ಗ್ರಾಮೀಣ ಭಾಗದಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡುವುದೇ ಉದ್ಯೋಗ ಖಾತರಿ ಯೋಜನೆಯ ಉದ್ದೇಶವಾಗಿದ್ದು, ಗ್ರಾಮದ ಜನರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ ಪೂಜಾರ ಹೇಳಿದರು.
ರಾಣಿಬೆನ್ನೂರು: ಗ್ರಾಮೀಣ ಭಾಗದಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡುವುದೇ ಉದ್ಯೋಗ ಖಾತರಿ ಯೋಜನೆಯ ಉದ್ದೇಶವಾಗಿದ್ದು, ಗ್ರಾಮದ ಜನರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ ಪೂಜಾರ ಹೇಳಿದರು. ತಾಲೂಕಿನ ಕಾಕೋಳ ಗ್ರಾಮದಲ್ಲಿ ಶನಿವಾರ ಸಕ್ರಿಯವಲ್ಲದ ಜಾಬ್ ಕಾರ್ಡ್ಗಳನ್ನು ಸಕ್ರಿಯಗೊಳಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ವತಿಯಿಂದ ಮನೆ ಮನೆ ಭೇಟಿ ಮಾಡಿ ಜಾಬ್ ಕಾರ್ಡುಗಳನ್ನು ಪರಿಷ್ಕರಣೆ ಮಾಡುವುದರೊಂದಿಗೆ ಕೂಲಿ ಕೆಲಸಕ್ಕೆ ಬರುವಂತೆ ಪ್ರೇರೇಪಣೆ ನೀಡುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 1666 ಕುಟುಂಬಗಳು ಜಾಬ್ ಕಾರ್ಡ್ ಹೊಂದಿದ್ದು ಅದರಲ್ಲಿ ಸುಮಾರು 504 ಜಾಬ್ ಕಾಡ್ಗಳು ಸಕ್ರಿಯಗೊಂಡಿರುವುದಿಲ್ಲ. ಈ ಕುಟುಂಬಗಳ ಮನೆಗಳಿಗೆ ಭೇಟಿ ಮಾಡಿ ಉದ್ಯೋಗ ಖಾತರಿ ಕೆಲಸಕ್ಕೆ ಬರುವಂತೆ ಮನವಿ ಮಾಡುವ ಮೂಲಕ ಅವುಗಳ ಪರಿಷ್ಕರಣೆ ಮಾಡಲಾಗುವುದು ಎಂದರು. ತಾಲೂಕ ಐಇಸಿ ಸಂಯೋಜಕ ದಿಂಗಾಲೇಶ ಅಂಗೂರ ಮಾತನಾಡಿ, ತಾಲೂಕಿನ 40 ಗ್ರಾಪಂಗಳ ವ್ಯಾಪ್ತಿಯಲ್ಲಿ ಸುಮಾರು 44831 ಕುಟುಂಬಗಳು ಜಾಬ್ ಕಾರ್ಡ್ಗಳನ್ನು ಹೊಂದಿದ್ದು, ಆ ಪೈಕಿ ಸುಮಾರು 10 ಸಾವಿರ ಜಾಬ್ ಕಾರ್ಡ್ಗಳು ಸಕ್ರಿಯ ಗೊಂಡಿರುವುದಿಲ್ಲ. ಈ ಕುಟುಂಬಗಳ ಮನೆಗಳಿಗೆ ಭೇಟಿ ಮಾಡಿ ನರೇಗಾ ಯೋಜನೆ ಬಗ್ಗೆ ಮಾಹಿತಿ ನೀಡಿ ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳ ಕೆಲಸಕ್ಕೆ ಬರುವಂತೆ ಆಹ್ವಾನಿಸಲಾಗುವುದು ಎಂದರು. ಗ್ರಾಪ ಸದಸ್ಯರಾದ ಜಗದೀಶ ಚಪ್ಪರದ, ಹುಚ್ಚಪ್ಪ ಮಾಳಗಿ, ಜಿಲ್ಲಾ ಪಂಚಾಯಿತಿ ಎಸ್ಬಿಎಮ್ ಸಂಯೋಜಕ ಗೋವಿಂದರಾಜ್, ತಾಂತ್ರಿಕ ಸಹಾಯಕ ಕೃಷ್ಣ ನಾಯಕ್, ಗ್ರಾಪಂ ಕಾರ್ಯದರ್ಶಿ ಹನುಮಂತಪ್ಪ ಶಿಕಾರಿ, ಮಂಜುನಾಥ ಚಲವಾದಿ, ಪ್ರಕಾಶ ಮುಗುದೂರ, ಶಿವಾನಂದ ಕಡೆಮನಿ, ಕರಬಸಪ್ಪ ಕಡೆಮನಿ, ರಾಘವೇಂದ್ರ ಮುಗದೂರ ಹಾಗೂ ಎಂಬಿಕೆ, ಎಲ್ಸಿಆರ್ಪಿ ಕಾಯಕ ಬಂಧುಗಳು, ನರೇಗಾ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.