ಕನ್ನಡಪ್ರಭ ವಾರ್ತೆ ಮಂಗಳೂರುಠೇವಣಿದಾರರ ಹಣದ ಸುರಕ್ಷತೆ ಮತ್ತು ಭದ್ರತೆಯೇ ಕರ್ಣಾಟಕ ಬ್ಯಾಂಕಿನ ಮೊದಲ ಆದ್ಯತೆಯಾಗಿದ್ದು, 101 ವರ್ಷಗಳಿಂದ ಇದನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ಮುಂದೆಯೂ ಈ ಬದ್ಧತೆ ಹಾಗೆಯೇ ಇರುತ್ತದೆ. ಗ್ರಾಹಕರ ನಂಬಿಕೆ, ವಿಶ್ವಾಸಗಳನ್ನು ಗಳಿಸಿರುವ, ಸಾಮಾಜಿಕ ಬದ್ಧತೆಗೆ ಪ್ರಸಿದ್ಧಿಯಾಗಿರುವ ಕರ್ಣಾಟಕ ಬ್ಯಾಂಕ್ ಸುದೃಢವಾಗಿದೆ ಎಂದು ಕರ್ಣಾಟಕ ಬ್ಯಾಂಕ್ ತಿಳಿಸಿದೆ.101 ವರ್ಷಗಳಿಂದಲೂ ಸತತ ಲಾಭದಾಯಕ ವ್ಯವಹಾರ ಮಾಡುತ್ತಿರುವ ಕರ್ಣಾಟಕ ಬ್ಯಾಂಕ್ ಉತ್ತಮ ಬಂಡವಾಳವನ್ನೂ ಹೊಂದಿದ್ದು, ಶೇ.19.85ಕ್ಕಿಂತ ಹೆಚ್ಚಿನ ಬಂಡವಾಳ ಸಾಮರ್ಥ್ಯ ಅನುಪಾತವನ್ನು ಹೊಂದಿದೆ. ನಂಬಿಕೆ, ಸ್ಥಿರತೆ ಮತ್ತು ಸೇವೆಯು ಕರ್ಣಾಟಕ ಬ್ಯಾಂಕ್ನ ಆಧಾರ ಸ್ತಂಭವಾಗಿದೆ ಹಾಗೂ ಬ್ಯಾಂಕ್ ಸುಭದ್ರವಾಗಿದೆ ಎಂದು ಬ್ಯಾಂಕಿನ ಚೀಫ್ ಮ್ಯಾನೇಜರ್ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಪಲ್ಲವಿ ಟಿ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಹೇಳಿಕೆಯು ಯಾವುದೇ ಆಧಾರವಿಲ್ಲದ, ಸಂಪೂರ್ಣ ದುರುದ್ದೇಶಪೂರಿತ ಹೇಳಿಕೆಯಾಗಿದೆ. ಬ್ಯಾಂಕಿನ ಮೂಲಭೂತ ಆರ್ಥಿಕ ಸ್ಥಿತಿಯು ಬಹಳ ಗಟ್ಟಿಯಾಗಿದೆ ಮತ್ತು ಸುದೃಢವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ.
ಸಾರ್ವಜನಿಕರು ಮತ್ತು ನಮ್ಮ ಗ್ರಾಹಕರು, ಬ್ಯಾಂಕ್ನ ಅಧಿಕೃತ ಪ್ರಕಟಣೆಗಳನ್ನು ಮಾತ್ರ ಪರಿಗಣಿಸಿ, ವದಂತಿಗಳನ್ನು ನಿರ್ಲಕ್ಷಿಸಬೇಕಾಗಿ ನಾವು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.