ಬೀರಮಲೆ ಗುಡ್ಡ ಅಭಿವೃದ್ಧಿಗೆ ೨.೮೨ ರು. ಕೋಟಿ ಅನುದಾನ ಮೀಸಲು: ಶಾಸಕ ರೈ

KannadaprabhaNewsNetwork |  
Published : Sep 30, 2025, 12:02 AM IST
ಫೋಟೋ: ೨೮ಪಿಟಿಆರ್- ಲೈಟಿಂಗ್ ಎರೆಸ್ಟರ್ಮಿಂಚು ಬಂಧಕವನ್ನು ಶಾಸಕ ಅಶೋಕ್ ಕುಮಾರ್ ರೈ ಲೋಕಾರ್ಪಣೆಗೊಳಿಸಿದರು. | Kannada Prabha

ಸಾರಾಂಶ

ತ್ತೂರಿನ ಎತ್ತರ ಪ್ರದೇಶವಾಗಿರುವ ಬೀರಮಲೆ ಗುಡ್ಡದಲ್ಲಿ ಮಿಂಚು ಬಂಧಕ ಅಳವಡಿಸಲಾಗಿದ್ದು ಈ ಮಿಂಚು ಬಂಧಕವನ್ನು ಭಾನುವಾರ ಶಾಸಕ ಅಶೋಕ್ ಕುಮಾರ್ ರೈ ಲೋಕಾರ್ಪಣೆಗೊಳಿಸಿದರು.

ಪುತ್ತೂರು: ಸಿಡಿಲಾಘಾತದಿಂದ ಉಂಟಾಗುತ್ತಿರುವ ಹಾನಿಗಳನ್ನು ತಡೆಯುವ ನಿಟ್ಟಿನಲ್ಲಿ ಪುತ್ತೂರಿನ ಎತ್ತರ ಪ್ರದೇಶವಾಗಿರುವ ಬೀರಮಲೆ ಗುಡ್ಡದಲ್ಲಿ ಮಿಂಚು ಬಂಧಕ ಅಳವಡಿಸಲಾಗಿದ್ದು, ಕೋಲ್ಕತ್ತ ಮೂಲದ ಎಲಾಪ್ ಪವರ್ ಕಂಪನಿಯು ತನ್ನ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ನಿಧಿಯ ಅನುದಾನದಿಂದ ಅಳವಡಿಸಲಾದ ಈ ಮಿಂಚು ಬಂಧಕವನ್ನು ಭಾನುವಾರ ಶಾಸಕ ಅಶೋಕ್ ಕುಮಾರ್ ರೈ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಶಾಸಕರು, ಬೀರಮಲೆ ಗುಡ್ಡವು ಪ್ರಾಕೃತಿಕ ಪ್ರವಾಸಿ ತಾಣವಾಗಿದ್ದು, ಇದರ ಅಭಿವೃದ್ಧಿಗಾಗಿ ಇಲ್ಲಿನ ಬೀರಮಲೆ ಬೆಟ್ಟ ಅಭಿವೃದ್ಧಿ ಸಮಿತಿಯು ಸಾಕಷ್ಟು ಶ್ರಮಿಸುತ್ತಿದೆ. ಈಗಾಗಲೇ ಬೀರಮಲೆ ಗುಡ್ಡದ ಅಭಿವೃದ್ಧಿಗಾಗಿ ೨.೮೨ ರು. ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ. ಈ ಅನುದಾನದಲ್ಲಿ ಗುಡ್ಡದ ಸಂಪರ್ಕ ರಸ್ತೆಯನ್ನು ದ್ವಿಪಥಗೊಳಿಸಿ ಕಾಂಕ್ರಿಟೀಕರಣ ಗೊಳಿಸುವ ಕಾರ್ಯ ನಡೆಯಲಿದೆ. ೨ ಕೋಟಿ ರು. ಅನುದಾನಕ್ಕೆ ಮುಂದಿನ ೨ ತಿಂಗಳಿನಲ್ಲಿ ಅನುಮೋದನೆ ದೊರೆಯಲಿದೆ ಎಂದರು.ಈ ಅನುದಾನದಲ್ಲಿ ರಸ್ತೆಯಲ್ಲಿನ ವಿದ್ಯುದ್ದೀಪಗಳ ವ್ಯವಸ್ಥೆ ಮಾಡಲು ಡಿಪಿಆರ್ ಸಿದ್ಧಗೊಂಡಿದೆ. ಅಲ್ಲದೆ ರಂಗ ಮಂದಿರ, ಜ್ಞಾನ ಮಂದಿರವನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ೯೦ ಲಕ್ಷ ರು. ವೆಚ್ಚದಲ್ಲಿ ಪಾರ್ಕ್ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗಿದೆ. ಇಲ್ಲಿ ಬರಹಗಾರರಿಗೆ, ಓದುಗರಿಗೆ, ದೈಹಿಕ ವ್ಯಾಯಾಮ ಬಯಸುವವರಿಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಭದ್ರತೆಯ ದೃಷ್ಟಿಯಿಂದ ೨೪ ಗಂಟೆಯೂ ಕಾವಲುಗಾರರ ನೇಮಕ ಮಾಡಲಾಗುವುದು. ಬೀರಮಲೆಯ ಅಭಿವೃದ್ಧಿಗೆ ಜನರ ಮಾರ್ಗದರ್ಶನ ಮತ್ತು ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಬೀರಮಲೆ ಬೆಟ್ಟ ಅಭಿವೃದ್ಧಿ ಸಮಿತಿಯ ಪ್ರಮುಖರಾದ ಜಗಜ್ಜೀವನ್ ದಾಸ್ ರೈ, ದತ್ತಾತ್ರೇಯ ರಾವ್, ಸಂತೋಷ್ ರೈ ಚಿಲ್ಮೆತ್ತಾರು ಮತ್ತಿತರರಿದ್ದರು.

೨ ಕಿ.ಮೀ. ಸುತ್ತಳತೆ ಕಾರ್ಯವ್ಯಾಪ್ತಿ:ಬೀರಮಲೆ ಗುಡ್ಡದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾಗಿರುವ ಈ ಮಿಂಚು ಬಂಧಕವು ಎರಡು ಕಿ.ಮೀ. ಸುತ್ತಳತೆಯಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿರುತ್ತದೆ. ಈ ವ್ಯಾಪ್ತಿಯಲ್ಲಿ ಎಲ್ಲೇ ಮಿಂಚು ಹೊಡೆದರೂ ಅದನ್ನು ಇದು ಸ್ವೀಕರಿಸುತ್ತದೆ ಹಾಗೂ ಅದರ ಶಕ್ತಿಯನ್ನು ಕಡಿಮೆ ಮಾಡಿ ಭೂಮಿಯೊಳಗೆ ಸೇರಿಸಿಕೊಳ್ಳುತ್ತದೆ. ಮಿಂಚಿನಿಂದ ಉಂಟಾಗುವ ಅಪಾಯವನ್ನು ತಪ್ಪಿಸುತ್ತದೆ. ಈ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಸಿಡಿಲು ಮಿಂಚಿಗೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಮತ್ತು ವಿದ್ಯುತ್ ಪ್ರವಹಕ ಯಂತ್ರಗಳಿಗೆ ಹಾನಿ ಆಗುವುದನ್ನು ತಡೆಯುತ್ತದೆ.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