ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಮೋದಿ ಅಮೆರಿಕವನ್ನು ಬೆಂಬಲಿಸಿ, ಮಹಿಳೆಯರ ಕಣ್ಣೀರು ಹಾಕುವಂತೆ ಮಾಡುತ್ತಿದ್ದಾರೆ. ಕೊರೋನಾದಂತೆ 140 ಕೋಟಿ ಜನರನ್ನು ರಕ್ಷಿಸುತ್ತೇನೆ, ತೈಲ ಮತ್ತು ಅಡುಗೆ ಅನಿಲದ ಕೊರತೆ ಇಲ್ಲ ಎಂದು ಹೇಳಿದ್ದರು. ಆದರೆ ಈಗಲೂ ಮನೆಗಳಲ್ಲಿ ಹೋಟೆಲ್ ಗಳಲ್ಲಿ ಅಡುಗೆ ಅನಿಲ ಸಿಗದೆ ಇರುವುದು ಖಂಡನೀಯ. ಅಲ್ಲದೆ ಇಂತಹ ಸಂಕಷ್ಟ ಸಮಯದಲ್ಲಿ ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವುದು ಕೇಂದ್ರ ಸರ್ಕಾರದ ವೈಫಲ್ಯ ಎಂದು ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಸರೋಜಾ ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಅಮೆರಿಕ ಹಾಗೂ ಇಸ್ರೇಲ್ ಕೇವಲ ಇರಾನ್ ಮೇಲೆ ಹೂಡಿದ ಯುದ್ಧವಲ್ಲ, ಬದಲಾಗಿ ಅದು ಜಗತ್ತಿನ ಜನರ ಮೇಲೆ ನಡೆಸುತ್ತಿರುವ ಪೈಶಾಚಿಕ ದಾಳಿಯಾಗಿದೆ. ಟ್ರಂಪ್ ಅವರ ಪುಂಡಾಟಿಕೆಯಿಂದ ಇಂದು ಜಗತ್ತಿನ ಜನರು ಸಂಕಟ ಪಡುವಂತಾಗಿದೆ. ಅಮೆರಿಕದೊಳಗೆ ಹಾಗೂ ಜಗತ್ತಿನಾದ್ಯಂತ ಇಂದು ಯುದ್ಧ ವಿರೋಧಿ ಪ್ರತಿಭಟನೆ ನಡೆಯುತ್ತಿದೆ. ಟ್ರಂಪ್ ಜಗತ್ತಿನ ಭಯೋತ್ಪಾದಕರಾಗಿದ್ದಾರೆ ಎಂದರು. ಪ್ರತಿಭಟನೆಯನ್ನುದ್ದೇಶಿಸಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು, ಸಿಐಟಿಯು ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ, ಕೋಶಾಧಿಕಾರಿ ಕವಿರಾಜ್ ಎಸ್. ಕಾಂಚನ್ ಮಾತನಾಡಿದರು.ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೀಲಾವತಿ, ಬಲ್ಕೀಸ್, ಶಶಿಕಲಾ, ನಳಿನಿ, ಕೂಲಿಕಾರರ ಸಂಘಟನೆ ವೆಂಕಟೇಶ್ ಕೋಣಿ, ಸಿಐಟಿಯು ಮುಖಂಡರಾದ ಉಮೇಶ್ ಕುಂದರ್, ಸುಭಾಶ್ಚಂದ್ರ ನಾಯಕ್, ರಾಮ ಕಾರ್ಕಡ ಇದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಪ್ರತಿಭಟನಾ ಸ್ಥಳದಲ್ಲಿ ಒಲೆ ಹೂಡಿ ಕಟ್ಟಿಗೆ ಬೆಂಕಿಯಲ್ಲಿ ಕಾಪಿ ಮಾಡಿ ಕುಡಿದು ಕೇಂದ್ರ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.