ಆರ್‌ಎಸ್‌ಎಸ್‌ನಿಂದ ಮನೆ-ಮನೆಗೆ ದೇಸಿ ಗೋವಿನ ಹಾಲು!

KannadaprabhaNewsNetwork |  
Published : Mar 26, 2026, 02:00 AM IST
ಹಸು | Kannada Prabha

ಸಾರಾಂಶ

ಕಲಬೆರಿಕೆಯುಕ್ತ ಹಾಲು ಪೂರೈಕೆ ಅವಾಂತರದಿಂದಾಗಿ ಮಕ್ಕಳು, ಹಿರಿಯರು ಇನ್ನಿಲ್ಲದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇಂದು ಶುದ್ಧ ದೇಸಿ ಹಾಲು ದೊರೆಯುವುದೇ ಸವಾಲಾಗಿ ಪರಿಣಮಿಸಿದೆ. ಇದನ್ನು ಗಮನಿಸಿದ "ಆರ್‌ಎಸ್‌ಎಸ್‌ನ ಸೇವಾ ಗತಿವಿಧಿ ಉತ್ತರ ಕರ್ನಾಟಕ ಪ್ರಾಂತ "ವು ನಗರದ ಮನೆ-ಮನೆಗೂ ಶುದ್ಧ ದೇಸಿ ಹಾಲು ಪೂರೈಸಲು ಯೋಜನೆ ರೂಪಿಸಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಕಲಬೆರಕೆ ಹಾಲಿನಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ದಿನಮಾನಗಳಲ್ಲಿ ಮನೆ-ಮನೆಗೆ ದೇಸಿ ಹಸುಗಳ ಹಾಲು ಪೂರೈಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಂದಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ದೇಸಿ ಹಾಲು ಮಾರಾಟ ಕೇಂದ್ರ ಆರಂಭಿಸಿದ್ದು, ಗುರುವಾರ(ಮಾ. 26)ದಿಂದ ಕಾರ್ಯಾರಂಭ ಮಾಡಲಿದೆ.

ಕಲಬೆರಕೆಯುಕ್ತ ಹಾಲು ಪೂರೈಕೆ ಅವಾಂತರದಿಂದಾಗಿ ಮಕ್ಕಳು, ಹಿರಿಯರು ಇನ್ನಿಲ್ಲದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇಂದು ಶುದ್ಧ ದೇಸಿ ಹಾಲು ದೊರೆಯುವುದೇ ಸವಾಲಾಗಿ ಪರಿಣಮಿಸಿದೆ. ಇದನ್ನು ಗಮನಿಸಿದ "ಆರ್‌ಎಸ್‌ಎಸ್‌ನ ಸೇವಾ ಗತಿವಿಧಿ ಉತ್ತರ ಕರ್ನಾಟಕ ಪ್ರಾಂತ "ವು ನಗರದ ಮನೆ-ಮನೆಗೂ ಶುದ್ಧ ದೇಸಿ ಹಾಲು ಪೂರೈಸಲು ಯೋಜನೆ ರೂಪಿಸಿದೆ.

ಏನಿದು ಯೋಜನೆ?:

ನಗರ ಸೇರಿದಂತೆ ರಾಜ್ಯಾದ್ಯಂತ ಹಲವೆಡೆ ಗೋಶಾಲೆಗಳಿವೆ. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗೀರ್, ಸಾಹಿವಾಲ್, ಹಳ್ಳಿಕಾರ್, ಅಮೃತ್‌ ಮಹಲ್‌, ಮಲ್ನಾಡ ಗಿಡ್ಡ ಸೇರಿದಂತೆ ಮುಂತಾದ ಪ್ರಮುಖ ದೇಸಿ ಗೋ ತಳಿಯ ಹಸುಗಳಿದ್ದು, ಇವುಗಳಿಂದ ಉತ್ಪತ್ತಿಯಾಗುವ ಹಾಲು ಆರೋಗ್ಯಕ್ಕೆ ಒಳ್ಳೆಯದು. ಇದರ ಮಹತ್ವದ ಕುರಿತು ಜನರಲ್ಲಿ ಸರಿಯಾದ ಅರಿವು ಇರದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ದೇಸಿ ಹಸುವಿನ ಹಾಲು ಖರೀದಿಸದೇ ಜರ್ಸಿ ಹಸುಗಳ ಹಾಲು, ಪ್ಯಾಕೆಟ್‌ ಹಾಲಿಗೆ ಪ್ರಾಧಾನ್ಯತೆ ನೀಡುತ್ತಿದ್ದಾರೆ. ಇದನ್ನರಿತು ಸಂಘವು 6 ತಿಂಗಳಿಂದ ಸಮೀಕ್ಷೆ ನಡೆಸಿ ಗೋಶಾಲೆಗಳಿಗೆ ಭೇಟಿ ನೀಡಿ ಅಲ್ಲಿರುವ ದೇಸಿ ಹಸುಗಳ ಕುರಿತು ಸಮಗ್ರ ಮಾಹಿತಿ ಕಲೆಹಾಕಿ ಅವುಗಳಿಂದ ಬರುವ ಹಾಲನ್ನು ಸಂಗ್ರಹಿಸಿ ನಗರದ ಜನರಿಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಿದ್ದಾರೆ.

