ಹೊಸದುರ್ಗ: ಮಂಡಿ ನೋವಿನಿಂದ ಬಳಲುತ್ತಿರುವ ಹಿರಿಯರನ್ನು ನಿರ್ಲಕ್ಷಿಸದೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದು ಪ್ರತಿಯೊಬ್ಬ ಕುಟುಂಬದ ಜವಾಬ್ದಾರಿ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.
ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿರುವ ಪಟ್ಟಣದ ರೋಟರಿ ಕ್ಲಬ್ ನಿರಂತರವಾಗಿ ತನ್ನ ಸೇವಾ ಚಟುವಟಿಕೆಯನ್ನು ಮಾಡಿ ಸಾಮಾಜಿಕ ಕಾರ್ಯದಲ್ಲಿ ತೊಡಗಿ ಕೊಳ್ಳಬೇಕು. ಉತ್ತಮ ಯುವಕರ ತಂಡ ರೋಟರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ರೈತರ ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿ ಉಚಿತ ಮಂಡಿ ಚಿಪ್ಪು ಬದಲಾವಣೆ ಕಾರ್ಯಕ್ರಮವನ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ರೋಟರಿ ಕ್ಲಬ್ ಚೇರ್ಮನ್ ಸದ್ಗುರು ಪ್ರದೀಪ್ ಮಾತನಾಡಿ ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಮರಳಿಸುವ ಉದ್ದೇಶದಿಂದ ಈ ಸೇವಾ ಕಾರ್ಯ ಕೈಗೊಳ್ಳಲಾಗಿದೆ. ಮಂಡಿ ನೋವಿನಿಂದ ಬಳಲುತ್ತಿರುವವರಿಗೆ ಮಾತ್ರೆ, ಎಕ್ಸ್ರೇ, ಚಿಕಿತ್ಸೆ ಹಾಗೂ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆಯನ್ನೂ ಉಚಿತವಾಗಿ ಒದಗಿಸುವ ಉದ್ದೇಶವಿದೆ ಎಂದರು.ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಹಿರಿಯರು ಇಂದು ಮಂಡಿ ನೋವಿನಿಂದ ಬಳಲುತ್ತಿದ್ದರೆ, ಅವರನ್ನು ನಿರ್ಲಕ್ಷ್ಯ ಮಾಡಬಾರದು. ಅವರ ತ್ಯಾಗವನ್ನು ನೆನಪಿಸಿಕೊಂಡು ಮಕ್ಕಳಾದ ನಾವು ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ, ಆರೋಗ್ಯದಿಂದ ಬದುಕಲು ನೆರವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ಸಂಜಯ್, ಡಾ. ಸುನಿಲ್, ಡಾ. ಮಂಜುನಾಥ್, ಡಾ. ಶ್ರೀಧರ್, ಡಾ. ನಿಶಾ, ಡಾ. ದರ್ಶನ್ ಸೇರಿದಂತೆ ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು, ವೈದ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.