ಇಂದು ಸುರಕ್ಷಿತ ಅಂತರ್ಜಾಲ ಬಳಕೆ ಅತ್ಯಗತ್ಯ: ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎ.ಜಿ.ಕಾರಿಯಪ್ಪ

KannadaprabhaNewsNetwork |  
Published : Feb 11, 2026, 01:45 AM IST
ಪೋಟೋ: 10ಎಸ್‌ಎಂಜಿಕೆಪಿ01ಶಿವಮೊಗ್ಗದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಎನ್‌ಐಸಿ ಶಿವಮೊಗ್ಗ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎ.ಜಿ.ಕಾರಿಯಪ್ಪ ಮಾತನಾಡಿದರು.  | Kannada Prabha

ಸಾರಾಂಶ

ನಾವು ಪ್ರತಿನಿತ್ಯ ಬಹುತೇಕ ಎಲ್ಲ ವಲಯಗಳಲ್ಲಿ ಅಂತರ್ಜಾಲ ಬಳಸುತ್ತಿದ್ದು, ಸುರಕ್ಷಿತ ಮತ್ತು ಜವಾಬ್ದಾರಿಯುತ ಅಂತರ್ಜಾಲ ಬಳಕೆ ಬಗ್ಗೆ ಹೆಚ್ಚೆಚ್ಚು ಜಾಗೃತರಾಗಿ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎ.ಜಿ.ಕಾರಿಯಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಾವು ಪ್ರತಿನಿತ್ಯ ಬಹುತೇಕ ಎಲ್ಲ ವಲಯಗಳಲ್ಲಿ ಅಂತರ್ಜಾಲ ಬಳಸುತ್ತಿದ್ದು, ಸುರಕ್ಷಿತ ಮತ್ತು ಜವಾಬ್ದಾರಿಯುತ ಅಂತರ್ಜಾಲ ಬಳಕೆ ಬಗ್ಗೆ ಹೆಚ್ಚೆಚ್ಚು ಜಾಗೃತರಾಗಿ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎ.ಜಿ.ಕಾರಿಯಪ್ಪ ತಿಳಿಸಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಎನ್‌ಐಸಿ ಶಿವಮೊಗ್ಗ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಾದಿಯಾಗಿ ಎಲ್ಲರೂ ಇಂದು ಅಂತರ್ಜಾಲ ಬಳಕೆಯಲ್ಲಿ ತೊಡಗಿದ್ದೇವೆ. ಬ್ಯಾಂಕಿಂಗ್, ಇ ಆಫೀಸ್, ಆನ್‌ಲೈನ್ ತರಗತಿಗಳು, ಮೀಟಿಂಗ್‌ಗಳು, ಹೀಗೆ ಎಲ್ಲೆಡೆ ಅಂತರ್ಜಾಲ ಬಳಕೆ ವ್ಯಾಪಕವಾಗಿದೆ. ಅದೇ ರೀತಿಯಲ್ಲಿ ಸೈಬರ್ ಅಪರಾಧಗಳೂ ಹೆಚ್ಚಿವೆ. ಅಕ್ಷರಸ್ಥರೇ ಹೆಚ್ಚು ಈ ಅಪರಾಧಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಕೋಟಿಗಟ್ಟಲೆ ಹಣವನ್ನು ಖಾತೆಯಿಂದ ಕಬಳಿಸಲಾಗುತ್ತಿದೆ. ಡಿಜಿಟಲ್ ಅರೆಸ್ಟ್‌ಗಳಾಗುತ್ತಿವೆ. ಆದ್ದರಿಂದ ಪ್ರತಿಯೊಬ್ಬರು ಸುರಕ್ಷಿತ ಅಂತರ್ಜಾಲ ಬಳಕೆ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಬೇಕು. ವಂಚನೆಗೆ ಒಳಗಾದಲ್ಲಿ ತಕ್ಷಣ 1930ಗೆ ಕರೆ ಮಾಡಿ ವರದಿ ಮಾಡಬೇಕು. ಕಚೇರಿಗಳಲ್ಲಿ ಲಾಗಿನ್ ಮಾಹಿತಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅತಿ ಅಗತ್ಯ. ಬಳಕೆ ನಂತರ ಕಡ್ಡಾಯವಾಗಿ ಲಾಗ್ ಔಟ್ ಮಾಡಬೇಕು. ಮಕ್ಕಳು, ಹದಿಹರೆಯದವರು ಕಲಿಕೆ, ಮನರಂಜನೆಗಾಗಿ ಇಂದು ಹೆಚ್ಚಾಗಿ ಅಂತರ್ಜಾಲಕ್ಕೆ ಅಂಟಿಕೊಂಡಿದ್ದು, ವಿಶೇಷವಾಗಿ ಹದಿಹರೆಯದವರು ಯಾವ ರೀತಿಯ ಸೈಟ್‌ಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಅವರ ಸುರಕ್ಷತೆ ಬಗ್ಗೆ, ದಾರಿತಪ್ಪುವ ಸೈಟ್‌ಗಳಿಗೆ ಬಲಿಯಾಗದಂತೆ ನಿಗಾ ವಹಿಸಿ ಕಾಳಜಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ವಂಚಕರು ಮೊಬೈಲ್‌ಗೆ ಕರೆ ಮಾಡಿ ನೀವು ಕಳುಹಿಸಿದ ಕೊರಿಯರ್ ಪಾರ್ಸಲ್‌ಗಳಲ್ಲಿ ಮಾದಕ ವಸ್ತು, ನಕಲಿ ಪಾಸ್‌ಪೋರ್ಟ್‌ಗಳು ಇವೆ ನಿಮ್ಮ ಮೇಲೆ ದೆಹಲಿ ಕೋಲ್ಕತಾ, ಬೆಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಜುಡೀಷಿಯಲ್ ಅರೆಸ್ಟ್ ವಾರೆಂಟ್ ಇದೆ ಎಂದು ಸಂಭಾಷಣೆ ನಡೆಸಿ ಬೇರೊಬ್ಬರನ್ನು ಸಂಪರ್ಕ ಮಾಡುವಂತೆ ಒತ್ತಡಕ್ಕೆ ಸಿಲುಕಿಸಿ ಹಣವನ್ನು ಪಡೆದು ವಂಚಿಸುವುದು, ಕೆವೈಸಿ ಅಪ್‌ಡೇಟ್ ಹೆಸರಿನಲ್ಲಿ ನೈಜ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಂತೆ ಕಾಣುವ ಎಪಿಕೆ ಫೈಲ್ ಕಳುಹಿಸಿ ವಂಚಿಸುವುದು, ನಕಲಿ ಹೂಡಿಕೆ ಅಪ್ಲಿಕೇಷನ್ ಬಳಸಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯವನ್ನು ನೀಡುವ ಭರವಸೆ ನೀಡುವ ನಕಲಿ ಹೂಡಿಕೆ ಮಾಡುವ ಆ್ಯಪ್ ಗಳು ಹೆಚ್ಚಾಗಿದೆ. ಹಾಗೂ ವಿದೇಶಗಳಿಂದಲೂ ಸೈಬರ್ ವಂಚಕರು ಕರೆ ಮಾಡಿ ವಂಚನೆ ಮಾಡುತ್ತಿದ್ದು, ಈ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು ಎಂದರು.

