ಕನ್ನಡಪ್ರಭ ವಾರ್ತೆ ಮಂಡ್ಯ
ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್) ನೂರು ವರ್ಷ ಪೂರೈಸಿದ ಹಾಗೂ ವಿಜಯದಶಮಿ ಅಂಗವಾಗಿ ನಗರದಲ್ಲಿ ಸ್ವಯಂ ಸೇವಕರಿಂದ ಆಕರ್ಷಕ ಪಥ ಸಂಚಲನ ಯಶಸ್ವಿಯಾಗಿ ನಡೆಯಿತು.ನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬಳಿ ಸಮಾವೇಶಗೊಂಡ ಗಣವೇಷಧಾರಿಗಳು ಸ್ಥಳದಲ್ಲಿ ಧ್ವಜವಂದನೆ ಬಳಿಕ ಪಥ ಸಂಚಲನ ಆರಂಭಿಸಿದರು. ಸರತಿ ಸಾಲಿನಲ್ಲಿ ನಿಂತ ಶಿಸ್ತಿನ ಸಿಫಾಯಿಗಳಂತೆ ಪಥ ಸಂಚಲನದಲ್ಲಿ ಸಾಗಿದರು.
ನಂತರ ಪಥ ಸಂಚಲನ ವಿನೋಭಾ ರಸ್ತೆ, ಮೈಸೂರು ಬೆಂಗಳೂರು ಹೆದ್ದಾರಿ, ಜಯಚಾಮರಾಜ ಒಡೆಯರ್ ವೃತ್ತ, ಮಹಾವೀರ ವೃತ್ತ, ವಿಶ್ವೇಶ್ವರಯ್ಯ ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ ಮಾರ್ಗವಾಗಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಬಳಿ ತಲುಪಿ ಸಂಪನ್ನಗೊಂಡಿತು.ಗಣವೇಷಧಾರಿಗಳು ಶಿಸ್ತಿನ ಶಿಪಾಯಿಗಳಂತೆ ರಸ್ತೆಯಲ್ಲಿ ಸಾಗುತ್ತಿದ್ದರೆ, ನಾಗರೀಕರು ಮಹಡಿಗಳ ಮೇಲಿನಿಂದ ತಮ್ಮ ಮನೆ ಬಳಿ ನಿಂತು ಪುಷ್ಪವೃಷ್ಠಿ ಮಾಡುವ ಮೂಲಕ ವಂದನೆ ಸಲ್ಲಿಸುತ್ತಿದ್ದುದು ಕಂಡುಬಂತು.
ಕೆಲವು ಕಡೆಗಳಲ್ಲಿ ರಸ್ತೆಯುದ್ದಕ್ಕೂ ಜನಸಾಮಾನ್ಯರು, ಅಂಗಡಿ ಮುಂಗಟ್ಟುಗಳ ಮಾಲೀಕರು ಸಿಬ್ಬಂದಿಗಳು ಪುಷ್ಪಾರ್ಚನೆ ಮಾಡಿದರೆ, ಶ್ರೀ ವಿದ್ಯಾಗಣಪತಿ ದೇವಾಲಯದ ಬಳಿ ಮಹಿಳಾ ಮಂಡಳಿ ಕಾರ್ಯಕರ್ತರು ಭಾರತದ ಮಾತೆಯ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿದ್ದರು. ಗಣವೇಷಧಾರಿಗಳು ಈ ಮಾರ್ಗದಲ್ಲಿ ಬರುತ್ತಿದ್ದಂತೆ ಅವರ ಮೇಲೆ ಪುಷ್ಪಾರ್ಚನೆ ಮಾಡಿದರಲ್ಲದೆ, ಭಾರತ್ ಮಾತಾಕೀ ಜೈ ಎಂಬ ಘೋಷಣೆಗಳನ್ನು ಮೊಳಗಿಸಿದರು.ನಗರದ ಮಹಾವೀರ ವೃತ್ತದ ಬಳಿ ನಿಂತಿದ್ದ ಅನ್ಯ ಧರ್ಮಿಯರೂ ಸಹ ಪಥಸಂಚಲನದಲ್ಲಿ ಸಾಗುತ್ತಿದ್ದ ಸ್ವಯಂ ಸೇವಕರ ಮೇಲೆ ಪುಷ್ಪಾರ್ಚನೆ ಮಾಡಿದ್ದು ವಿಶೇಷವಾಗಿತ್ತು. ಹೆದ್ದಾರಿಯಲ್ಲಿ ಗಣವೇಷಧಾರಿಗಳು ಸಾಗುತ್ತಿದ್ದರೆ, ದ್ವಿಚಕ್ರ ವಾಹನ ಸವಾರರು ರಸ್ತೆ ಪಕ್ಕದಲ್ಲಿ ಸಾಗಲು ಯತ್ನಿಸಿದಾಗ ಪೊಲೀಸರು ತಡೆದು ತಿಳಿ ಹೇಳಿದರು.
