ಕನ್ನಡ ಸಾಹಿತ್ಯಕ್ಕೆ ಸಂಚಿಹೊನ್ನಮ್ಮ ಕೊಡುಗೆ ಅಪಾರ: ಪ್ರೊ. ನಂಜುಂಡಸ್ವಾಮಿ ಹರದನಹಳ್ಳಿ

KannadaprabhaNewsNetwork |  
Published : Nov 18, 2024, 12:05 AM IST
ಸಂಚಿಹೊನ್ನಮ್ಮ, ಮಲೆಯೂರುದೇವಚಂದ್ರ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ : ಪ್ರೊ.ನಂಜುಂಡಸ್ವಾಮಿ | Kannada Prabha

ಸಾರಾಂಶ

ಸಂಚಿಹೊನ್ನಮ್ಮ, ಮಲೆಯೂರು ದೇವಚಂದ್ರ ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ಪ್ರೊ.ನಂಜುಂಡಸ್ವಾಮಿ ಹರದನಹಳ್ಳಿ ಹೇಳಿದರು. ಚಾಮರಾಜನಗರದಲ್ಲಿ ಕನ್ನಡ ರಾಜ್ಯೋತ್ಸವದ 16ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ರಾಜ್ಯೋತ್ಸವ । 50 ದಿನಗಳ ಕನ್ನಡ ಹಬ್ಬದ ಆಚರಣೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಂಚಿಹೊನ್ನಮ್ಮ, ಮಲೆಯೂರು ದೇವಚಂದ್ರ ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ಪ್ರೊ.ನಂಜುಂಡಸ್ವಾಮಿ ಹರದನಹಳ್ಳಿ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಅಯೋಜಿಸಿರುವ ಕನ್ನಡ ರಾಜ್ಯೋತ್ಸವದ 16ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

12ನೇ ಶತಮಾನದ ಅಕ್ಕಮಹಾದೇವಿ ಮತ್ತಿತರ ವಚನಕಾರ್ತಿಯರನ್ನು ಬಿಟ್ಟರೆ. ಕನ್ನಡದಲ್ಲಿ ಸ್ತ್ರೀಯರು ಕೃತಿ ರಚನೆ ಮಾಡಿದ ನಿದರ್ಶನಗಳಿಲ್ಲ. 18 ಶತಮಾನದಲ್ಲಿಯೇ ಚಿಕ್ಕದೇವರಾಯರ ಅರಮನೆಯ ಪರಿಸರದಲ್ಲಿ ಹೊನ್ನಮ್ಮ, ಶೃಂಗಾರಮ್ಮ, ಚೆಲುವಾಂಬೆಯರೆಂಬ ಕವಯಿತ್ರಿಯರಿದ್ದರು. ಶೃಂಗಾರಮ್ಮ ಬರೆದ ಪದ್ಮನಿ ಕಲ್ಯಾಣ, ರಾಣಿಯಾದ ಚೆಲುವಾಂಬೆ ಬರೆದ ವರನಂದಿ ಕಲ್ಯಾಣ ವೆಂಕಟಾಚಲ ಮಹಾತ್ಮ, ಲಾಲಿಪದ ಇವುಗಳನ್ನು ಹೆಸರಿಸಬಹದು. ಇವರಲ್ಲಿ ಹೊನ್ನಮ್ಮ ಕಾವ್ಯಶಕ್ತಿಯೇ ಪ್ರಖ್ಯಾತಿ ಹೊಂದುತ್ತದೆ ಎಂದರು.

