ಕೊಡಗಿನಲ್ಲಿ ಕಾರ್ಡಿಯಾಕ್ ಯೂನಿಟ್ ಸ್ಥಾಪಿಸಲು 10.89 ಕೋಟಿ ರು. ಅನುದಾನ

KannadaprabhaNewsNetwork |  
Published : Sep 20, 2025, 01:02 AM IST
ಚಿತ್ರ :  19ಎಂಡಿಕೆ6 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ. | Kannada Prabha

ಸಾರಾಂಶ

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ಅವಿರತ ಪರಿಶ್ರಮದಿಂದ ಹೃದ್ರೋಗ ತಪಾಸಣಾ ಕೇಂದ್ರದ ಸೌಲಭ್ಯ ಜಿಲ್ಲೆಗೆ ಲಭ್ಯವಾಗುತ್ತಿದೆ. ಉದ್ದೇಶಿತ ಹೃದ್ರೋಗ ತಪಾಸಣಾ ಕೇಂದ್ರವು ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ) ಯೋಜನೆಯಡಿ ಕಾರ್ಯನಿರ್ವಹಿಸಲಿದ್ದು, ಈಗಾಗಲೇ ಉದ್ದೇಶಿತ ಹೃದ್ರೋಗ ತಪಾಸಣಾ ಕೇಂದ್ರ ಸ್ಥಾಪನೆಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸ್ಥಳ ಪರಿಶೀಲನಾ ಕಾರ್ಯ ನಡೆದಿದೆ.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಣೆವಿಘ್ನೇಶ್‌ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕಾರ್ಡಿಯಾಕ್ ಯೂನಿಟ್ (ಹೃದ್ರೋಗ ಘಟಕ) ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು 10.89 ಕೋಟಿ ರು. ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಕೊಡಗಿನ ವೈದ್ಯಕೀಯ ಕ್ಷೇತ್ರ ಅಭಿವೃದ್ಧಿಯತ್ತ ಸಾಗಲು ಸಜ್ಜಾಗಿದೆ.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ಅವಿರತ ಪರಿಶ್ರಮದಿಂದ ಹೃದ್ರೋಗ ತಪಾಸಣಾ ಕೇಂದ್ರದ ಸೌಲಭ್ಯ ಜಿಲ್ಲೆಗೆ ಲಭ್ಯವಾಗುತ್ತಿದೆ. ಉದ್ದೇಶಿತ ಹೃದ್ರೋಗ ತಪಾಸಣಾ ಕೇಂದ್ರವು ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ) ಯೋಜನೆಯಡಿ ಕಾರ್ಯನಿರ್ವಹಿಸಲಿದ್ದು, ಈಗಾಗಲೇ ಉದ್ದೇಶಿತ ಹೃದ್ರೋಗ ತಪಾಸಣಾ ಕೇಂದ್ರ ಸ್ಥಾಪನೆಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸ್ಥಳ ಪರಿಶೀಲನಾ ಕಾರ್ಯ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ ಯುವ ಜನತೆ ಸೇರಿದಂತೆ ಹಲವರು ಜೀವ ಕಳೆದುಕೊಳ್ಳುತ್ತಿದ್ದಾರೆ. ಹೃದಯ ಸಂಬಂಧಿ ರೋಗಗಳ ಚಿಕಿತ್ಸೆಗಾಗಿ ಮೈಸೂರು, ಬೆಂಗಳೂರು, ಮಂಗಳೂರು ಹಾಗೂ ಇತರೆ ದೂರದ ಊರುಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗೆ ಚಿಕಿತ್ಸೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದ ಪರಿಣಾಮ ಜಿಲ್ಲೆಯವರು ಮಾರ್ಗದ ಮಧ್ಯೆ ಮೃತಪಟ್ಟಿರುವ ಸಾಕಷ್ಟು ಪ್ರಕರಣಗಳು ಈಗಾಗಲೇ ಸಂಭವಿಸಿದೆ.

ಕಾರ್ಡಿಯಾಕ್ ಯೂನಿಟ್ ಎಂದರೆ ಹೃದಯ ಸಂಬಂಧಿತ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ವಿಶೇಷ ತರಬೇತಿ ಪಡೆದ ವೈದ್ಯರು ಮತ್ತು ಪರಿಣಿತ ಸಿಬ್ಬಂದಿಯಿಂದ ವಿಶೇಷ ವೈದ್ಯಕೀಯ ಕಾಳಜಿ ಒದಗಿಸುವ ಆಸ್ಪತ್ರೆಯ ವಿಶೇಷ ವಿಭಾಗವಾಗಿದೆ. ಇದರಲ್ಲಿ ಹೃದಯದ ತೀವ್ರ ನಿಗಾ ಘಟಕ (CICU) ಅಥವಾ ಹೃದಯ ಆರೈಕೆ ಘಟಕ (CCU) ಸೇರಿವೆ. ಈ ಚಿಕಿತ್ಸೆಗಳು ಇನ್ನು ನಮ್ಮ ಜಿಲ್ಲೆಯಲ್ಲೇ ಸಿಗುವುದರಿಂದ ಸಾಕಷ್ಟು ರೋಗಿಗಳಿಗೆ ಅನುಕೂಲವಾಗಲಿದೆ.

