ಸಂಡೂರ ಮಾವು ಮಾರುಕಟ್ಟೆ ಲಗ್ಗೆ ಇಡಲು ಸಿದ್ಧ

KannadaprabhaNewsNetwork |  
Published : Apr 30, 2025, 12:38 AM IST
ಸಂಡೂರಿನ ಮಾವಿನ ತೋಟವೊಂದರಲ್ಲಿ ತೊನೆದಾಡುತ್ತಿರುವ ಮಾವಿನ ಕಾಯಿಗಳೊಂದಿಗೆ ತೋಟದ ಗುತ್ತಿಗೆದಾರ ಕೆ.ಮಂಜುನಾಥ | Kannada Prabha

ಸಾರಾಂಶ

ತಾಲೂಕಿನಲ್ಲಿ ಪ್ರಮುಖವಾಗಿ ಮಲ್ಲಿಕಾ, ಕೇಸರಿ, ಮಲಗೋಬ, ಬೆನೆಸಾನ್, ದಸೆರಾ, ಲಾಂಗ್ರಾ, ತೋತಾಪುರಿ, ಬಾದಾಮಿ, ರಸಪೂರಿ, ಜಹಂಗಿರಿ, ದಿಲ್ ಪಸಂದ್, ಬೆಳ್ಳಿಗುಂಡು ಮುಂತಾದ ತಳಿಯ ಮಾವ

ವಿ.ಎಂ. ನಾಗಭೂಷಣ ಸಂಡೂರು

ಗಣಿನಾಡು ಸಂಡೂರು ತಾಲೂಕು ಪ್ರಕೃತಿ ಸೌಂದರ್ಯಕ್ಕೆ ಹೆಸರಾದಂತೆ ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವಿನ ತೋಟಗಳಿಗೂ ಹೆಸರಾಗಿದೆ. ಇಲ್ಲಿನ ಮಾವಿನ ತೋಟಗಳಲ್ಲಿ ತೂಗಾಡುತ್ತಿರುವ ಮಾವು ಇದೀಗ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿದೆ.

ತಾಲೂಕಿನಲ್ಲಿ ೩೦೦-೩೫೦ ಎಕರೆ ಪ್ರದೇಶದಲ್ಲಿ ಮಾವನ್ನು ಬೆಳೆಯಲಾಗುತ್ತಿದೆ. ಅವುಗಳಲ್ಲಿ ಹೆಚ್ಚಾಗಿ ಹಳೆಯ ತೋಟಗಳಿವೆ. ತಾಲೂಕಿನಲ್ಲಿ ಹೆಚ್ಚಾಗಿ ಮಾವಿನ ತೋಟಗಳಿರುವುದು ಯಶವಂತನಗರ ಹಾಗೂ ಸಂಡೂರಿನಲ್ಲಿ. ಉಳಿದಂತೆ ಬಂಡ್ರಿ, ತೋರಣಗಲ್ಲು, ರಾಜಾಪುರ ಮುಂತಾದೆಡೆ ಸ್ವಲ್ಪ ಪ್ರಮಾಣದಲ್ಲಿ ಮಾವಿನ ತೋಟಗಳನ್ನು ಅಭಿವೃದ್ಧಿಪಡಿಸಲಾಗಿದೆ.

ವೈವಿಧ್ಯಮಯ ಮಾವು ಲಭ್ಯ: ತಾಲೂಕಿನಲ್ಲಿ ಪ್ರಮುಖವಾಗಿ ಮಲ್ಲಿಕಾ, ಕೇಸರಿ, ಮಲಗೋಬ, ಬೆನೆಸಾನ್, ದಸೆರಾ, ಲಾಂಗ್ರಾ, ತೋತಾಪುರಿ, ಬಾದಾಮಿ, ರಸಪೂರಿ, ಜಹಂಗಿರಿ, ದಿಲ್ ಪಸಂದ್, ಬೆಳ್ಳಿಗುಂಡು ಮುಂತಾದ ತಳಿಯ ಮಾವನ್ನು ಬೆಳೆಯಲಾಗುತ್ತಿದೆ.

