- ನಿರಂತರ ಒತ್ತಡ ಹಿನ್ನೆಲೆ ಸರ್ಕಾರ ಸ್ಪಂದನೆ: ಶಾಸಕ ಬಸವಂತಪ್ಪ । ಅಣಬೇರು ಗ್ರಾಮದಲ್ಲಿ ಸೇತುವೆ ಕಾಮಗಾರಿಗೆ ಚಾಲನೆ - - -
ಜೀವನಾಡಿ ಭದ್ರಾ ನಾಲೆಗಳು ಮಾಯಕೊಂಡ ಕ್ಷೇತ್ರ ಹಾದುಹೋಗಿವೆ. ನಾಲೆಯುದ್ದಕ್ಕೂ ಶಿಥಿಲಾವಸ್ಥೆಯ ಸೇತುವೆ ನಿರ್ಮಾಣ, ನಾಲೆ ಒಳಗಿನ ಕಾಂಕ್ರೀಟ್ ಗೋಡೆಗಳ ನಿರ್ಮಾಣ, ಅಭಿವೃದ್ಧಿ ಸೇರಿದಂತೆ ಇತರೆ ಕಾರ್ಯಕ್ಕೆ ₹20 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಹಂತ ಹಂತವಾಗಿ ನಾಲೆ ದುರಸ್ತಿ, ಸೇತುವೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳುವುದು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಮಾಯಕೊಂಡ ಕ್ಷೇತ್ರದ ಅಣಬೇರು ಗ್ರಾಮದಲ್ಲಿ ಭದ್ರಾ ನಾಲೆಗೆ ಅಡ್ಡಲಾಗಿ ₹1.50 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಾಯಕೊಂಡ ಕ್ಷೇತ್ರದ ಅಣಬೇರು ಬಳಿ ಹಾದುಹೋದ ಭದ್ರಾ ಎಡದಂಡೆ ಮುಖ್ಯ ನಾಲೆ, ಸಂತೇಬೆನ್ನೂರು ಸಂಪರ್ಕಿಸುವ ಸೇತುವೆಯನ್ನು ₹1.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿದೆ ಎಂದರು.ಕ್ಷೇತ್ರದ ಹಲವಾರು ಗ್ರಾಮಗಳ ಮೂಲಕ ಹಾದುಹೋಗಿರುವ ಭದ್ರಾ ಎಡದಂಡೆ ನಾಲೆಯು ನಮ್ಮ ರೈತರ ಜೀವನಾಡಿಯಾಗಿದೆ. ನಾಲೆಯ ಶಿಥಿಲಾವಸ್ಥೆಯ ಸೇತುವೆಗಳ ನಿರ್ಮಾಣ, ನಾಲೆ ಒಳಗಿನ ಕಾಂಕ್ರೀಟ್ ಗೋಡೆಗಳ ಅಭಿವೃದ್ಧಿ ಸೇರಿ ಇತರೆ ಕಾರ್ಯಗಳಿಗೆ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ್ದೆ. ಇದರ ಪರಿಣಾಮ ₹20 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.
ನೀರಾವರಿ ಇಲಾಖೆ ಸಹಾಯಕ ಅಭಿಯಂತರರಾದ ವಿಕಾಸ್, ಮನೋಜ್, ಮುಖಂಡರಾದ ಬುಡೇನ್ ಸಾಬ್, ಗ್ರಾಪಂ ಸದಸ್ಯರಾದ ರುದ್ರಪ್ಪ, ರಾಜಪ್ಪ, ಶಿವಕುಮಾರ, ಮಹದೇವಣ್ಣ, ಫಾಲಾಕ್ಷಪ್ಪ, ಜಾಫರ್, ಶೌಕತ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಇದೇ ವೇಳೆ ದಶಕಗಳಿಂದಲೂ ಶಿಥಿಲಗೊಂಡು ವಾಹನಗಳ ಸಂಚಾರಕ್ಕೆ ತೊಡಕಾಗಿದ್ದ ನಾಲೆಯ ಸೇತುವೆಯನ್ನು ಶಾಸಕ ಕೆ.ಎಸ್.ಬಸವಂತಪ್ಪ ಸರ್ಕಾರದಿಂದ ಅನುದಾನ ತಂದು ನಿರ್ಮಾಣ ಮಾಡುತ್ತಿರುವುದಕ್ಕೆ ಅಣಬೇರು, ಸಂತೇಬೆನ್ನೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು, ವಾಹನಗಳ ಸವಾರರು ಅಭಿನಂದಿಸಿದರು.- - -
(ಬಾಕ್ಸ್) * ಗುಣಮಟ್ಟದ ಕಾಮಗಾರಿ ನಡೆಸಲು ಸೂಚನೆ ಅಧಿಕಾರದ ಅವಧಿಯಲ್ಲಿ ಮಾಡಿದ ಕೆಲಸ, ಅಭಿವೃದ್ಧಿ ಕಾರ್ಯಗಳು ಶಾಶ್ವತವಾಗಿ ಉಳಿದರೆ ಮಾತ್ರ ಜನಪ್ರತಿನಿಧಿಗಳು, ಅವರ ಕೆಲಸ, ಕಾರ್ಯಗಳು ಜನಮಾನಸದಲ್ಲಿ ಉಳಿಯುತ್ತವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಬೇಕು. ಭದ್ರಾ ನಾಲೆಗಳು, ಸೇತುವೆಗಳನ್ನು ನಿರ್ಮಾಣ ಮಾಡಿ, ಐದು ದಶಕಗಳೇ ಕಳೆದಿವೆ. ಹಾಗಾಗಿ ನಾಲೆಗಳು, ಸೇತುವೆಗಳು ಶಿಥಿಲಗೊಂಡಿವೆ. ಪರಿಣಾಮ ರೈತರಿಗೆ, ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ಸಮರ್ಪಕವಾಗಿ ನೀರು ತಲುಪದಂತಾಗಿದೆ. ಈ ಸಮಸ್ಯೆ ಪರಿಹರಿಸಲು ತಾವು ಬದ್ಧ ಎಂದು ಭರವಸೆ ನೀಡಿದರು.- - -
-11ಕೆಡಿವಿಜಿ7, 8.ಜೆಪಿಜಿ:ದಾವಣಗೆರೆ ತಾಲೂಕಿನ ಅಣಬೇರು ಗ್ರಾಮದ ಬಳಿ ಭದ್ರಾ ನಾಲೆಗೆ ಅಡ್ಡಲಾಗಿದ್ದ ಶಿಥಿಲ ಸೇತುವೆ ಸ್ಥಳದಲ್ಲಿ ₹1.50 ಕೋಟಿ ವೆಚ್ಚದ ನೂತನ ಸೇತುವೆ ನಿರ್ಮಾಣಕ್ಕೆ ಶಾಸಕ ಕೆ.ಎಸ್. ಬಸವಂತಪ್ಪ ಭೂಮಿಪೂಜೆ ನೆರವೇರಿಸಿದರು.