ಹೊನ್ನಮ್ಮನಿಗೆ ಸಂಚಿಯ ಹೊನ್ನಮ್ಮ ಎನ್ನುವುದು ಪೂರ್ತಿಯಾದ ಹೆಸರು. ಸಂಚಿ ಎಂದರೆ ಚೀಲ ಹೊನ್ನಮ್ಮ ಎಲೆಯಡಕೆಯ ಚೀಲವನ್ನು ಹಿಡಿದು ಅರಮನೆಯಲ್ಲಿ ರಾಜ-ರಾಣಿಯರ ಸಮೀಪ ವರ್ತಿಯಾಗಿ ಕೆಲಸ ಮಾಡಿಕೊಂಡಿದ್ದಳು. ಅರಮನೆಯ ಉಳಿಗದ ಹೆಣ್ಣಾದ ಅವರು ಸಿಂಗರಾಯನಿಂದ ವ್ಯಾಸಂಗವನ್ನು ಪಡೆದು "ಹದಿಬದೆಯಧರ್ಮ " ಎಂಬ ಕಾವ್ಯವನ್ನು ಬರೆದು ಕವಯಿತ್ರಿಯಾದರು. ಅವರ ಬರವಣಿಗೆ ಮಾತ್ರ ಅಚ್ಚಗನ್ನಡ ಸೊಗಸಿನಿಂದ ಕೂಡಿದೆ. ಸಂಚಿಹೊನ್ನಮ್ಮ ಯಳಂದೂರಿನಲ್ಲಿ ಹುಟ್ಟಿದ್ದರು ಎಂದು ತಿಳಿಸಿದರು.

ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದ ನಿವಾಸಿಯಾಗಿದ್ದ ದೇವಚಂದ್ರ 1770ರಿಂದ 1841ರವಗರೆ ಬದುಕಿದ್ದರು. ಅವರು ಜೈನಕವಿಯಾಗಿದ್ದರು. ಅವರು ಪ್ರಥಮ ಗ್ರಂಥ ಪೂಜ್ಯವಾದ ಚರಿತೆಯನ್ನು 1792ರಲ್ಲಿ ರಚಿಸಿದರು. ರಾಮಕಥಾವತಾರವನ್ನು 1797ರಲ್ಲಿ ಬರೆದರು. ರಾಜಾವಳೀ ಕಥೆಯನ್ನು ಮುಮ್ಮುಡಿ ಕೃಷ್ಣರಾಜ ಒಡೆಯರ ಆಶ್ರಿತ ವೈದ್ಯ ಸೂರಿಪಂಡಿತರ ಪ್ರೋತ್ಸಾಹದಿಂದ 1838ರಲ್ಲಿ ಬರೆದು 1841ರಲ್ಲಿ ರಾಣಿ ದೇವಿರಾಂಬೆಗೆ ಒಪ್ಪಿಸಿದರು. ಮಲೆಯೂರು ದೇವಚಂದ್ರ ಹಾಗೂ ಯಳಂದೂರಿನ ಸಂಚಿಹೊನ್ನಮ್ಮ ಅವರು ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಅವರನ್ನು ಸ್ಮರಣೆ ಮಾಡಿಕೊಂಡು ಅವರ ಬಗ್ಗೆ ಜಿಲ್ಲೆಯ ಯುವಪೀಳಿಗೆಗೆ ತಿಳಿಸುವುದು ಒಂದು ಒಳ್ಳೆಯ ಕೆಲಸವಾಗಿದ್ದು, ನಮ್ಮ ಜಿಲ್ಲೆ, ನಮ್ಮ ಹೆಮ್ಮೆ ಎಂದರು.

ಕನ್ನಡ ಮಹಾಸಭಾದ ಅಧ್ಯಕ್ಷ ಶ್ರೀನಿವಾಸಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುತ್ತುರಾಜು, ರವಿಚಂದ್ರಪ್ರಸಾದ್ ಕಹಳೆ, ಶಾ.ಮುರಳಿ, ಪಣ್ಯದಹುಂಡಿ ರಾಜು, ಲಿಂಗರಾಜು, ನಂಜುಂಡಶೆಟ್ಟಿ, ತಮಿಳು ಸಂಘದ ಜಗದೀಶ್, ಶಿವಲಿಂಗಮೂರ್ತಿ, ಚಾ.ಸಿ.ಸಿದ್ದರಾಜು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶ ಸೇವೆಯಂತಹ ಪುಣ್ಯ ಕಾರ್ಯ ಮತ್ತೊಂದಿಲ್ಲ
ಸಾಧಕ-ಬಾಧಕ ಪರಿಗಣಿಸಿ ಸುದ್ದಿ ಪ್ರಕಟಿಸುವುದು ಒಳಿತು