ಘಟಕದಲ್ಲಿ ಹೃದಯಾಘಾತ, ತೀವ್ರ ಹೃದಯ ಬಡಿತದ ದೋಷಗಳು ಮತ್ತು ಹೃದಯ ಶಸ್ತ್ರಚಿಕಿತ್ಸೆಯ ನಂತರದ ಚೇತರಿಕೆಗಳಂತಹ ಸ್ಥಿತಿಗಳನ್ನು ನಿರ್ವಹಿಸುತ್ತದೆ. ಈ ಘಟಕಗಳು ಹೃದಯ ಬಡಿತ, ರಕ್ತದೊತ್ತಡ ಮತ್ತು ಆಮ್ಲಜನಕದ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ವಿಶೇಷ ಉಪಕರಣಗಳನ್ನು ಹೊಂದಿರುತ್ತವೆ. ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಕೂಡ ನಿರ್ಮಾಣವಾಗಲಿದೆ.

ಹೃದಯಾಘಾತ, ಅಸ್ಥಿರ ಆಂಜಿನಾ ಮತ್ತು ತೀವ್ರ ಹೃದಯ ವೈಫಲ್ಯದಂತಹ ಜೀವಕ್ಕೆ ಅಪಾಯಕಾರಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ. ರೋಗಿಗಳ ಹೃದಯ ಬಡಿತ, ರಕ್ತದೊತ್ತಡ ಮತ್ತು ಆಮ್ಲಜನಕದ ಮಟ್ಟವನ್ನು 24/7 ಮೇಲ್ವಿಚಾರಣೆ ಮಾಡಲು ಸುಧಾರಿತ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಲಾಗುತ್ತದೆ. ಹೃದಯ ತಜ್ಞರು, ಹೃದಯ ಶಸ್ತ್ರಚಿಕಿತ್ಸಕರು, ಹೃದಯರಕ್ತನಾಳದ ತಜ್ಞರು, ಮತ್ತು ತರಬೇತಿ ಪಡೆದ ದಾದಿಯರ ತಂಡವು ಒಟ್ಟಾಗಿ ರೋಗಿಗಳಿಗೆ ಸಮಗ್ರ ಕಾಳಜಿ ಒದಗಿಸುತ್ತದೆ.

ಹೃದಯ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವ ರೋಗಿಗಳಿಗೆ ವಿಶೇಷ ತೀವ್ರ ನಿಗಾ ಒದಗಿಸುತ್ತದೆ, ಅವರಿಗೆ ಅಗತ್ಯವಾದ ಚಿಕಿತ್ಸೆ ಮತ್ತು ಮೇಲ್ವಿಚಾರಣೆಯನ್ನು ನೀಡಲಾಗುತ್ತದೆ. ಘಟಕ ಸ್ಥಾಪನೆಗೆ ಹಾಗೂ ಉಪಕರಣ ಖರೀದಿಸಲು ಈಗಾಗಲೇ ಸರ್ಕಾರ ಅನುದಾನ ನೀಡಿದ್ದು, ಆದಷ್ಟು ಬೇಗ ಈ ಆರೋಗ್ಯ ಸೇವೆ ಸಾರ್ವಜನಿಕರಿಗೆ ದೊರಕಲಿದ್ದು, ದೂರದ ಊರುಗಳಿಗೆ ತೆರಳುವ ಪರಿಸ್ಥಿತಿ ತಪ್ಪಲಿದೆ.-----------.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 10.89 ಕೋಟಿ ರು. ವೆಚ್ಚದಲ್ಲಿ ಕಾರ್ಡಿಯಾಕ್ ಯೂನಿಟ್ ಸ್ಥಾಪಿಸಲು ನಮ್ಮ ಸರ್ಕಾರ ಅನುದಾನ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಹೃದಯ ಸಂಬಂಧಿ ಚಿಕಿತ್ಸೆಗಾಗಿ ರೋಗಿಗಳು ದೂರದ ಪ್ರದೇಶಗಳಿಗೆ ತೆರಳುವ ಪರಿಸ್ಥಿತಿ ಉಂಟಾಗಿದೆ. ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಇದೀಗ ನಮ್ಮ ಜಿಲ್ಲೆಯಲ್ಲಿ ಈ ಘಟಕಕ್ಕೆ ಸರ್ಕಾರ ಅನುದಾನ ಘೋಷಣೆ ಮಾಡಿರುವುದರಿಂದ ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲು ಕೆಲಸ ಮಾಡಲಾಗುವುದು.

। ಡಾ. ಮಂತರ್ ಗೌಡ, ಶಾಸಕರು ಮಡಿಕೇರಿ ವಿಧಾನಸಭಾ ಕ್ಷೇತ್ರ

--------------------

ಮಡಿಕೇರಿ ಶಾಸಕರ ಅವಿರತ ಪರಿಶ್ರಮದಿಂದ ಹೃದ್ರೋಗ ಘಟಕ ಸೌಲಭ್ಯ ಜಿಲ್ಲೆಗೆ ಲಭ್ಯವಾಗುತ್ತಿದೆ. ಉದ್ದೇಶಿತ ಹೃದ್ರೋಗ ಘಟಕವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲಿದ್ದು, ಈಗಾಗಲೇ ಉದ್ದೇಶಿತ ಹೃದ್ರೋಗ ತಪಾಸಣಾ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲನಾ ಕಾರ್ಯ ನಡೆದಿದೆ. ಮುಂದಿನ ದಿನಗಳಲ್ಲಿ ಈ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.

। ಡಾ.ಎಚ್.ಕೆ.ಸೋಮಶೇಖರ್, ವೈದ್ಯಕೀಯ ಅಧೀಕ್ಷಕರು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