ಕನ್ನಡಪ್ರಭ ವಾರ್ತೆ ಸಂಕೇಶ್ವರ
ನಾಲ್ಕು ತಿಂಗಳ ಅವಧಿಗಾಗಿ ಸಂಕೇಶ್ವರ ಪುರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯ ಸಚಿನ ಭೋಪಳೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪುರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ವಿವೇಕ ಕ್ವಳ್ಳಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ 4 ತಿಂಗಳ ಅವಧಿಗಾಗಿ ಸೋಮವಾರ ಚುನಾವಣೆ ನಡೆಯಿತು. ಕಾಂಗ್ರೆಸ್ನಿಂದ ಡಾ.ಜಯಪ್ರಕಾಶ ಕರಜಗಿ ಮತ್ತು ಬಿಜೆಪಿ ಪಕ್ಷದಿಂದ ಸಚಿನ ಭೋಪಳೆ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿಯ ಕಾಂಗ್ರೆಸ್ನ ಪಕ್ಷದ ಕೆಲ ಸದಸ್ಯರು, ಬಿಜೆಪಿಯ ಇಬ್ಬರು ಮಹಿಳೆ ಸದಸ್ಯರು ಈ ಚುನಾವಣೆಯಿಂದ ದೂರ ಉಳಿದರು. ಕೊನೆಯ ಗಳಿಗೆಯಲ್ಲಿ ಉಪಾಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ನ ಡಾ.ಜಯಪ್ರಕಾಶ ನಾಗಪ್ಪ ಕರಜಗಿ ತಮ್ಮ ನಾಮಪತ್ರವನ್ನು ವಾಪಸ್ ಪಡೆದುಕೊಂಡರು. ಬಿಜೆಪಿಯ ಅಭ್ಯರ್ಥಿ ಸಚಿನ ಭೋಪಳೆ ಇವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರೆಂದು ಚುನಾವಣೆ ಅಧಿಕಾರಿಯಾಗಿದ್ದ ಹುಕ್ಕೇರಿ ತಹಸೀಲ್ದಾರ್ ಮಂಜುಳಾ ನಾಯಿಕ ಘೋಷಣೆ ಮಾಡಿದರು.ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾದ ಮಹಿಳಾ ಸದಸ್ಯರುಗಳಾದ ಸಂಗೀತಾ ಪ್ರವೀಣ ಕೋಳಿ, ಸವಿತಾ ನಷ್ಟಿ, ಶೇವಂತಾ ಕಬ್ಬೂರಿ, ಬಿಜೆಪಿಯ ಮಹಿಳಾ ಸದಸ್ಯರುಗಳಾದ ಶ್ರೀವಿದ್ಯಾ ಬಾಂಬರೆ, ಮನೋರಮಾ ಸುಗತೆ, ಚುನಾವಣೆಯಿಂದ ದೂರ ಉಳಿದಿದ್ದರು. ಪುರಸಭೆಯ ಬಿಜೆಪಿಯಿಂದ ಚುನಾಯಿತಗೊಂಡ 12 ಸದಸ್ಯರು ಮತ್ತು ಸ್ವತಂತ್ರ ಅಭ್ಯರ್ಥಿಯಾದ ಗಂಗಾರಾಮ ಭೂಸಗೋಳ, ಅಜೀತ ಕರಜಗಿ ಅವರುಗಳು ಬಿಜೆಪಿಯ ಸದಸ್ಯನಿಗೆ ಬೆಂಬಲ ವ್ಯಕ್ತಪಡಿಸಿದರು.ಈ ಹಿನ್ನೆಲೆಯಲ್ಲಿ ಸಚಿನ ಭೋಪಳೆ ಅವಿರೋಧ ಆಯ್ಕೆಯಾದರು. ಈ ಚುನಾವಣೆಯಲ್ಲಿ ಹುಕ್ಕೇರಿ ಮತಕ್ಷೇತ್ರದ ಬಿಜೆಪಿ ಶಾಸಕರಾದ ನಿಖೀಲ ಉಮೇಶ ಕತ್ತಿ ಮುಂದಾಳತ್ವದಲ್ಲಿ ಈ ಚುನಾವಣೆಯು ಜರುಗಿತು. ಈ ಚುನಾವಣೆ ಪ್ರಕ್ರಿಯೆಯಲ್ಲಿ ಪುರಸಭೆಯ ಅಧ್ಯಕ್ಷೆ ಸೀಮಾ ಬಂಡು ಹತನೂರೆ ಹಾಗೂ ಸದಸ್ಯರು ಹಾಜರಿದ್ದರು.ಚಿಕ್ಕೋಡಿ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾದ ಸತೀಶ ಅಪ್ಪಾಜಿಗೋಳ, ಸಂಕೇಶ್ವರ ಪುರಸಭೆ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದರು. ಸಂಕೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಮುಡಶಿ ಅವರು ಸಹ ಕಾಂಗ್ರೆಸ್ ಪಕ್ಷದ ಚುನಾಯಿತರಾದ ಸದಸ್ಯರಿಗೆ ವಿಪ್ ಜಾರಿ ಮಾಡಿದರು. ಶಾಸಕ ನಿಖೀಲ ಕತ್ತಿಯವರು ಬಿಜೆಪಿಯ ಇಬ್ಬರು ಸದಸ್ಯರಿಗೆ ಕ್ರಮಕೈಗೊಳ್ಳುವ ಬಗ್ಗೆ ಪ್ರಶ್ನಿಸಿದಾಗ ಇದರ ಬಗ್ಗೆ ವಿಚಾರಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.