ಉತ್ತಮ ಸ್ಪಂದನೆ:

ಈಗಾಗಲೇ ನಗರದ ಹಲವು ಮನೆಗಳಿಗೆ ಸಂಪರ್ಕಿಸಿದ್ದು, 200ಕ್ಕೂ ಅಧಿಕ ಕಡೆ ದೇಸಿ ಹಾಲಿನ ಬೇಡಿಕೆ ಬಂದಿದೆ. ಆದರೆ, ಪ್ರಾಯೋಗಿಕವಾಗಿ ಮಧುರಾ ಕಾಲನಿಯಲ್ಲಿ ಮಾತ್ರ ಆರಂಭಿಸುತ್ತಿರುವುದರಿಂದ ಈ ಭಾಗದಲ್ಲಿ 40ಕ್ಕೂ ಅಧಿಕ ಜನರಿಂದ ಬೇಡಿಕೆ ಬಂದಿದೆ. ಹಾಗಾಗಿ ಗುರುವಾರದಿಂದ ನಿತ್ಯ 50 ಲೀಟರ್‌ ದೇಸಿ ಹಾಲು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂದೆ ಬೇಡಿಕೆಗೆ ತಕ್ಕಂತೆ ಅಗತ್ಯ ಪ್ರಮಾಣದ ಹಾಲು ವಿತರಣೆಗೆ ಆರ್‌ಎಸ್‌ಎಸ್‌ ಕ್ರಮಕೈಗೊಂಡಿದೆ.

ಪ್ರಾಯೋಗಿಕವಾಗಿ ಪ್ರಾರಂಭ:

ಮಧುರಾ ಕಾಲನಿಯ ಕೇಂದ್ರಕ್ಕೆ ಧಾರವಾಡ ತಾಲೂಕಿನ ಅಮ್ಮಿನಬಾವಿಯ ಪಂಚಗೃಹ ಹಿರೇಮಠ ಸಂಸ್ಥಾನ ಮಠದ ಗೋಶಾಲೆಯಲ್ಲಿರುವ 20ಕ್ಕೂ ಅಧಿಕ ಗೀರ್‌ ತಳಿಯ ದೇಸಿ ಹಸುಗಳಿಂದ ನಿತ್ಯ 50 ಲೀಟರ್‌ ಹಾಲು ಸಂಗ್ರಹಗೊಳ್ಳುತ್ತಿದ್ದು, ಈ ಹಾಲನ್ನೇ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಉತ್ತಮ ಸ್ಪಂದನೆ ದೊರೆತಲ್ಲಿ ವಿದ್ಯಾನಗರ, ಗೋಕುಲ ರಸ್ತೆ, ಹಳೇ ಹುಬ್ಬಳ್ಳಿ, ಶಿರೂರ ಪಾರ್ಕ್‌ ಸೇರಿದಂತೆ 10 ಕಡೆ ಮಾರಾಟ ಕೇಂದ್ರ ಆರಂಭಿಸುವ ಚಿಂತನೆಯಿದೆ. ನಗರದಲ್ಲಿ ಯಶಸ್ವಿಯಾದರೆ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಕೇಂದ್ರ ತೆರೆಯುವ ಉದ್ದೇಶವನ್ನು ಆರ್‌ಎಸ್‌ಎಸ್‌ ಹೊಂದಿದೆ.

ಲೀಟರ್‌ಗೆ ₹85 ನಿಗದಿ:

ಹಾಲಿನ ಕೇಂದ್ರದಲ್ಲಿ ಲೀಟರ್‌ ದೇಸಿ ಹಾಲಿಗೆ ₹ 85 ಇದ್ದರೆ, ಡೋರ್‌ ಡೆಲಿವರಿಗೆ ₹ 5 ಹೆಚ್ಚುವರಿ ನಿಗದಿಪಡಿಸಲಾಗಿದೆ. ಈ ದೇಸಿ ಹಸುವಿನ ಹಾಲಿಗೆ ಬೇಡಿಕೆ ಬಂದಿರುವುದರಿಂದ ಒಂದು ಮನೆಗೆ 1 ಲೀಟರ್‌ ಮಾತ್ರ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚಿನ ಹಾಲು ಪೂರೈಕೆಗೆ ಯೋಜನೆ ಹಾಕಿಕೊಳ್ಳಲಾಗಿದೆ.ಸಾರ್ವಜನಿಕರಲ್ಲಿ ದೇಸಿ ಹಸುಗಳ ಹಾಲಿನ ಪ್ರಾಮುಖ್ಯತೆಯ ಅರಿವಿನ ಕೊರತೆಯಿದೆ. ಇದನ್ನರಿತು ಸಂಘದ "ಸೇವಾ ಗತಿವಿಧಿ " ಅಡಿ ನಗರದಲ್ಲಿ ದೇಸಿ ಹಸುವಿನ ಹಾಲು ವಿತರಣಾ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ದೊರೆತಲ್ಲಿ ರಾಜ್ಯಾದ್ಯಂತ ಕೇಂದ್ರ ತೆರೆಯುವ ಉದ್ದೇಶವಿದೆ.

ಭರತ್‌ ಜೈನ್‌, ಆರ್‌ಎಸ್‌ಎಸ್‌ನ ಗೋ ಸೇವಾ ಗತಿವಿಧಿ ಕರ್ನಾಟಕ ಉತ್ತರ ಪ್ರಾಂತದ ಟೋಳಿ ಸದಸ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವನ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರವಿದೆ: ಡಾ.ಸಿ.ಸೋಮಶೇಖರ್
ಮದ್ದೂರು ನಗರಸಭೆ: 1.15 ಕೋಟಿ ರು. ಉಳಿತಾಯ ಬಜೆಟ್ ಮಂಡನೆ