ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ಕೆಲ ಭೂಮಾಲೀಕರು ತಮ್ಮ ಶೇತ್ಕಿ ಜಮೀನುಗಳನ್ನು ಖಾಸಗಿಯಾಗಿ ವಿಭಾಗಿಸಿ ಗುಂಟೆವಾರು ನಿವೇಶನಗಳನ್ನು ರಚಿಸಿ ಮಾರಾಟ ಮಾಡುವುದು ನಿಯಮ ಬಾಹಿರ. ಈ ರೀತಿಯ ಅನಧಿಕೃತ ಗುಂಟೆ ನಿವೇಶನಗಳ ನಿರ್ಮಾಣ ಕಡಿವಾಣಕ್ಕೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಸರ್ಕಾರದಿಂದ ಅನುಮೋದನೆಯಾದ ಮಹಾಯೋಜನೆಯಲ್ಲಿ ಪ್ರಸ್ತಾಪಿಸಿರುವ ರಸ್ತೆಗಳಲ್ಲಿ ನಿವೇಶನ, ಕಟ್ಟಡಗಳನ್ನು ಹಾಗೂ ಅನಧಿಕೃತ ಗುಂಟೆ ನಿವೇಶನ ರಚನೆ ತಡೆಗಟ್ಟುವ ಕುರಿತು ಸಭೆ ನಡೆಸಿದರು. ಗುಂಟೆ ನಿವೇಶನ ಮಾಡುವ ಭೂ ಮಾಲೀಕರಿಗೆ ಹಲವು ಬಾರಿ ತಿಳುವಳಿಕೆ ನೀಡಿದರೂ, ಗುಂಟೆ ನಿವೇಶನ ರಚನೆ ಕಂಡು ಬಂದಿದೆ. ಇದರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರದಿಂದ ಅನುಮೋದನೆಯಾದ ಮಹಾಯೋಜನೆಯ ರಸ್ತೆಗಳ ಸಮೀಕ್ಷೆ ನಡೆಸಿ, ಅತಿಕ್ರಮಣವಾದ ಜಾಗ ತೆರವುಗೊಳಿಸಿ ಎಂದು ನಗರಾಭಿವೃದ್ದಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ನಗರದ ವಿವಿಧ ರಸ್ತೆಗಳ ಮೇಲೆ ಅನಧಿಕೃತವಾಗಿ ನಿವೇಶನ ಹಾಗೂ ಕಟ್ಟಡಗಳನ್ನು ರಚಿಸುತ್ತಿರುವುದ ಕಂಡು ಬಂದಿದೆ. ಅದನ್ನು ಕೂಡಲೇ ತಡೆಗಟ್ಟಿ ಈ ಜಾಗವನ್ನು ತೆರವುಗೊಳಿಸುವ ಮೂಲಕ ಅತಿಕ್ರಮಣವಾಗದಂತೆ ನೋಡಿಕೊಳ್ಳಬೇಕು. ವಿಜಯಪುರ ನಗರದ ಯೋಜನಾ ಪ್ರದೇಶಕ್ಕೆ ಸರ್ಕಾರದಿಂದ ಅನುಮೋದನೆಯಾದ ಮಹಾಯೋಜನೆಯ ರಸ್ತೆಗಳ ಮೇಲೆ ಅನಧಿಕೃತವಾಗಿ ನಿವೇಶನ ಹಾಗೂ ಕಟ್ಟಡಗಳು ನಿರ್ಮಾಣವಾಗದಂತೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ ಸೊನಾವಣೆ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಿಜಯಪುರ ಉಪವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
----------------------------------------------ಕೋಟ್
ಅನಧಿಕೃತವಾಗಿ ನಿರ್ಮಾಣಗೊಂಡ ಬಡಾವಣೆಗಳ ನಿವೇಶನಗಳಿಗೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ವತಿಯಿಂದ ನೀರಿನ ಸಂಪರ್ಕ, ಹೆಸ್ಕಾಂ ವತಿಯಿಂದ ವಿದ್ಯುತ್ ಸಂಪರ್ಕ ಅಳವಡಿಸದೇ ತಡೆಹಿಡಿಯಿರಿ. ಸಮರ್ಪಕ ದಾಖಲೆಗಳಿದ್ದರೆ ಮಾತ್ರ ಸೌಲಭ್ಯಗಳನ್ನು ಒದಗಿಸಿ. ಸಾರ್ವಜನಿಕರು ಸಹ ದಾಖಲೆ ಇಲ್ಲದ ಅನಧಿಕೃತ ಗುಂಟೆ ನಿವೇಶನ ಖರೀದಿ ಮಾಡಬೇಡಿ. ನಗರ ಅಭಿವೃದ್ಧಿಗೆ ಸಹಕರಿಸಿ.- ಟಿ.ಭೂಬಾಲನ್, ಜಿಲ್ಲಾಧಿಕಾರಿ.