ಎನ್‌ಐಸಿಯ ಜಿಲ್ಲಾ ಸೂಚನಾ ವಿಜ್ಞಾನಾಧಿಕಾರಿ ನಿತಿನ್ ಮಾತನಾಡಿ, "ಚತುರ ತಂತ್ರಜ್ಞಾನ, ಸುರಕ್ಷಿತ ಆಯ್ಕೆಗಳು, ಎಐನ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯನ್ನು ಅನ್ವೇಷಿಸುವುದು " ಎಂಬುದು ಈ ವರ್ಷದ ಸುರಕ್ಷಿತ ಅಂತರ್ಜಾಲ ಬಳಕೆ ದಿನದ ಘೋಷವಾಕ್ಯವಾಗಿದ್ದು, ನಾವೆಲ್ಲರೂ ಅಂತರ್ಜಾಲ ವಂಚನೆ ಬಗ್ಗೆ ಜಾಗರೂಕರಾಗಿರಬೇಕು ಎಂದರು.

ಸುರಕ್ಷಿತ ಅಂತರ್ಜಾಲ ಬಳಕೆ ಬಗ್ಗೆ ತಿಳುವಳಿಕೆ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದ ಅವರು, ಪಿಪಿಟಿ ಮೂಲಕ ಸೈಬರ್ ಬೆದರಿಕೆ, ಫಿಶಿಂಗ್, ಎಸ್‌ಎಂಎಸ್ ಹೆಡರ್ ಥ್ರೆಟ್, ನಕಲಿ ಕಸ್ಟಮರ್ ಕೇರ್ ಸ್ಕ್ಯಾಮ್ ಬಗ್ಗೆ ತಿಳಿಸಿ ನಾವು ಅಂತರ್ಜಾಲ ಬಳಕೆಯಲ್ಲಿ ಇಟ್ಟುಕೊಳ್ಳಬೇಕಾದ ಉತ್ತಮ ಅಭ್ಯಾಸಗಳು, ಸುರಕ್ಷತಾ ವಿಧಾನಗಳು, ಸೈಬರ್ ಅಪರಾಧಗಳನ್ನು ವರದಿ ಮಾಡುವ ಬಗ್ಗೆ ತಿಳಿಸಿದರು. ಹಾಗೂ ನಾವು ಎಂದಿಗೂ ನಮ್ಮ ವೈಯಕ್ತಿಕ ಮಾಹಿತಿ, ಓಟಿಪಿ, ಪಿನ್ ಸಂಖ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ನಿಯಮಿತವಾಗಿ ಪಿನ್ ಸಂಖ್ಯೆ ಬದಲಾಯಿಸುತ್ತಿರಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಮಾತನಾಡಿ, ಆನ್‌ಲೈನ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದ್ದು, ಇಂದು ನಾವೆಲ್ಲ ಜಾಗತಿಕ ಅಂತರ್ಜಾಲದ ಭಾಗವಾಗಿದ್ದು, ದಿನ ನಿತ್ಯ ಸಂಪರ್ಕಕ್ಕಾಗಿ, ಮಾಹಿತಿ, ಕಲಿಕೆ , ಶಾಪಿಂಗ್, ಸೇವೆಗಳು, ಮನರಂಜನೆ, ಮೀಟಿಂಗ್‌ಗಳು, ಬ್ಯಾಂಕಿಂಗ್, ಹಣಕಾಸು ಹೀಗೆ ಹಲವಾರು ಕಾರ್ಯಗಳಿಗೆ ಅಂತರ್ಜಾಲದ ಮೇಲೆ ಅವಲಂಬಿತರಾಗಿದ್ದೇವೆ. ಅಂತರ್ಜಾಲ ಬಳಕೆಯಿಂದ ಅನುಕೂಲಗಳು ಸಾಕಷ್ಟಿದ್ದರೂ, ನಷ್ಟಗಳ ಬಗ್ಗೆಯೂ ನಾವು ಸಾಕಷ್ಟು ಜಾಗೃತರಾಗಿರಬೇಕು. ಫಿಶಿಂಗ್, ಮಾಲ್ ವೇರ್, ಐಡೆಂಟಿಟಿ ಥೆಫ್ಟ್, ಇತರೆ ಅಪರಾಧಗಳ ಕುರಿತು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದ ಅವರು ಪಿಪಿಟಿ ಪ್ರದರ್ಶನದ ಮೂಲಕ ಸುರಕ್ಷಿತ ಅಂತರ್ಜಾಲ ಬಳಕೆ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಕೃಷ್ಣಮೂರ್ತಿ, ಕೆಎಸ್‌ಆರ್‌ಪಿ ಡೆಪ್ಯುಟಿ ಕಮಾಂಡೆಂಟ್ ಮಂಜುನಾಥ್ ಎಸ್ ಅಣಜಿ, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆಯಿಂದಲೇ ನಮೂನೆ-೩ ಪಡೆಯುವ ವ್ಯವಸ್ಥೆ ಜಾರಿ; ದಾಖಲೆಗಳು ಸರಿಯಾಗಿದ್ದರೆ ಇ- ಖಾತೆ ಪಡೆಯಲು ಅವಕಾಶ
ಜಿ ರಾಮ್ ಜಿ: ಬಿಜೆಪಿಯಿಂದ ದೊಡ್ಡಬಾತಿ, ಹಳೇ ಬಾತಿಯಲ್ಲಿ ಜನಜಾಗೃತಿ