ಕಾರಟಗಿ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಬಳಿ ಭಾನುವಾರ ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಪಟ್ಟಣದ ಆರ್ಎಸ್ಐ ಮಂಜುನಾಥ ದಾರಿಮನಿಯವರ ಅಂತ್ಯಕ್ರಿಯೆ ಪಟ್ಟಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ನಡೆಯಿತು.
ಪಾರ್ಥೀವ ಶರೀರ ಆಗಮಿಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಜನ ಪುರಸಭೆ ಮತ್ತು ಹೊಸ ಬಸ್ ನಿಲ್ದಾಣದಿಂದ ವಾಹನದ ಹಿಂದೆ ಮನೆ ವರೆಗೆ ತೆರಳಿದರು.
ಬಾಳಿ ಬೆಳಗಬೇಕಾಗಿದ್ದ ಯುವಕ ದಾರುಣ ಅಂತ್ಯ ಕಂಡಿದ್ದು ಇಡೀ ಪಟ್ಟಣದ ಜನರು ಮಮ್ಮಲ ಮರುಗಿದರು. ಇತ್ತೀಚಿಗಷ್ಟೇ ಹಣಹಾಳ ಯುವತಿಯೊಂದಿಗೆ ಮದುವೆ ನಿಶ್ಚಿತವಾಗಿತ್ತು. ಮೇ ನಲ್ಲಿ ಮದುವೆ ಮಾಡಲು ಕುಟುಂಬದ ಹಿರಿಯರು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ರಜೆಯ ಮೇಲೆ ಪಟ್ಟಣಕ್ಕೆ ಬಂದ ವೇಳೆ ಮಂಜುನಾಥ ತಮ್ಮ ಭಾವಿ ಪತ್ನಿ ಜತೆ ಫೋಟೋ ಶೂಟ್ ಸಹ ಮಾಡಿಸಿಕೊಂಡಿದ್ದರು. ಆದರೀಗ ಇಡೀ ಕುಟುಂಬದ ಏಕೈಕ ಪುತ್ರ ಮಂಜುನಾಥನ ಸಾವು ಸಿಡಿಲು ಬಡಿದಂತಾಗಿದೆ.ಪಾಲಕರ ಆಕ್ರಂದನ
ಸೋಮವಾರ ಬೆಳಗ್ಗೆ 9ಗಂಟೆಗೆ ಇಲ್ಲಿನ ಸಿದ್ದೇಶ್ವರ ರಂಗಮಂದಿರದಲ್ಲಿ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ತರಲಾಯಿತು. ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್, ಪಿಐ ಸುಧೀರಕುಮಾರ್ ಬೆಂಕಿ, ಪಿಎಸ್ಐ ಕಾಮಣ್ಣ, ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ಹಾಗೂ ಸದಸ್ಯರು, ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ಶಿವರೆಡ್ಡಿ ನಾಯಕ, ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಮಾಜಿ ಸದಸ್ಯ ವೀರೇಶ ಸಾಲೋಣಿ ಹಾಗೂ ದಲಾಲಿ ವರ್ತಕರ ಸಂಘದ ಪದಾಧಿಕಾರಿಗಳು, ಲಾರಿ ಮಾಲೀಕರ ಸಂಘ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
ಬಳಿಕ ಕೊಪ್ಪಳದಿಂದ ಆಗಮಿಸಿದ ಪೊಲೀಸ್ ಪಡೆಯಿಂದ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ನಂತರ ಅಪಾರ ಗೆಳೆಯರು, ಬಂಧುಬಳಗದ ನಡುವೆ ಪಟ್ಟಣದ ರುದ್ರಭೂಮಿಯಲ್ಲಿ ಮಂಜುನಾಥ ಅಂತ್ಯ ಸಂಸ್ಕಾರ ನಡೆಸಲಾಯಿತು.