ಶಂಕರಾಚಾರ್ಯರಿಂದ ಸನಾತನ ಧರ್ಮ ಪುನರುತ್ಥಾನ

KannadaprabhaNewsNetwork |  
Published : Apr 22, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಶಂಕರಾಚಾರ್ಯ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

25 ರಿಂದ 30 ವರ್ಷದ ಆಸುಪಾಸಿನಲ್ಲಿಯೇ ಶಂಕರಾಚಾರ್ಯರು ದೇಶ ಸುತ್ತಿ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿ, ಸನಾತನ ಧರ್ಮದ ಪುನರುತ್ಥಾನಕ್ಕೆ ಶ್ರಮಿಸಿದ ಮಹಾ ಸಾಧಕ ಎಂದು ಉಪ ವಿಭಾಗಾಧಿಕಾರಿ ಡಾ.ಕೆ.ಜೆ. ಕಾಂತರಾಜ್ ಬಣ್ಣಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಇಂದಿನ ಕಾಲದಲ್ಲಿ 25-30 ವರ್ಷಕ್ಕೆ ನಮ್ಮ ಜೀವನದ ದಿಕ್ಕೇನು ಎಂಬ ಗೊಂದಲದಲ್ಲಿ ನಾವಿರುತ್ತೇವೆ. ಆದರೆ ಶಂಕರರು ಶೃಂಗೇರಿ, ಪುರಿ, ಬದರಿನಾಥ ಮತ್ತು ದ್ವಾರಕೆಯಲ್ಲಿ ಮಠಗಳನ್ನು ಸ್ಥಾಪಿಸುವ ಮೂಲಕ ಸಾಂಸ್ಕೃತಿಕ ಏಕತೆ ತಂದರೆಂದರು.

ಕೇವಲ 32 ವರ್ಷಗಳ ಅಲ್ಪಾವಧಿಯಲ್ಲೇ ಇಡೀ ದೇಶ ಸಂಚರಿಸಿ ಅದ್ವೈತ ಸಿದ್ಧಾಂತ ಪ್ರತಿಷ್ಠಾಪಿಸಿದ ಶ್ರೀ ಶಂಕರಾಚಾರ್ಯರ ಜೀವನ ಇಂದಿನ ಪೀಳಿಗೆಗೆ ಆದರ್ಶ. ಶಂಕರಾಚಾರ್ಯರು ಕೇವಲ ಆಚಾರ್ಯರಷ್ಟೇ ಅಲ್ಲದೆ, ಮಹಾನ್ ವಿದ್ವಾಂಸರು, ಕವಿಗಳು ಹಾಗೂ ಸಂಗೀತಗಾರರೂ ಆಗಿದ್ದರು. ಅವರ ‘ಭಜಗೋವಿಂದಂ'''''''' ನಂತಹ ಸ್ತೋತ್ರಗಳು ಇಂದಿಗೂ ಜನಪ್ರಿಯವಾಗಿವೆ. ಆತ್ಮ ಮತ್ತು ಪರಮಾತ್ಮ ಒಂದೇ ಎಂಬ ಅದ್ವೈತ ತತ್ವದ ಮೂಲಕ ಭೇದಭಾವಗಳನ್ನು ಮೀರಿದ ಆಧ್ಯಾತ್ಮಿಕ ಅರಿವು ಮೂಡಿಸಿದರು. ಸಮಾಜದಲ್ಲಿದ್ದ ಮೂಢನಂಬಿಕೆಗಳನ್ನು ತೊಡೆದು ಹಾಕಲು ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಲು ಶ್ರಮಿಸಿದ್ದಾರೆ ಎಂದರು.

ಚಿತ್ರದುರ್ಗ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ ಮಾತನಾಡಿ, ಜಗದ್ಗುರು ಆದಿ ಶಂಕರಾಚಾರ್ಯರು ಸಾರಿದ ಅದ್ವೈತ ಸಿದ್ಧಾಂತ ಮತ್ತು ಅವರ ಜೀವನದ ಮೌಲ್ಯಗಳು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿವೆ.

