ಕೊಡಗು ಜಿಲ್ಲಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕ ಪಥ ಸಂಚಲನ ಶಾಂತಿಯುತವಾಗಿ ನಡೆಯಿತು. ಗಣ ವೇಷಧಾರಿಗಳಾಗಿದ್ದ ಸ್ವಯಂ ಸೇವಕರು ಶಿಸ್ತು ಬದ್ಧವಾಗಿ ಹೆಜ್ಜೆ ಹಾಕಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿಜಯದಶಮಿ ಅಂಗವಾಗಿ ಕೊಡಗು ಜಿಲ್ಲಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕ ಪಥ ಸಂಚಲನ ಮಡಿಕೇರಿಯಲ್ಲಿ ಶಾಂತಿಯುತವಾಗಿ ನಡೆಯಿತು.ನಗರದ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಆರ್ಎಸ್ಎಸ್ನ ಪ್ರಾರ್ಥನೆ ನೆರವೇರಿತು. ಬಳಿಕ ಆರಂಭಗೊಂಡ ಮೆರವಣಿಗೆಯಲ್ಲಿ ಗಣವೇಷಧಾರಿಗಳಾಗಿದ್ದ ಸ್ವಯಂ ಸೇವಕರು ಶಿಸ್ತಬದ್ಧವಾಗಿ ಹೆಜ್ಜೆ ಹಾಕಿದರು.ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಪ್ರವೇಶ ದ್ವಾರದ ಬಳಿ ಮಹಿಳೆಯರು ಮತ್ತು ಮಕ್ಕಳು ಆರ್ಎಸ್ಎಸ್ ಧ್ವಜಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಪಥಸಂಚಲನವು ಗಣಪತಿ ಬೀದಿ, ಮಹದೇವಪೇಟೆ ರಸ್ತೆ, ಇಂದಿರಾಗಾಂಧಿ ವೃತ್ತ, ಅಜ್ಜಮಾಡ ದೇವಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತಕ್ಕಾಗಿ ಸಾಗಿ ಗಾಂಧಿ ಮೈದಾನ ತಲುಪಿತು. ಮೆರವಣಿಗೆಯುದ್ದಕ್ಕೂ ಘೋಷ್ ವಾದಕರು ವಾದ್ಯಗಳನ್ನು ನುಡಿಸುತ್ತಾ ಸಾಗಿದರು. ಸಾರ್ವಜನಿಕರು ರಸ್ತೆ ಬದಿಗಳಲ್ಲಿ ನಿಂತು ಆರ್ಎಸ್ಎಸ್ ಧ್ವಜ ಮತ್ತು ಸ್ವಯಂ ಸೇವಕರಿಗೆ ಪುಷ್ಪಾರ್ಚನೆ ಮಾಡಿದರು. ಹತ್ತರ ಹರೆಯದೊಳಗಿನ ಪುಟಾಣಿ ಮಕ್ಕಳು, 60ರ ವಯೋಮಿತಿ ದಾಟಿದ ಹಿರಿಯ ಸ್ವಯಂ ಸೇವಕರು ಸೇರಿದಂತೆ ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆಯಿದ್ದ ಸ್ವಯಂ ಸೇವಕರೂ ಸಹ 4 ಕಿ.ಮೀ.ನಷ್ಟು ದೂರದ ಪಥಸಂಚಲನದಲ್ಲಿ ಅತ್ಯುತ್ಸಾಹದಿಂದ ಭಾಗಿಯಾಗಿದ್ದರು.ಆರ್ಎಸ್ಎಸ್ ಜಿಲ್ಲಾ ಸಂಘ ಚಾಲಕ್ ಮನು ಕಾವೇರಪ್ಪ, ವಿಭಾಗೀಯ ಪ್ರಮುಖ್ ಡಿ.ಕೆ ಡಾಲಿ, ಜಿಲ್ಲಾ ಶಾರೀರಿಕ್ ಪ್ರಮುಖ್ ಅಯ್ಯಪ್ಪ, ಜಿಲ್ಲಾ ಸಂಪರ್ಕ ಪ್ರಮುಖ್ ಕೆ.ಕೆ ದಿನೇಶ್ ಕುಮಾರ್, ಪ್ರಮುಖರಾದ ಕೆ.ಕೆ ಮಹೇಶ್ ಕುಮಾರ್, ಅರುಣ್ ಕುಮಾರ್ ಸೇರಿದಂತೆ 700ಕ್ಕೂ ಅಧಿಕ ಸ್ವಯಂ ಸೇವಕರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.