20.38 ಕೋಟಿ ರು. ಸ್ವತ್ತು ಹಸ್ತಾಂತರ: ಐಜಿಪಿ

KannadaprabhaNewsNetwork |  
Published : Dec 20, 2025, 01:15 AM IST
19ಕೆಡಿವಿಜಿ10, 11, 12-ದಾವಣಗೆರೆಯಲ್ಲಿ ಶುಕ್ರವಾರ ಪ್ರಾಪರ್ಟಿ ರಿಟರ್ನ್ ಪೇರೆಡ್ ನಲ್ಲಿ ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಸ್ವತ್ತುಗಳ ಮಾಲೀಕರು, ವಾರಸುದಾರರಿಗೆ ಅವುಗಳನ್ನು ಹಸ್ತಾಂತರಿಸಿದರು. ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ಪರಮೇಶ್ವರ ಹೆಗಡೆ, ಎಎಸ್ಪಿ ಸ್ಯಾಮ್ ವರ್ಗೀಸ್ ಇತರರು ಇದ್ದರು. | Kannada Prabha

ಸಾರಾಂಶ

ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2025ನೇ ಸಾಲಿನ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ್ದ ಸುಮಾರು ₹20.38 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ, ವಾಹನ, ನಗದು, ಮೊಬೈಲ್ ಸೇರಿದಂತೆ ಸ್ವತ್ತುಗಳನ್ನು ಅವುಗಳ ವಾರಸುದಾರರಿಗೆ ಮರಳಿಸುವ ಪ್ರಾಪರ್ಟಿ ರಿಟರ್ನ್ ಪರೇಡ್ ನಗರದಲ್ಲಿ ಶುಕ್ರವಾರ ನಡೆಯಿತು.

- ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಪ್ರಾಪರ್ಟಿ ರಿಟರ್ನ್ ಪರೇಡ್‌

- 2025ನೇ ಸಾಲಿನ 173 ಪ್ರಕರಣಗಳ ಸ್ವತ್ತು: ಡಾ.ರವಿಕಾಂತೇಗೌಡ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2025ನೇ ಸಾಲಿನ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ್ದ ಸುಮಾರು ₹20.38 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ, ವಾಹನ, ನಗದು, ಮೊಬೈಲ್ ಸೇರಿದಂತೆ ಸ್ವತ್ತುಗಳನ್ನು ಅವುಗಳ ವಾರಸುದಾರರಿಗೆ ಮರಳಿಸುವ ಪ್ರಾಪರ್ಟಿ ರಿಟರ್ನ್ ಪರೇಡ್ ನಗರದಲ್ಲಿ ಶುಕ್ರವಾರ ನಡೆಯಿತು.

ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಶುಕ್ರವಾರ ಪೂರ್ವ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಅವರು ಜಿಲ್ಲಾ ಪೊಲೀಸ್ ಆಯೋಜಿಸಿದ್ದ ಸೇವಾ ಕವಾಯತು ಕಾರ್ಯಕ್ರಮದ ನಂತರ ನಡೆದ ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ 2025ನೇ ಸಾಲಿನಲ್ಲಿ ಸ್ವತು ಕಳವು ಪ್ರಕರಣಗಳನ್ನು ಪತ್ತೆ ಮಾಡಿ, ಬಂಧಿತರಿಂದ ವಶಪಡಿಸಿಕೊಂಡಿದ್ದ ಸ್ವತ್ತುಗಳನ್ನು ಅವುಗಳ ಮಾಲೀಕರಿಗೆ ಮರಳಿಸಿದರು.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2025ರ ನ.30ರವರೆಗೆ ವರದಿಯಾಗಿದ್ದ 173 ಸ್ವತ್ತು ಕಳವು ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ, ಪ್ರಕರಣಗಳನ್ನು ಬೇಧಿಸಿ, ಆರೋಪಿಗಳನ್ನು ಪತ್ತೆ ಮಾಡಿ, ಕದ್ದಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದರು. ನ್ಯಾಯಾಲಯ ಆದೇಶದ ಮೇರೆಗೆ ಅವುಗಳ ವಾರಸುದಾರರು, ಮಾಲೀಕರಿಗೆ ಮರಳಿಸಲು ಪ್ರಾಪರ್ಟಿ ರಿಟರ್ನ್ ಪರೇಡ್ ಹಮ್ಮಿಕೊಳ್ಳಲಾಗಿತ್ತು.

ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಮಾತನಾಡಿ, 2025ನೇ ಸಾಲಿನ ಪ್ರಾಪರ್ಟಿ ಪರೇಡ್‌ನಲ್ಲಿ ₹20.38 ಕೋಟಿ ಮೌಲ್ಯದ ಸ್ವತ್ತನ್ನು ಕೋರ್ಟ್‌ ಆದೇಶದಂತೆ ಮಾಲೀಕರಿಗೆ ಇಲಾಖೆಯಿಂದ ಮರಳಿಸಲಾಗುತ್ತಿದೆ. ಪ್ರಾಪರ್ಟಿ ರಿಟರ್ನ್ ಪರೇಡ್‌ನಲ್ಲಿ ₹19.64 ಕೋಟಿ ಮೌಲ್ಯದ 24 ಕೆಜಿ 726 ಗ್ರಾಂ ಚಿನ್ನಾಭರಣ, ₹24 ಲಕ್ಷ ಮೌಲ್ಯದ 26 ಕೆಜಿ 672 ಗ್ರಾಂ ಬೆಳ್ಳಿ ಆಭರಣ, ವಸ್ತುಗಳು, ₹85.68 ಲಕ್ಷ ನಗದು, ₹46 ಲಕ್ಷ ಮೌಲ್ಯದ ವಿವಿಧ ಮಾದರಿಯ 90 ವಾಹನಗಳು, ₹73.80 ಲಕ್ಷ ಮೌಲ್ಯದ 492 ಮೊಬೈಲ್‌ ಹ್ಯಾಂಡ್ ಸೆಟ್‌ಗಳು, ₹16.81 ಲಕ್ಷ ಮೌಲ್ಯದ ಕೃಷಿ ಉಪಕರಣಗಳು ಇತರೆ ವಸ್ತುಗಳು ಸೇರಿದಂತೆ ಒಟ್ಟು ₹29,38,32,459 ಮೌಲ್ಯದ ವಸ್ತುಗಳನ್ನು ಅವುಗಳ ಮಾಲೀಕರು, ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯನಿಷ್ಠೆಯನ್ನು ಐಜಿಪಿ ಡಾ.ರವಿಕಾಂತೇಗೌಡ, ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಶ್ಲಾಘಿಸಿ, ಅಭಿನಂದಿಸಿದರು. ಎಎಸ್‌ಪಿ ಪರಮೇಶ್ವರ ಹೆಗಡೆ, ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ, ನಗರ ಡಿವೈಎಸ್ಪಿ ಬಿ.ಶರಣಬಸವೇಶ್ವರ, ಡಿಎಆರ್ ಡಿವೈಎಸ್ಪಿ ಪಿ.ಬಿ. ಪ್ರಕಾಶ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಸ್ವತ್ತುಗಳ ಮಾಲೀಕರು, ವಾರಸುದಾರರು, ಕುಟುಂಬ ವರ್ಗದವರು ಇದ್ದರು.

- - -

(ಬಾಕ್ಸ್‌) * 53 ಪ್ರಕರಣಗಳ ಆರೋಪಿ ನವೀನ್‌ ಸೆರೆ: ಐಜಿಪಿ ದಾವಣಗೆರೆ: ಜಿಲ್ಲೆಯಲ್ಲಿ ನಡೆದಿದ್ದ ಮುಖ್ಯವಾದ ಕಳವು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ನಮ್ಮೆಲ್ಲಾ ಅಧಿಕಾರಿ, ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ ಶ್ಲಾಘಿಸಿದ್ದಾರೆ.ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಶುಕ್ರವಾರ ಪ್ರಾಪರ್ಟಿ ರಿಟರ್ನ್ ಪರೇಡ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಣ್ಣುಮಕ್ಕಳು ಮಾಂಗಲ್ಯದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಅಂತಹ ಪ್ರಕರಣಗಳನ್ನು ಪತ್ತೆ ಮಾಡಿ, ಮಾಲೀಕರಿಗೆ ಮಾಂಗಲ್ಯಗಳನ್ನು ಹಿಂದಿರುಗಿಸಲಾಗಿದೆ ಎಂದರು. ನವೀನ್ ಎಂಬ ಆರೋಪಿ 53 ಪ್ರಕರಣಗಳಲ್ಲಿ ಪೊಲೀಸ್‌ ಇಲಾಖೆಗೆ ಬೇಕಾಗಿದ್ದ. ಒಬ್ಬಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು, ಸರಗಳ್ಳತನ ಮಾಡುತ್ತಿದ್ದ. ಅವನನ್ನು ಸೆರೆಹಿಡಿದು, ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸಕ್ತ ವರ್ಷದಲ್ಲಿ ನಮ್ಮ ಪೊಲೀಸರು ಉತ್ತಮ ಕೆಲಸ ಮಾಡಿದ್ದು, ಪೊಲೀಸರ ಬಗ್ಗೆ ಜನರಿಗೂ ವಿಶ್ವಾಸ ಹೆಚ್ಚಾಗುವಂತೆ ಇಲಾಖೆ ಅಧಿಕಾರಿ-ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿ, ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣ, ಕಾರಿಗನೂರು ಗ್ರಾಮದ ಮಹಿಳೆ ಮೇಲೆ ಹಲ್ಲೆ, ದರೋಡೆ ಪ್ರಕರಣ ಸೇರಿದಂತೆ ಅನೇಕ ಮಹತ್ವದ ಪ್ರಕರಣಗಳನ್ನು ಇಲಾಖೆ ಪತ್ತೆ ಮಾಡಿದೆ ಎಂದು ವಿವರಿಸಿದರು.

- - -

-19ಕೆಡಿವಿಜಿ10, 11, 12:

ದಾವಣಗೆರೆಯಲ್ಲಿ ಶುಕ್ರವಾರ ಪ್ರಾಪರ್ಟಿ ರಿಟರ್ನ್ ಪೇರೆಡ್‌ನಲ್ಲಿ ಪೂರ್ವ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಮಾಲೀಕರು, ವಾರಸುದಾರರಿಗೆ ಸ್ವತ್ತುಗಳನ್ನು ಹಸ್ತಾಂತರಿಸಿದರು. ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿ ಪರಮೇಶ್ವರ ಹೆಗಡೆ, ಎಎಸ್‌ಪಿ ಸ್ಯಾಮ್ ವರ್ಗೀಸ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!