ಶಂಕರಾಚಾರ್ಯರು ಬೋಧಿಸಿದ ‘ಅದ್ವೈತ’ ಸಿದ್ಧಾಂತವು ಎಲ್ಲರಲ್ಲೂ ದೇವರನ್ನು ಕಾಣು ಎಂಬ ಉದಾತ್ತ ಸಂದೇಶ ಸಾರುತ್ತದೆ. ವಿಧಾನಸೌಧದ ಮೇಲೆ ಕೆತ್ತಲಾಗಿರುವ ‘ಸರ್ಕಾರದ ಕೆಲಸ ದೇವರ ಕೆಲಸ'''''''' ಎಂಬ ವಾಕ್ಯವು ಶಂಕರಾಚಾರ್ಯರ ತತ್ವಕ್ಕೆ ಹತ್ತಿರವಾಗಿದೆ. ನಾವು ಯಾವುದೇ ಸ್ಥಾನದಲ್ಲಿದ್ದರೂ ಸಾರ್ವಜನಿಕ ಕೆಲಸವನ್ನು ಭಕ್ತಿಯಿಂದ ಮಾಡಬೇಕು. ಮನೆ ಮತ್ತು ಸಮಾಜದಲ್ಲಿ ಹೇಗೆ ವರ್ತಿಸಬೇಕು ಎಂಬ ಸಂಸ್ಕಾರ ಮುಖ್ಯ. ಜ್ಞಾನಕ್ಕೆ ಕೊನೆಯಿಲ್ಲ, ಕಲಿಕೆ ನಿರಂತರವಾಗಿರಬೇಕು ಎಂದರು.

ಶಂಕರಾಚಾರ್ಯರ ಕುರಿತು ಉಪನ್ಯಾಸ ನೀಡಿದ ಕೆ.ಆರ್.ರಮಾದೇವಿ, ಜಗದ್ಗುರು ಆದಿ ಶಂಕರಾಚಾರ್ಯರು ಕೇವಲ 32 ವರ್ಷಗಳ ಅಲ್ಪ ಅವಧಿಯಲ್ಲಿ ಇಡೀ ಭಾರತದ ದಿಕ್ಕನ್ನೇ ಬದಲಿಸಿ, ಸಾವಿರಾರು ವರ್ಷಗಳ ಸನಾತನ ಧರ್ಮದ ಅಸ್ಮಿತೆಯನ್ನು ಇಂದಿಗೂ ಪ್ರಸ್ತುತವಾಗಿರುವಂತೆ ಮಾಡಿದ ಮಹಾನ್ ಚೇತನ ಎಂದರು.

ಶಂಕರಾಚಾರ್ಯರು ದೇಶದ ನಾಲ್ಕೂ ದಿಕ್ಕುಗಳಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪಿಸುವ ಮೂಲಕ ಭಾರತೀಯರೆಲ್ಲರೂ ಒಂದು ಎಂಬ ಭಾವನೆಯನ್ನು ಬಿತ್ತಿದರು. ವಿಶೇಷವಾಗಿ ಅವರು ರೂಪಿಸಿದ ‘ಸೇತು ಸಮುದ್ರ ಯಾತ್ರೆ’ ರಾಮೇಶ್ವರಂ ಮತ್ತು ಕಾಶಿಯ ನಡುವೆ ಅವಿನಾಭಾವ ಸಂಬಂಧವನ್ನು ಬೆಸೆಯಿತು. ರಾಮೇಶ್ವರಂನ ಮರಳನ್ನು ಕಾಶಿಯ ಗಂಗೆಯಲ್ಲಿ ಸಮರ್ಪಿಸುವುದು ಮತ್ತು ಕಾಶಿಯ ಗಂಗಾಜಲವನ್ನು ತಂದು ರಾಮೇಶ್ವರಂನ ಶಿವಲಿಂಗಕ್ಕೆ ಅಭಿಷೇಕ ಮಾಡುವ ಪದ್ಧತಿಯು ಕೇವಲ ಸಂಪ್ರದಾಯವಲ್ಲ, ಅದು ದೇಶದ ಸಾಂಸ್ಕೃತಿಕ ಏಕತೆಯ ಸಂಕೇತವಾಗಿದೆ ಎಂದರು.

ತಹಸೀಲ್ದಾರ್ ಬಿ.ಎಂ.ಗೋವಿಂದರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಚಿತ್ರದುರ್ಗ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಡಿ.ಜಿ.ಪ್ರಾಣೇಶ್ ರಾವ್, ಮುಖಂಡರಾದ ಶಂಕರ್ ಸೇರಿದಂತೆ ಮತ್ತಿತರರು ಇದ್ದರು. ಮೀನಾಕ್ಷಿ ಭಟ್ ಮತ್ತು ತಂಡದವರು ಗೀತ ಗಾಯನ ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತ, ಶೋಷಿತರ ಆಶಾ ಕಿರಣ ಅಂಬೇಡ್ಕರ್
ಕರ್ಮ ಸಿದ್ದಾಂತ ಒಡೆದು ಕಾಯಕ ಸಂಸ್ಕೃತಿ ತಂದ ಬಸವೇಶ್ವರ - ಡಾ.ಕೋಡಿರಂಗಪ್ಪ