ಕೃಷಿ ಚಟುವಟಿಕೆ ಮುಗಿದು ಫಸಲು ಬಂದ ಬಳಿಕ ಸಿಗುವ ಬಿಡುವಿನಲ್ಲಿ ರೈತನ ಒಡನಾಡಿಗಳಾದ ಜಾನುವಾರುಗಳನ್ನು ಸೇರಿಸಿಕೊಂಡು ನಾನಾ ಸ್ಪರ್ಧೆಗಳನ್ನು ಹಮ್ಮಿಕೊಂಡು ಮನರಂಜಿಸುವ ಜತೆಗೆ ಕ್ರೀಡೆಗಳನ್ನು ಉಳಿಸಿ ಬೆಳೆಸುತ್ತಿದ್ದರು
ಕನಕಗಿರಿ: ಯುಗಾದಿ ಹಬ್ಬದ ಪ್ರಯುಕ್ತ ತಾಲೂಕಿನ ಮಲ್ಲಿಗೆವಾಡ ಗ್ರಾಮದಲ್ಲಿ ಎತ್ತುಗಳಿಂದ ದಿಂಡಿನ ಮೇಲೆ ಉಸುಕಿನ ಚೀಲ ಎಳೆಸುವ ಸ್ಪರ್ಧೆ ಈಚೆಗೆ ನಡೆಯಿತು.
ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಮುದಿಯಪ್ಪ ನಾಯಕ ಮಾತನಾಡಿ, ಗ್ರಾಮೀಣ ಭಾಗದ ರೈತರಿಗೆ ಕೃಷಿಗೆ ಎತ್ತುಗಳೇ ಆಧಾರವಾಗಿವೆ. ಕೃಷಿ ಚಟುವಟಿಕೆ ಮುಗಿದು ಫಸಲು ಬಂದ ಬಳಿಕ ಸಿಗುವ ಬಿಡುವಿನಲ್ಲಿ ರೈತನ ಒಡನಾಡಿಗಳಾದ ಜಾನುವಾರುಗಳನ್ನು ಸೇರಿಸಿಕೊಂಡು ನಾನಾ ಸ್ಪರ್ಧೆಗಳನ್ನು ಹಮ್ಮಿಕೊಂಡು ಮನರಂಜಿಸುವ ಜತೆಗೆ ಕ್ರೀಡೆಗಳನ್ನು ಉಳಿಸಿ ಬೆಳೆಸುತ್ತಿದ್ದರು. ಆದರೆ, ಮೊಬೈಲ್, ಟಿವಿಯಂಥ ಆಧುನಿಕತೆಯಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗಿವೆ. ಇವೆಲ್ಲದರ ನಡುವೆ ನಮ್ಮೂರಿನ ಯುವ ರೈತರು ಸೇರಿಕೊಂಡು ಎತ್ತುಗಳ ಮೂಲಕ ಮರಳಿನ ಚೀಲ ಎಳೆಯುವ ಸ್ಪರ್ಧೆ ಹಮ್ಮಿಕೊಂಡು ಗ್ರಾಮೀಣ ಭಾಗದ ಸೊಗಡನ್ನು ಮುಂದುವರಿಸುವ ನಿರ್ಧಾರ ಕೈಗೊಂಡಿರುವುದು ಅಭಿನಂದನೀಯ ಎಂದರು.
ರೈತ ಮುಖಂಡರಾದ ಶರಣಪ್ಪ ನವಲಳ್ಳಿ ಹಾಗೂ ಮುದಿಯಪ್ಪ ನಾಯಕ ಸ್ಪರ್ಧೆಗೆ ಚಾಲನೆ ನೀಡಿದರು.
ಒಟ್ಟು ೨೩ ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ನೆರೆದಿದ್ದವರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಬಹುಮಾನ ವಿತರಣೆ: ವಡಕಿ ಗ್ರಾಮದ ಪವಾಡೆಗೌಡನ ಎತ್ತುಗಳು (ಪ್ರಥಮ), ಮಲ್ಲಿಗೆವಾಡ ಗ್ರಾಮದ ದೇವಪ್ಪ ಕರೇಕುರಿಗೆ ಸೇರಿದ ಎತ್ತುಗಳು (ದ್ವಿತೀಯ) ಹಾಗೂ ಮಲ್ಲಿಗೆವಾಡದ ಬಸವರಾಜ ಕನಕಗಿರಿ ಎತ್ತುಗಳು (ತೃತೀಯ) ಸ್ಥಾನ ಪಡೆದುಕೊಂಡವು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.