ಮಾರುಕಟ್ಟೆಗೆ ಬರಲು ಇನ್ನೂ ೧೦-೧೫ ದಿನ:ಈಗಾಗಲೆ ಕೆಲವರು ಹೊರಗಡೆಯಿಂದ ಮಾವಿನ ಹಣ್ಣನ್ನು ತಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ. ಆದರೆ, ಸಂಡೂರು ತಾಲೂಕಿನಲ್ಲಿ ಬೆಳೆಯುವ ಮಾವು ಮಾರುಕಟ್ಟೆಗೆ ಬರಲು ಇನ್ನೂ ೧೦-೧೫ ದಿನ ಹೋಗಬೇಕು ಎಂದು ಮಾವಿನ ಹಣ್ಣಿನ ವ್ಯಾಪಾರಿಗಳು ಹೇಳುತ್ತಾರೆ.

ಬಿರುಗಾಳಿಯಿಂದ ತೊಂದರೆ:ಮಾವಿನ ತೋಟಗಳ ಗುತ್ತಿಗೆದಾರ ಕೆ. ಮಂಜುನಾಥ್ ಮಾತನಾಡಿ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾವಿನ ಫಸಲು ಚೆನ್ನಾಗಿದೆ. ಆದರೆ, ಕೆಲ ದಿನಗಳಿಂದ ಬೀಸುತ್ತಿರುವ ಬಿರುಗಾಳಿಗೆ ಮಾವಿನ ಕಾಯಿಗಳು ಉದುರುತ್ತಿವೆ. ಗಾಳಿಯಿಂದ ತೊಂದರೆಯಾಗುತ್ತಿದೆ. ಪ್ರಕೃತಿ ಸಹಕರಿಸಬೇಕಿದೆ ಎಂದರು.

ಈಗಾಗಲೆ ಸಂಡೂರಿನ ಮಾರುಕಟ್ಟೆಗೆ ಮಾವಿನ ಹಣ್ಣುಗಳು ಲಗ್ಗೆ ಇಟ್ಟಿದ್ದರೂ ತಾಲೂಕಿನಲ್ಲಿ ಬೆಳೆದ ಮಾವು ಮಾರುಕಟ್ಟೆಗೆ ಬರಲು ಇನ್ನೂ ೧೦-೧೫ ದಿನ ಬೇಕಿದೆ. ಮಾವಿನ ತೋಟಗಳಲ್ಲಿನ ಮಾವು ಬಲಿತು ಹಣ್ಣಾಗುವ ಹಂತಕ್ಕೆ ಬಂದ ಮೇಲೆಯೇ ಅವುಗಳನ್ನು ಮರಗಳಿಂದ ಇಳಿಸಿ ಸ್ವಾಭಾವಿಕವಾಗಿ ಹಣ್ಣು ಮಾಡಿ ಮಾರಾಟ ಮಾಡುವುದರಿಂದ ಸ್ವಲ್ಪ ಸಮಯ ಹಿಡಿಯುತ್ತದೆ ಎನ್ನಲಾಗುತ್ತಿದೆ.

ತಾಲೂಕಿನಲ್ಲಿ ೩೦೦-೩೫೦ ಎಕರೆಯಷ್ಟು ಪ್ರದೇಶದಲ್ಲಿ ಮಾವನ್ನು ಬೆಳೆಯಲಾಗುತ್ತಿದೆ. ಈ ವರ್ಷ ಮಾವಿನ ಫಸಲು ಉತ್ತಮವಾಗಿದೆ. ಸಂಡೂರು ಭಾಗದ ಹಣ್ಣುಗಳು ಮಾರುಕಟ್ಟೆಗೆ ಬರಲು ಇನ್ನೂ ೧೫ ದಿನ ಬೇಕಿದೆ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕ ಹನುಮಪ್ಪ ನಾಯಕ ಹೇಳಿದ್ದಾರೆ.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