ಗದಗ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್)ದ ನಗರ ಘಟಕವು ವಿಜಯದಶಮಿಯ ಅಂಗವಾಗಿ ಭಾನುವಾರ ಶಿಸ್ತುಬದ್ಧವಾದ ಗಣವೇಷಧಾರಿಗಳ ಪಥಸಂಚಲನ ಮತ್ತು ವಿಶಿಷ್ಟ ಸಾರ್ವಜನಿಕ ಸಮಾರಂಭ ಜರುಗಿತು.ನಗರ ಸಂಘ ಚಾಲಕರಾದ ಬಸವರಾಜ ನಾಗಲಾಪೂರ ಹಾಗೂ ಮಾರುತಿ ಕಟ್ಟಮನಿ ನೇತೃತ್ವದಲ್ಲಿ ನಡೆಯಿತು. ನಗರದಾದ್ಯಂತ ಶಿಸ್ತಿನ ಪಥಸಂಚಲನ:ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನವು ಮಧ್ಯಾಹ್ನ ನಗರದ ವೀರಶೈವ ಜನರಲ್ ಲೈಬ್ರರಿಯಿಂದ ಪ್ರಾರಂಭಗೊಂಡಿತು. ನೂರಾರು ಸ್ವಯಂಸೇವಕರು ಪೂರ್ಣ ಗಣವೇಷದಲ್ಲಿ ಶಿಸ್ತು ಮತ್ತು ಸಂಘಟನೆಯನ್ನು ಪ್ರದರ್ಶಿಸಿದರು.ಮೆರವಣಿಗೆಯು ವೀರಶೈವ ಜನರಲ್ ಲೈಬ್ರರಿಯಿಂದ ಹೊರಟು ಪಂ. ಪುಟ್ಟರಾಜ ಬಸ್ ನಿಲ್ದಾಣ(ಮಾಳ ಶೆಟ್ಟಿ ಸರ್ಕಲ್), ಗ್ರೇನ್ ಮಾರ್ಕೆಟ್ ರೋಡ್, ಕಂಬಾರ ಸಾಲ, ನಾಮಜೋಷಿ ರೋಡ್ ಮೂಲಕ ಸಾಗಿತು.
ಸಂಜೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಸಮಾರಂಭವು ಜರುಗಿತು. ಸಾನಿಧ್ಯ ವಹಿಸಿದ್ದ ಆಚಾರ್ಯ ವಿಮಲಸಾಗರ ಸೂರೀಶ್ವರಜೀ ಮಹಾರಾಜ ಮಾತನಾಡಿ, ನಾನು ಕೂಡಾ ಸಂಘದ ಕಾರ್ಯಕರ್ತನಾಗಿ ಬೆಳೆದು ಬಂದವ ಎಂದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ಉತ್ತರದ ಪ್ರಾಂತ ಕಾರ್ಯಕಾರಿಣಿ ಸದಸ್ಯ ನಾಗೇಶ ಚಿನ್ನಾರೆಡ್ಡಿ ಅವರು ಮುಖ್ಯ ವಕ್ತಾರರಾಗಿ ಭಾಗವಹಿಸಿ ಬೌದ್ಧಿಕ ಮಾರ್ಗದರ್ಶನ ಮಾತನಾಡಿದರು.
ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಎಂ.ಎಸ್. ಕರಿಗೌಡ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ಅಶೋಕ ನವಲಗುಂದ ಸೇರಿದಂತೆ ಅನೇಕ ಹಿರಿಯರು ಗಣವೇಷಧಾರಿಗಳಾಗಿ ಪಾಲ್ಗೊಂಡಿದ್ದರು.