್ತ ಜಿ.ಯು.ಭಟ್ ಮಾತನಾಡಿ, ಹಿರಿಯರು ಆರಂಭಿಸಿದ ಹೊನ್ನಾವರ ರೋಟರಿ ಗೌರವವನ್ನು ಇಂದಿಗೂ ಉಳಿಸಿಕೊಂಡಿದೆ. ಒಂದು ಸಂಸ್ಥೆ ಏನೆಲ್ಲ ಸಮಾಜಮುಖಿ ಕಾರ್ಯ ಮಾಡಬಹುದು ಎನ್ನುವುದಕ್ಕೆ ರೋಟರಿ ಮಾದರಿಯಾಗಿದೆ. ದೇಶದ ಎಲ್ಲ ರಂಗಗಳು ಇಂದು ನೈತಿಕ ಶಕ್ತಿ ಕಡಿಮೆಯಾಗುತ್ತಿದೆ. ನೈತಿಕ ಪುನರುತ್ತಾನದ ಕಾರ್ಯವಾಗಬೇಕಿದೆ ಎಂದು ರೋಟರಿಯೊಂದಿಗಿನ ಒಡನಾಟವನ್ನು ಸ್ಮರಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಸತೀತ ತಾಂಡೇಲ್ ಮಾತನಾಡಿ, ಸಮಾಜಮುಖಿ ಅನೇಕ ಕಾರ್ಯದ ಮೂಲಕ ಜನಮನ್ನಣೆ ಪಡೆದಿರುವ ಹೊನ್ನಾವರ ರೋಟರಿ ಕ್ಲಬ್ ಪ್ರತಿ ವರ್ಷವು ಪತ್ರಿಕಾ ದಿನಾಚರಣೆಯ ಮೂಲಕ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸುವ ಕಾರ್ಯ ಮಾಡುತ್ತಿದೆ. ಪತ್ರಕರ್ತರು ಹಾಗೂ ರೋಟರಿ ಕ್ಲಬ್ ನಡುವೆ ಅವಿನಾಭಾವ ಸಂಂಬಂಧವಿದೆ. ಸಮಾಜಮುಖಿ ಕಾರ್ಯದ ಮೂಲಕ ಒಳ್ಳೆಯ ಸಂದೇಶ ನೀಡುತ್ತಾ ಬಂದಿದ್ದಾರೆ ಎಂದು ಸೇವಾ ಕಾರ್ಯದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.ಕಾರ್ಯಕ್ರಮದ ಇವೆಂಟ್ ಚೇರಮನ್ ನಾರಾಯಣ ಯಾಜಿ ರೋಟರಿ ಕ್ಲಬ್ ಹಾಗೂ ಪತ್ರಿಕಾ ದಿನಾಚರಣೆಯ ಕುರಿತು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಹೆನ್ರಿ ಲಿಮಾ, ಖಜಾಂಚಿ ಸುಹಾನ್ ಹೊರ್ಟಾ, ರೋಟರಿ ಸದಸ್ಯರು, ಪತ್ರಕರ್ತರು ಇದ್ದರು. ದಿನೇಶ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.