ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಸಮಾಜದ ಏಳಿಗೆಗೆ ಕೈಜೋಡಿಸಿರುವ ರೋಟರಿ ಸಂಸ್ಥೆ: ಪ್ರೊ.ಎಲಿಜಬೆತ್ ಚೆರಿಯನ್

KannadaprabhaNewsNetwork | Published : Jul 19, 2024 12:51 AM

ರೋಟರಿ ಸಂಸ್ಥೆ ಮಾನವೀಯ ನೆಲಗಟ್ಟಿನ ಮೇಲೆ ಕೆಲಸ ಮಾಡುತ್ತಿದೆ. ನಾವು ಸಂಪಾದಿಸಿದ ಗಳಿಕೆಯಲ್ಲಿ ಅಲ್ಪ ಸ್ವಲ್ಪ ಭಾಗವನ್ನು ಸಮಾಜಕ್ಕೆ ವಿನಿಯೋಗಿಸುವ ಮೂಲಕ ಸೇವೆ ಮಾಡುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಜೊತೆಗೆ ಬಡವರ ಆರೋಗ್ಯ ಸೇವೆಗೆ ಹೆಚ್ಚು ಹೊತ್ತು ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ರೋಟರಿ ಸಂಸ್ಥೆ ಜಗತ್ತಿನಾದ್ಯಂತ ಹಲವು ಸಮಾಜಮುಖಿ ಸೇವೆ ಮಾಡುವ ಮೂಲಕ ಸಮಾಜದ ಏಳಿಗೆಗೆ ಕೈಜೋಡಿಸಿದೆ ಎಂದು ಸಂಸ್ಥೆ ಜಿಲ್ಲಾ ಪಾಲಕ ಪ್ರೊ.ಎಲಿಜಬೆತ್ ಚೆರಿಯನ್ ಹೇಳಿದರು.

ಪಟ್ಟಣದ ಬಿಂದಾಸ್ ಸಭಾಂಗಣದಲ್ಲಿ ಮದ್ದೂರು ರೋಟರಿ ಸಂಸ್ಥೆ ನೂತನ ಅಧ್ಯಕ್ಷ ಎಚ್.ಪಿ.ಚನ್ನಂಕೇಗೌಡ ಮತ್ತು ತಂಡದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಸೇವಾ ಮನೋಭಾವ ಹೊಂದಿರುವವರಿಗೆ ಸಂಸ್ಥೆ ಉತ್ತಮ ವೇದಿಕೆಯಾಗಿದೆ ಎಂದರು.

ರೋಟರಿ ಸಂಸ್ಥೆ ಮಾನವೀಯ ನೆಲಗಟ್ಟಿನ ಮೇಲೆ ಕೆಲಸ ಮಾಡುತ್ತಿದೆ. ನಾವು ಸಂಪಾದಿಸಿದ ಗಳಿಕೆಯಲ್ಲಿ ಅಲ್ಪ ಸ್ವಲ್ಪ ಭಾಗವನ್ನು ಸಮಾಜಕ್ಕೆ ವಿನಿಯೋಗಿಸುವ ಮೂಲಕ ಸೇವೆ ಮಾಡುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ ಎಂದರು.

ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಜೊತೆಗೆ ಬಡವರ ಆರೋಗ್ಯ ಸೇವೆಗೆ ಹೆಚ್ಚು ಹೊತ್ತು ನೀಡುತ್ತಿದೆ. ಸಂಸ್ಥೆ ಸದಸ್ಯರು ಜನರಿಗೆ ಸ್ಪಂದಿಸುವ ಕಾರ್ಯಕ್ರಮಗಳನ್ನು ಹೆಚ್ಚುಹೆಚ್ಚಾಗಿ ಆಯೋಜಿಸಬೇಕು. ಸಾಮಾಜಿಕ ಜಾಲತಾಣವೆಂಬ ಮಾಯಾಲೋಕದಿಂದ ದೂರ ಸರಿದು ಜನರಿಗೆ ಸ್ಪಂದಿಸುವ ಮೂಲಕ ಅವರ ನೋವು ನಲಿವುಗಳಿಗೆ ಧ್ವನಿಯಾಗಬೇಕು ಎಂದರು.

ಜಿಲ್ಲಾ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್ ಮಾತನಾಡಿ, ಶತಮಾನ ಪೂರ್ಣಗೊಳಿಸಿರುವ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಮನುಕುಲದ ಸೇವೆಯೇ ತನ್ನ ಉದ್ದೇಶವೆಂದು ಸಾಬೀತುಪಡಿಸಿದೆ. ಪಲ್ಸ್ ಪೋಲಿಯೋ ಯಶಸ್ವಿಯಲ್ಲಿ ಸಹಕಾರದೊಂದಿಗೆ ಕೈಜೋಡಿಸಿ ಯಶಸ್ವಿಯಾಗಿರುವ ಸಂಸ್ಥೆ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬಿ ಎಡ್ ನಲ್ಲಿ ರಾಂಕ್ ಗಳಿಸಿದ ನವ್ಯರಾಜ್ ಹಾಗೂ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಹೆಚ್ಚು ಅಂಕ ಗಳಿಸಿದ ಪಂಚಮಿ ಹಾಗೂ ಸಂಜನಾ ಅವರುಗಳಿಗೆ ರೋಟರಿ ಸಂಸ್ಥೆಯಿಂದ ಆರ್ಥಿಕ ನೆರವು ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ವಲಯ ಪಾಲಕ ಪ್ರಶಾಂತ್, ಕಾರ್ಯದರ್ಶಿ ವಿಜಯಕುಮಾರ್, ಸಹಾಯಕ ಪಾಲಕ ಮಧುಸೂಧನ್, ನಿಕಟ ಪೂರ್ವ ಅಧ್ಯಕ್ಷ ಎಂ.ಸಿ.ಶಶಿಗೌಡ, ನೂತನ ಕಾರ್ಯದರ್ಶಿ ಎ.ಲೋಕೇಶ್, ಸಂಸ್ಥಾಪಕ ಅಧ್ಯಕ್ಷರಾದ ಗೌತಮ್ ಚಂದ್, ಹೆಚ್.ವಿ.ಬಾಲರಾಜು, ಬಿ.ಅಪ್ಪಾಜಿಗೌಡ, ಎಂ.ಎನ್.ಶಿವಣ್ಣ, ನಿರ್ದೇಶಕರಾದ ಬಿಂದಾಸ್ ಶ್ರೀನಿವಾಸ್, ಹೊನ್ನೇಗೌಡ, ರಾಮರಾಜು, ಮಂಜುನಾಥ ನಾಯ್ಡು, ರವೀಶ್, ರಾಮಚಂದ್ರ, ಕುಮಾರ್, ಪ್ರಕಾಶ್, ತಿಪ್ಪುರು ರಾಜೇಶ್ ಇದ್ದರು.