ಗುತ್ತಲ: ಮನುಷ್ಯ ತನ್ನ ಜೀವನದಲ್ಲಿ ಧರ್ಮದ ಆಚರಣೆಗಳನ್ನು ಪಾಲಿಸಿದರೆ ಆತನ ಜೀವನ ಪಾವನವಾಗುವುದು ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ವೀರಶೈವ ಧರ್ಮ ಪರಂಪರೆಯಲ್ಲಿ ಲಿಂಗದೀಕ್ಷೆ ತನ್ನದೇಯಾದ ಮಹತ್ವವನ್ನು ಹೊಂದಿದೆ. ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಲಿಂಗದೀಕ್ಷಾ ಸಂಸ್ಕಾರವು ಸಹ ಒಂದಾಗಿದೆ. ವೀರಶೈವಧರ್ಮದಲ್ಲಿ ಹೆಣ್ಣುಗರ್ಭವತಿಯಾದ 8ನೇ ಮಾಸದಲ್ಲಿ ಗರ್ಭಕ್ಕೆ ಲಿಂಗದೀಕ್ಷಾ ಸಂಸ್ಕಾರ ನೀಡುವುದು ವೀರಶೈವಧರ್ಮದಲ್ಲಿ ಮಾತ್ರ ಕಾಣಲು ಸಾಧ್ಯ, ಆದ್ದರಿಂದ ಪ್ರತಿಯೊಬ್ಬ ವೀರಶೈವರು ಲಿಂಗ ದೀಕ್ಷಾ ಸಂಸ್ಕಾರವನ್ನು ಹೊಂದಬೇಕು, ಭಗವಂತನ ಸಾಕ್ಷಾತ್ಕಾರಗೊಳಿಸುವಲ್ಲಿ ಲಿಂಗದೀಕ್ಷೆ ಸಾಧನವಾಗಿದೆ, ಲಿಂಗದೀಕ್ಷೆ ಪಡೆಯಲು ಯಾವುದೇ ಜಾತಿಧರ್ಮ ಲಿಂಗ ಭೇದವಿಲ್ಲದೆ ಪಡೆಯಬಹುದಾಗಿದೆ ಎಂದರು.
ಶ್ರೀಗಳಿಂದ 25 ಜಂಗಮ ವಟುಗಳಿಗೆ ಅಯ್ಯಾಚಾರ, 5 ಜನ ಭಕ್ತರಿಗೆ ಶಿವದೀಕ್ಷಾ ಸಂಸ್ಕಾರವನ್ನು ಶ್ರೀಗಳು ನೀಡಿದರು. ಬೆಳಗಿನ ಜಾವ ದೀಕ್ಷಾ ವಟುಗಳಿಗೆ ಮಂಗಲಸ್ನಾನ, ಸುರಗಿಕಾರ್ಯ ಹಾಗೂ ಶ್ರೀಮಠದ ಉಭಯ ಶ್ರೀಗಳ ಗದ್ಗುಗೆಗಳಿಗೆ ರುದ್ರಾಭಿಷೇಕ, ಮಹಾ ಮಂಗಳಾರುತಿ ಜರುಗಿತು. ರಂಭಾಪುರಿ ಪೀಠದ ಗುರುಕುಲದ ಪ್ರಾಚಾರ್ಯ ಸಿದ್ದಲಿಂಗಸ್ವಾಮಿ ಹಾಗೂ ಮಂಜಯ್ಯ ಕಿತ್ತೂರು ,ಮಹೇಶ ಹಾವೇರಿಮಠ ಇವರುಗಳಿಂದ ದೀಕ್ಷಾ ಸಂಸ್ಕಾರದ ಪೂಜಾ ವಿಧಿ ವಿಧಾನಗಳು ನೇರವೇರಿದವು,ಕಾರ್ಯಕ್ರಮದಲ್ಲಿ ಹಾವೇರಿ ಸೇರಿದಂತೆ ಹುಬ್ಬಳ್ಳಿ, ದಾವಣಗೆರೆ, ಧಾರವಾಡ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತಾಧಿಗಳು ಆಗಮಿಸಿದ್ದರು.