ಮಾರ್ಗದಲ್ಲಿ ಸಾಗುತ್ತಿದ್ದ ಸ್ವಯಂ ಸೇವಕರಿಗೆ ಹೊಸಹಳ್ಳಿ ವೃತ್ತದಲ್ಲಿ ಮಹಿಳೆಯರು ಭಾರತ್ ಮಾತಾಕೀ ಜೈ ಎಂಬ ಘೋಷಣೆ ಮೊಳಗಿಸಿದರಲ್ಲದೆ, ಪಕ್ಕದಲ್ಲಿದ್ದ ಸಾರ್ವಜನಿಕರಿಗೂ ಘೋಷಣೆ ಕೂಗುವಂತೆ ಪ್ರಚೋದಿಸುತ್ತಿದ್ದುದು ಕಂಡುಬಂತು.ಗಣವೇಷಧಾರಿಗಳು ಸಾಗುತ್ತಿದ್ದ ಮಾರ್ಗದಲ್ಲಿ ಪೊಲೀಸರು ವಾಹನ ಸಂಚಾರವನ್ನು ನಿರ್ಬಂಧಿಸಿದ್ದರು. ಸ್ವಯಂ ಸೇವಕರು ತೆರಳಿದ ನಂತರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
ಕೇಸರೀಮಯ:ಸ್ವಯಂ ಸೇವಕರು ತೆರಳುವ ಮಾರ್ಗದುದ್ದಕ್ಕೂ ಕೇಸರಿ ಬಣ್ಣದ ತೋರಣಗಳಿಂದ ಅಲಂಕರಿಸಲಾಗಿತ್ತು. ಎಲ್ಲಾ ರಸ್ತೆಗಳಲ್ಲಿ ಕೇಸರಿ ತೋರಣಗಳು ಗಣವೇಷಧಾರಿಗಳನ್ನು ಸ್ವಾಗತಿಸುತ್ತಿದ್ದವು. ಆರ್ ಎಸ್ ಎಸ್ ಪಥಸಂಚಲನದ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯನ್ನು ಬಿಗಿ ಬಂದೋಬಸ್ತ್ಗಾಗಿ ಆಯಾಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು. ಗಾಂಧಿನಗರದ ಬಳಿ ಇರುವ ಮಸೀದಿ ಬಳಿಯೂ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಕೈಯ್ಯಲ್ಲಿ ಲಾಠಿ ಹಿಡಿದು ಸಾಗುತ್ತಿದ್ದ ಗಣವೇಷಧಾರಿಗಳನ್ನು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಿಂಬಾಲಿಸಿದ್ದರು. ಎಲ್ಲಿಯೂ ಯಾವುದೇ ಗೊಂದಲ-ಗದ್ದಲಗಳಿಗೆ ಅವಕಾಶವಿಲ್ಲದಂತೆ ಸ್ವಯಂ ಸೇವಕರು ತಮ್ಮ ಮಾರ್ಗದಲ್ಲಿ ಸಾಗಿದರು. ಇದರಲ್ಲಿ ಪುಟಾಣಿ ಮಕ್ಕಳಿಂದ ಹಿಡಿದು, ಯುವಕರು, ವಯಸ್ಕರು, ವೃದ್ಧರು, ಪ್ರಮುಖರೂ ಸಹ ಪಾಲ್ಗೊಂಡಿದ್ದರು.