ಸೋಮರಡ್ಡಿ ಅಳವಂಡಿ ಕೊಪ್ಪಳ
ತಾಲೂಕಿನ ಕೆಸಲಾಪುರ ಗ್ರಾಮದ ತುಂಗಭದ್ರಾ ನದಿಯಲ್ಲಿ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ರಾತ್ರಿ ಪೂರ್ತಿ ಎಗ್ಗಿಲ್ಲದೆ ಮರಳು ಸಾಗಿಸಲಾಗುತ್ತದೆ. ಈ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೂ ಸಂಬಂಧಪಟ್ಟವರು ಜಾಣಕುರುಡು ನಡೆ ಅನುಸರಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.ರಾತ್ರಿ 11 ಗಂಟೆಯಾಗುತ್ತಿದ್ದಂತೆ ಅಕ್ರಮ ಮರಳು ದಂಧೆ ಪ್ರಾರಂಭವಾಗುತ್ತದೆ. 50-60 ಟ್ರ್ಯಾಕ್ಟರ್ಗಳಲ್ಲಿ ಮರಳನ್ನು ಹೇರಿಕೊಂಡು ಆಕ್ರಮವಾಗಿ ಸಾಗಿಸಲಾಗುತ್ತದೆ. ಟ್ರ್ಯಾಕ್ಟರ್ಗಳಿಗೆ ಅನುಮತಿ ಇಲ್ಲದೇ ಸಾಗಿಸಲಾಗುತ್ತದೆ. ಇದರಿಂದ ತುಂಗಭದ್ರಾ ನದಿ ಬರಿದಾಗುತ್ತಿದ್ದು, ರೈತರ ಪಂಪಸೆಟ್ ಗಳಿಗೆ ನೀರಿಲ್ಲದಂತಾಗುತ್ತಿರುವುದು ಒಂದಡೆಯಾದರೆ ಮತ್ತೊಂದೆಡೆ ಸುತ್ತಮುತ್ತಲ ಗ್ರಾಮಗಳಿಗೆ ನೀರು ಪೂರೈಕೆಗೂ ಸಮಸ್ಯೆಯಾಗುತ್ತಿದೆ.
ರೈತರ ಪಂಪಸೆಟ್ ಪೈಪ್ ಮತ್ತು ವೈಯರ್ಗಳನ್ನು ಕಿತ್ತು ಹಾಕಿ ಜೆಸಿಬಿ ಮೂಲಕ ಮರಳನ್ನು ತುಂಬಿಕೊಂಡು ಹೋಗಲಾಗುತ್ತದೆ. ಇಡೀ ನದಿಯ ಒಡಲು ಗುಂಡಿಗಳೇ ತುಂಬಿ ಕೊಂಡಿವೆ. ಮರಳು ಖಾಲಿಯಾಗುತ್ತಿದ್ದು, ನದಿಯುದ್ದಕ್ಕೂ ನೀರಿನ ಅಭಾವ ಎದುರಾಗುತ್ತಿದೆ.ಅಂತರ್ಜಲ ಕುಸಿತ:ನದಿಯುದ್ದಕ್ಕೂ ಆಕ್ರಮ ಮರಳು ದಂಧೆ ನಡೆಯುತ್ತಿರುವುದು ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಕುಸಿಯಲು ಕಾರಣವಾಗಿದೆ. ಇದರಿಂದ ಸುತ್ತಮುತ್ತಲಿನ ರೈತರು ತೊಂದರೆ ಅನುಭವಿಸುವಂತಾಗಿದೆ. ನದಿ ಸಂರಕ್ಷಣೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ಮರಳು ದಂಧೆ ನಿಯಂತ್ರಣ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.
ಪೊಲೀಸರ ಜಾಣ ನಡೆ: ಮರಳು ದಂಧೆ ಕುರಿತು ಸಾರ್ವಜನಿಕರು 112ಕ್ಕೆ ಕರೆ ಮಾಡಿ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ಅವರ ಸಮ್ಮುಖದಲ್ಲಿಯೇ ಮರಳು ಟ್ರ್ಯಾಕ್ಟರ್ಗಳು ಹೋಗುತ್ತಿದ್ದರೂ ಪ್ರಶ್ನಿಸುವದಿಲ್ಲ. ಇದು ಸಾರ್ವಜನಿಕರಿಗೆ ತೀವ್ರ ಬೇಸರನ್ನುಂಟು ಮಾಡಿದೆ. ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಎಲ್ಲರಿಗೂ ಮಾಹಿತಿ ನೀಡಿದರೂ ಮರಳು ದಂಧೆ ನಿಯಂತ್ರಣ ಮಾಡುವ ದಿಸೆಯಲ್ಲಿ ಕ್ರಮವಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ, ಸಂಬಂಧಪಟ್ಟ ಠಾಣೆಯ ಪಿಐಗೆ ಕರೆ ಮಾಡಿ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಾರ್ವಜನಿಕರು ತಮ್ಮ ಪೋನ್ನಲ್ಲಿ ದೂರು ನೀಡಿದ್ದನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಯಾವುದೇ ಕ್ರಮವಾಗದ ಕುರಿತೂ ಸಹ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇಷ್ಟಾದರೂ ಪೊಲೀಸರು ಮಾತ್ರ ತಮಗೂ ಇದಕ್ಕೂ ಸಂಬಂಧ ಇಲ್ಲದಂತೆ ಇದ್ದಾರೆ.
ಇನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರಿಗೆ ದೂರು ನೀಡಿದ್ದಾರೆ. ಆದರೂ ಇದುವರೆಗೂ ಮರಳು ದಂಧೆ ನಿಯಂತ್ರಣ ಮಾಡುವ ಪ್ರಯತ್ನ ಯಾವೊಬ್ಬ ಅಧಿಕಾರಿಗಳಿಂದಲೂ ಆಗುತ್ತಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸುತ್ತಾರೆ.ದಂಧೆ ಅವ್ಯಾಹತ: ಮರಳು ದಂಧೆ ಈ ಹಿಂದೆ ನಿಯಂತ್ರಣದಲ್ಲಿತ್ತು, ದೂರು ನೀಡಿದರೆ ಕ್ರಮವಾಗುತ್ತಿತ್ತು. ಆದರೆ, ಸರ್ಕಾರ ಬದಲಾದ ಮೇಲೆ ಮರಳು ದಂಧೆ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಜನಪ್ರತಿನಿಧಿಗಳು ಸಾಥ್ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಮರಳು ದಂಧೆಯ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೂ ಕ್ರಮ ವಹಿಸುತ್ತಿಲ್ಲ. ಕರೆ ಮಾಡಿ, ಖಚಿತ ಮಾಹಿತಿ ನೀಡಿದ್ದರೂ ಮರಳು ದಂಧೆ ನಿಯಂತ್ರಣ ಮಾಡುತ್ತಿಲ್ಲ ಎಂದು ರೈತ ಶಿವಕುಮಾರ ಹಿರೇಮಠ ಹೇಳಿದರು.ಮರಳು ದಂಧೆ ಮಿತಿ ಮೀರಿದ್ದು, ಇದರ ವಿರುದ್ಧ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ, ನಿಯಂತ್ರಣ ಮಾಡದಿದ್ದರೆ ಹೋರಾಟ ಮಾಡುತ್ತೇವೆ ಎಂದು ಹೋರಾಟಗಾರ ಶರಣಪ್ಪ ಜಡಿ ಹೇಳಿದರು.